ನಿನ್ನೆ ನಯನ ರಂಗಮಂದಿರದಲ್ಲಿ ಕಾಜಾಣಾ ಸಂಸ್ಥೆ ಪ್ರಸ್ತುತ ಪಡಿಸಿದ ನಾಟಕ ಚಿಟ್ಟೆ ಪ್ರದರ್ಶನವಿತ್ತು. ಈ ಪ್ರಸ್ತುತಿ, ಮಕ್ಕಳ ಮನಸ್ಥಿತಿಯನ್ನು ಅಭಿವ್ಯಕ್ತ ಪಡಿಸುವ ನಾಟಕ. ಗೋಕುಲ ಸಹೃದಯ ಎಂಬ ಶಾಲೆಯ ಬಾಲಕನು ಅಭಿನಯಿಸಿದ ಏಕ ವ್ಯಕ್ತಿ ಪ್ರದರ್ಶನ.
ರಂಗಭೂಮಿಯ ಮನೋಜ್ಞ ಭಾವನೆಗಳನ್ನು, ರಮ್ಯ ಕಾವ್ಯಾತ್ಮಕ ಗುಣಗಳ, ಯಾವುದೇ ವಿಶೇಷ ವಿಷಯದ ಮೇಲೂ ಸಂಪೂರ್ಣ ಅಧ್ಯಯನ ಮಾಡಿ ನಾಟಕ ರಚಿಸಬಲ್ಲ ನಾಟಕಕಾರ ಬೇಲೂರು ರಘುನಂದನ ಅವರ ರಚನೆಯ ನಾಟಕ ಮತ್ತು ಈಗಾಗಲೇ ತಮ್ಮ ಭಾವನಾತ್ಮಕ, ಮನೋಜ್ಞ ಅಭಿನಯದ ಏಕವ್ಯಕ್ತಿ ಪ್ರಸ್ತುತಿಗಳ ಮುಖಾಂತರ ಮನೆಮಾತಾಗಿರುವ ಆತ್ಮೀಯ ಗೆಳೆಯ ಕೃಷ್ಣಮೂರ್ತಿ ಕವತ್ತಾರ್ ಅವರ ನಿರ್ದೇಶನ ಈ ಪ್ರಯೋಗದ ವಿಶೇಷಗಳಾಗಿತ್ತು…
ನಾಟಕವು ಒಬ್ಬ ಮುಗ್ಧ ಬಾಲಕ ತನ್ನ ಮಾನಸ ಗೆಳೆಯನಾದ “ಕೆರೆ”ಯ ದಡದಲ್ಲಿ ಬಣ್ಣಬಣ್ಣದ ಹಾರುವ ಚಿಟ್ಟೆಗಳನ್ನು ಹಿಂಬಾಲಿಸಿಕೊಂಡು ಹಿಡಿಯುವ ಪ್ರಯತ್ನಗಳ ಜೊತೆಗೆ ಪ್ರಾರಂಭವಾಗುತ್ತದೆ. ಅದರೊಟ್ಟಿಗೆ, ಅವನ ಬಣ್ಣ ಬಣ್ಣದ ಕನಸುಗಳನ್ನು ಬಿಚ್ಚುವ, ಹುಸಿಮುನಿಸಿನೊಂದಿಗೆ ತನ್ನ ನಿರಾಶಗಳನ್ನೂ, ಬದುಕಿನ ಬವಣೆಗಳನ್ನೂ ಚಿಟ್ಟೆಗಳಿಗೂ ಮತ್ತು ತನ್ನ ಮಾನಸ ಗೆಳೆಯ ಕೆರೆಗೂ ಸ್ವಗತವಾಗಿ ಹೇಳುತ್ತಾ, ತನ್ನ ಕೌಟುಂಬಿಕ ವಾಸ್ತವ ಪರಿಚಯ ಮಾಡಿಕೊಳ್ಳುತ್ತಾನೆ… ಪ್ರೇಕ್ಷಕರಿಗೆ ಮಾಡಿಸುತ್ತಾನೆ…
ಅಂತಿಮವಾಗಿ, ತಾನೇ ಬಣ್ಣ ಕಳೆದುಕೊಂಡ ಚಿಟ್ಟೆಯಾಗಿ, ಕೆರೆಯ ಆಳಕ್ಕಿಂತ ಆಳವಾದ ತನ್ನ ಕಷ್ಟ-ಕಾರ್ಪಣ್ಯಗಳ ಸಂಗತಿಗಳಲ್ಲಿ ಮುಳುಗಿ-ಎದ್ದು ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸುತ್ತಾನೆ. ಕೈಗೆಟುಕುವ ಸ್ಥಿತಿಯಲ್ಲಿ ಚಿಟ್ಟೆ ಇದ್ದರೂ ಸಹ, ಹಿಡಿಯುವ ಆಸಕ್ತಿ ಬಿಟ್ಟು, ಅದನ್ನು ಸ್ವತಂತ್ರವಾಗಿ ಹಾರಿಸಿ, ಖಿನ್ನತೆಯ ಖುಷಿಯ ಮನೋಭೂಮಿಕೆಯ ಹಂತ ತಲುಪಿರುತ್ತಾನೆ…. ಮುಗ್ಧತೆಯಿಂದ ಆಚೆ ಬಂದು ತನ್ನ ವಯಸ್ಸಿಗೆ ಮೀರಿದ ಫ್ರೌಢಿಮೆಯನ್ನು ಸಾಧಿಸಿರುತ್ತಾನೆ…
ಏಕವ್ಯಕ್ತಿ ಪ್ರಸ್ತುತಿ ಮುಗಿದಿದ್ದರೂ ಚಪ್ಪಾಳೆ ತಟ್ಟುವ, ಅಭಿನಂದಿಸುವ ಮನೋಸ್ಥಿತಿ ಪ್ರೇಕ್ಷಕನಿಗೆ ಇರುವುದಿಲ್ಲ… ಅಂತಹ ಭಾವುಕಮಯ ನಾಟಕ ಚಿಟ್ಟೆ… ನಮಗೆ ನಾಟಕದಲ್ಲಿ ಮೂರು ಪ್ರಮುಖ ಅಂಶ ಎದ್ದು ಕಾಣುತ್ತದೆ.. ಮೊದಲನೆಯದು, ಚಿಟ್ಟೆಗಳನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಮುಗ್ಧ ಬಾಲಕ…. ಎರಡನೇ ಸಂಗತಿ, ತನ್ನ ವಯಸ್ಸಿಗೆ ಮೀರಿದ ಬವಣೆಗಳನ್ನು ಭಿತ್ತರಿಸುವ ಮುಗ್ದ ಬಾಲಕ; ಮತ್ತು ಅಂತಿಮವಾಗಿ, ಹಸಿವು ಮತ್ತು ಹಸಿವನ್ನು ನೀಗಿಸಿಕೊಳ್ಳಲು ಮಾಡುವ ಕಳ್ಳತನ; ಈ ಮೂರೂ ಅಂಶಗಳು ಒಂದಕ್ಕೊಂದು ನೇರ ಸಂಬಂಧ ಇರುವಂತಹವು…
ಎಲ್ಲೋ ಒಂದು ಕಡೆ, ಒಮ್ಮೊಮ್ಮೆ, ತನ್ನ ಹಸಿವನ್ನು ಮತ್ತು ಕೌಟುಂಬಿಕ ಬವಣೆಗಳನ್ನು ಮರೆಯಲು, ಹೃದಯವನ್ನು ಹಗುರಾಗಿಸಿಕೊಳ್ಳಲು ಅವನು ತನ್ನ ಮಾನಸ ಸ್ನೇಹಿತ ಕೆರೆ ಹತ್ತಿರ ಬಂದಿರುವನೇನೋ; ಚಿಟ್ಟೆ ಹಿಡಿಯುವ ನಾಟಕವಾಡುತಿದ್ದಾನೇನೋ ಅನ್ನಿಸುವ ಪರಿ; ಈ ಬಣ್ಣದ ಚಿತ್ತಾರದ ದೃಶ್ಯಗಳಿಂದ ಏಕಾಏಕಿ ತಾತ್ವಿಕ ಮನೋಭಾವಕ್ಕೆ ಪ್ರೇಕ್ಷಕರನ್ನು ದೂಡುವ, ಬಲಿಷ್ಠ ಪ್ರಶ್ನೆ… ಹಸಿವು ಎಂದರೇನು?
ಮತ್ತು ಮೂರನೆಯದು, ಹಸಿವಿನಲ್ಲಿ ಸತ್ತು ಬೆಂದಿರುವ ಬಾಲಕನಿಗೆ ಮತ್ತಷ್ಟು ಹಸಿವನ್ನು ಉಂಟುಮಾಡುವ ಊಟದ ಘಮಲು ಮತ್ತು ಹಸಿವನ್ನು ನೀಗಿಸಿಕೊಳ್ಳಲು ತಾಯಿ ನೀಡುವ ಕಳ್ಳತನ ಮಾಡುವ ಪ್ರೇರಕ ಸಲಹೆ…
ಇದು ಹೊಟ್ಟೆ ತುಂಬಿದ ಮನುಷ್ಯರಿಗೆ ಎಷ್ಟೇ ಅತಾರ್ಕಿಕವಾಗಿ ಕಂಡರೂ ಸಹ, ಶತಮಾನಗಳಿಂದ ನಮ್ಮ ಸಾಂಸ್ಕೃತಿಕ ಪರಿಧಿಯಲ್ಲಿ ಇರುವ ಉಪಮೇಯ, ಇದೇ ಬಡತನ ಮತ್ತು ಹಸಿವಿಗಾಗಿ ಇಂಗ್ಲೆಂಡ್ ನಲ್ಲಿ ಬ್ರೆಡ್ ಕದಿಯುವ ಬಾಲಕ…. ಮತ್ತು ಬಂಡವಾಳಶಾಹಿಗಳ ನೈತಿಕತೆಗೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುವ ಬಾಲಕ…
ಈ ಉಪಮೇಯ ಬಾಲಿವುಡ್ ಚಿತ್ರಗಳಲ್ಲೂ ಬಳಕೆಯಾಗಿ, ಜಗತ್ತಿನ ಅತ್ಯಂತ ಬಲಾಢ್ಯ ಬಂಡವಾಳಿಗರ, ಶ್ರೀಮಂತರ ಪಟ್ಟಕ್ಕೆ ಅಮಿತಾಬ್ ಬಚ್ಚನ್ ಅವರನ್ನು ಏರಿಸಿದೆಯಾದರೂ, ಭಾರತದ ಹಸಿವು ಮತ್ತು ಬಡತನದ ರೇಖೆಯನ್ನು ಅಳಿಸಲಾಗಿಲ್ಲ ಎನ್ನುವುದು ವಾಸ್ತವ ದುರಂತ.
ಮಕ್ಕಳಿಗೆ ಕಳ್ಳತನಕ್ಕೆ ಪ್ರಚೋದನೆ ಎನ್ನುವ ಅಂಶ ಆ ಕ್ಷಣದ ವಾಸ್ತವ ಅರಿವಿನ ವಾತಾವರಣದಲ್ಲಿ ಗಟ್ಟಿಯಾಗಿ ನಿಲ್ಲುವುದಿಲ್ಲ…
ಅನುಕಂಪದ, ಭಾವಪೂರ್ಣ ಘಳಿಗೆಯ ದೃಶ್ಯ-ಮಾತುಗಳ ಸಂಯೋಜನೆಯಲ್ಲಿ ಆ ಕ್ಷಣಕ್ಕೆ ಅದು ಸರಿ ಎನ್ನಿಸುತ್ತದೆ; ಮತ್ತು ಆ ಬಾಲಕ ಮಾಡುವ ಕಳ್ಳತನ, ತನ್ನ ತಾಯಿಯೇ ಶತಮಾನಗಳ ಹಿಂದೆ, ಇದೇ ತರಹದ ಮತ್ತೊಂದು ಬವಣೆಯನ್ನು ತಾತ್ಕಾಲಿಕವಾಗಿ ನೀಗಿಸಿಕೊಳ್ಳಲು ಅಡ ಇಟ್ಟ ಬಿಂದಿಗೆಗಳು ಎನ್ನುವ ವಿಸ್ತೃತ ಚೌಕಟ್ಟಿನಲ್ಲೂ ನೋಡುವ ಸಾಧ್ಯತೆಗಳು ಇರುತ್ತದೆ…
ಮನುಷ್ಯ ಅಸಹಾಯಕನಾದಾಗ, ಹೊಟ್ಟೆಯ ಸಿಟ್ಟು ರಟ್ಟೆಗೆ ಬಂದಾಗ, ಎಲ್ಲವೂ ತಾರ್ಕಿಕವೇ; ಸಾಧುವೇ ಎನ್ನುವುದನ್ನು ನಾವು ಮರೆಯಬಾರದು…
ಈ ಪ್ರಸ್ತತಿಯಲ್ಲಿ ನಿರ್ದೇಶಕರು ಬಣ್ಣಬಣ್ಣದ ಛತ್ರಿಗಳನ್ನು ಚಿಟ್ಟೆಗಳನ್ನಾಗಿ ಗುರುತಿಸುವ ಬದಲು, ತಂತ್ರಜ್ಞಾನದ ಅಳವಡಿಕೆಯಿಂದ ಬಣ್ಣಬಣ್ಣದ ಚಿಟ್ಟೆಯ ರಂಗ ಪರಿಕರಗಳನ್ನೇ ಉಪಯೋಗಿಸಬಹುದು. ಅದೇ ರೀತಿಯಲ್ಲಿ ಕೆರೆಯ ನಿರ್ಮಾಣ ಸಹ ನೈಜವಾಗಿ ಮೂಡಿಸಬಹುದು… ಇದು ಇಂದಿನ ರಂಗಭೂಮಿಗೆ ಅಸಾಧ್ಯವಾದುದೇನಲ್ಲ… ಬೆಳಕು, ರಂಗ ಸಂಗೀತ, ರಂಗ ಸಜ್ಜಿಕೆ ಇವುಗಳಲ್ಲಿ ನಮೂದಿಸುವಂತಹದು ಏನೂ ಇಲ್ಲ… ನಟನ ಅಭಿನಯ ಮತ್ತು ರಂಗಪಠ್ಯ ಇವುಗಳೆಲ್ಲವನ್ನೂ ಹಿಂದಕ್ಕೆ ಸರಿಸುತ್ತದೆ…
ಮಕ್ಕಳ ಮನೋಭೂಮಿಕೆಗೆ ಒಂದು ಉತ್ತಮ ಗುಣಮಟ್ಟದ ನಾಟಕ ಚಿಟ್ಟೆ… ಮಕ್ಕಳು ಅವಶ್ಯವಾಗಿ ನೋಡಬೇಕಾದ ಏಕವ್ಯಕ್ತಿ ಪ್ರಸ್ತುತಿ ಚಿಟ್ಟೆ… ಶಾಲಾ-ಕಾಲೇಜುಗಳಲ್ಲಿ ಇದರ ಪ್ರದರ್ಶನ ಅವಶ್ಯ… ಬೇಲೂರು ರಘುನಂದನ ಅವರಿಗೆ, ಗೋಕುಲ ಸಹೃದಯ ಅವರಿಗೆ ಮತ್ತು ಕವತ್ತಾರರಿಗೆ ಅಭಿನಂದನೆಗಳು… ನಮನಗಳು…
- ಗುಂಡಣ್ಣ ಚಿಕ್ಕಮಗಳೂರು, ಹಿರಿಯ ರಂಗಕರ್ಮಿ



