ಸರ್ಕಾರದ ವ್ಯವಸ್ಥೆ ಹಾಳು ಮಾಡಲು ಕೈಹಾಕಿದರೆ ನಾವು ಸುಮ್ಮನಿರಬೇಕೇ?: ದಿನೇಶ್ ಗುಂಡೂರಾವ್

2 years ago

ಬೆಂಗಳೂರು: ಸಂವಿಧಾನ ಪಾಲನೆ ಮತ್ತು ಸಂವಿಧಾನ ಬದ್ಧವಾಗಿ ರಚನೆಯಾಗಿರುವ ಸರ್ಕಾರಗಳ ರಕ್ಷಣೆಯ ಜವಾಬ್ದಾರಿ ರಾಜ್ಯಪಾಲರ ಕರ್ತವ್ಯವಾಗಿದೆ. ಆದರೆ ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇದನ್ನು ಮರೆತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ರಾಜ್ಯಪಾಲರ ವಿರುದ್ಧ ದಿನೇಶ್ ಗುಂಡೂರಾವ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯದಲ್ಲಿ ಸರ್ಕಾರ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುವುದು ರಾಜ್ಯಪಾಲರ ಜವಾಬ್ದಾರಿ. ಆದರೆ, ಸಂವಿಧಾನ ಪಾಲಕರೇ ಷಡ್ಯಂತ್ರದಲ್ಲಿ ಶಾಮೀಲಾದರೆ, ಸರ್ಕಾರದ ವ್ಯವಸ್ಥೆ ಹಾಳು ಮಾಡಲು ಕೈಹಾಕಿದರೆ ನಾವು ಸುಮ್ಮನಿರಬೇಕೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಆಡಳಿತ ವ್ಯವಸ್ಥೆಯನ್ನು ಹಾಳುಗೆಡುವಲು ಸಂಚು ನಡೆಯುತ್ತಿದೆ. ರಾಜ್ಯಪಾಲರ ನಡೆ‌ ಅಭಿವೃದ್ಧಿ ಕೆಲಸಗಳ‌ ಮೇಲೆ ಪರಿಣಾಮ ಬೀರುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಅತ್ಯಂತ ಖಂಡನೀಯ. ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಅವರು ಪ್ರಯತ್ನ ನಡೆಸಿದ್ದಾರೆ. ಚುನಾಯಿತ ಸರ್ಕಾರದ‌ ಮೇಲೆ ಹಾಗೂ ಕರ್ನಾಟಕದ ಜನತೆ ಮೇಲೆ ನಡೆಸಿರುವ ದಾಳಿ ಇದು. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಎಂದರು.

Leave a Reply