ಹಣಕಾಸು ಖಾತೆ ಹೊಂದಿರುವ ಸಿದ್ದರಾಮಯ್ಯ ಅವರೇ ಹೊಣೆ ಹೊರಬೇಕು: ಎಚ್.ಡಿ.ಕುಮಾರಸ್ವಾಮಿ

2 years ago

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅವ್ಯವಹಾರ ಆರೋಪವನ್ನು ಸಚಿವ ನಾಗೇಂದ್ರ ಅವರ ಮೇಲೆ ಹೊರಿಸುವುದಕ್ಕಿಂತ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊರಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ವಾಲ್ಮೀಕಿ ನಿಮಗದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಂತೆ ಹಲವು ನಿಗಮಮಂಡಳಿಗಳಲ್ಲೂ ಅವ್ಯವಹಾರ ಆಗಿರುವ ಶಂಕೆ ಇದೆ. ಕೇವಲ ಸಚಿವ ನಾಗೇಂದ್ರ ಅವರ ಮಟ್ಟದಲ್ಲಿ ಇದು ನಡೆದಿಲ್ಲ. ತೆಲಂಗಾಣಕ್ಕೆ ಹಣ ವರ್ಗಾವಣೆಯಾಗಿದೆ. 14 ಖಾತೆಗಳನ್ನು ತೆರೆದಿದ್ದಾರೆ. ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟ ಹಣವನ್ನು ವರ್ಗಾವಣೆ ಮಾಡಲಾಗಿದೆ. ಈ ವಿಚಾರದಲ್ಲಿ ಆಮೆ ವೇಗದಲ್ಲಿ ತನಿಖಾ ಕ್ರಮವಾಗುತ್ತಿದೆ. ಹಣ ವರ್ಗಾವಣೆ ಮಾಡುವಂತೆ ನಿಗಮದಲ್ಲಿ ಆಡಳಿತ ಮಂಡಳಿ ಸಭೆ ನಡೆಸಿ ತೀರ್ಮಾನ ಮಾಡಿಲ್ಲ, ಸ್ವೇಚ್ಛಾಚಾರವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ತೆಲಂಗಾಣ ಚುನಾವಣೆಗೆ ಹಣಬಳಕೆ ಮಾಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದು ಒಂದು ವಾರ ಕಳೆದಿದೆ. ಯಾವ ತನಿಖೆ ನಡೆಸುತ್ತಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಈ ಪ್ರಕರಣವನ್ನು ಇನ್ನೊಬ್ಬರ ತಲೆಗೆ ಕಟ್ಟಲು ಹೋಗುತ್ತಿದ್ದಾರೆ. ರಾಜ್ಯದ ಜನತೆ ಬಗ್ಗೆ ಗೌರವವಿದ್ದರೆ ಮುಖ್ಯಮಂತ್ರಿ ಇದರ ಹೊಣೆಯನ್ನು ಹೊರಬೇಕು. ಇದು ಸರ್ಕಾರದ ಜವಾಬ್ದಾರಿ ಎಂದರು.

ತೆಲಂಗಾಣದ ಚುನಾವಣೆ ಉಸ್ತುವಾರಿ ಜವಾಬ್ದಾರಿಯನ್ನು ಯಾರ್ಯಾರು ವಹಿಸಿಕೊಂಡಿದ್ದರು? ಕಾಂಗ್ರೆಸ್ ಪಕ್ಷದ ಹೈಕಮಾಂಡ್ನ ಮೂಗಿನ ನೇರಕ್ಕೆ ಈ ವ್ಯವಹಾರ ನಡೆದಿದೆ. ಸಚಿವರ ಮೌಖಿಕ ಆದೇಶದ ಮೇರೆಗೆ ಹಣ ವರ್ಗಾವಣೆ ಎಂಬುದು ಡೆತ್ನೋಟ್ನಲ್ಲಿ ಉಲ್ಲೇಖವಾಗಿದೆ. ಈ ಪ್ರಕರಣದಲ್ಲಿ ಯೂನಿಯನ್ ಬ್ಯಾಂಕ್ ಭಾಗಿಯಾಗಿರುವುದರಿಂದ ಸಿಬಿಐ ತನಿಖೆ ಆಗಲಿದೆ ಎಂದರು.

Leave a Reply