ಶವ ಹೊತ್ತೊಯ್ಯಲು ಗ್ರಾಮಕ್ಕೆ ಬಂದ ಚಿರತೆ

1 year ago

ತುಮಕೂರು: ದನಕರುಗಳಿಗೆ ಮೇವು ತರಲು ಹೊಲಕ್ಕೆ ಹೋಗಿದ್ದ ಮಹಿಳೆಯೊಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದಾರೆ . ದಾಳಿ ಮಾಡಿ ಕೊಂದ ಮಹಿಳೆಯ ಮೃತ ದೇಹವನ್ನು ತೆಗೆದುಕೊಂಡು ಹೋಗಲು ಚಿರತೆ ನಾಡಿಗೆ ಬಂದ ಅಚ್ಚರಿಯ ಘಟನೆ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನ ಕಂಬಾಳು ಗೊಲ್ಲರಹಟ್ಟಿಯಲ್ಲಿ ನಡೆದಿದೆ.

ಗೊಲ್ಲರಹಟ್ಟಿಯ ಕರಿಯಮ್ಮ (55) ಭಾನುವಾರ ದನಕರುಗಳಿಗೆ ಮೇವು ತರಲು ಜಮೀನಿಗೆ ತೆರಳಿದ್ದರು. ಈ ವೇಳೆ ಚಿರತೆ ಮಹಿಳೆಯ ಮೇಲೆ ದಾಳಿ ಮಾಡಿದೆ. ದಾಳಿ ಮಾಡಿದ ಚಿರತೆ ಮಹಿಳೆಯ ರುಂಡವನ್ನು  ತಿಂದಿದ್ದರಿಂದ ಮುಂಡ ಮಾತ್ರ ಪತ್ತೆ ಆಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ನಂತರ ಮೃತದೇಹವನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ  ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಆಸ್ಪತ್ರೆಯಿಂದ ಮೃತದೇಹವನ್ನು ಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿತ್ತು. ಈ ವೇಳೆ ಎಲ್ಲಿಯೋ ಇದ್ದ ಚಿರತೆ ಏಕಾಏಕಿ ಪ್ರತ್ಯಕ್ಷವಾಗಿ ಪೊಲೀಸ್ ಹಾಗೂ ಸಾರ್ವಜನಿಕರನ್ನೇ ಬೆದರಿಸಿ ಮೃತದೇಹವನ್ನು ಹೊತ್ತೊಯಲು  ಯತ್ನಿಸಿದೆ.

ಅಲ್ಲೇ ಇದ್ದ ಸಾರ್ವಜನಿಕರು ಕೂಡಲೇ ದೊಣ್ಣೆ, ಮಚ್ಚು ಮತ್ತು ಟಾರ್ಚ್ ಬಳಸಿ ಮತ್ತೊಮ್ಮೆ ಚಿರತೆ ಬಾಯಿಯಿಂದ ಮೃತದೇಹವನ್ನು ಬಿಡಿಸಿಕೊಂಡಿದ್ದಾರೆ. ಸಿನೆಮಾ ಶೈಲಿಯ ಈ ಭಯಾನಕ ಘಟನೆಯಿಂದ ಗ್ರಾಮಸ್ಥರು ಆತಂಕಿತರಾಗಿದ್ದಾರೆ.

Leave a Reply