ಚಂದ್ರಶೇಖರನ್ ಆತಹತ್ಯೆ ಪ್ರಕರಣದಲ್ಲಿ ಸಿದ್ದರಾಮಯ್ಯ ನೇತೃತ್ವದ ಸಂಪುಟವೇ ಶಾಮೀಲು: ಆರ್.ಅಶೋಕ್

2 years ago

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಇಡೀ ಸಚಿವ ಸಂಪುಟವೇ ಶಾಮೀಲಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪ ಮಾಡಿದ್ದಾರೆ.

ರಾಜ್ಯಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಬ್ಬ ಅಧಿಕಾರಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 187 ಕೋಟಿ ಲೂಟಿ ಮಾಡಿದ್ದಾರೆ. ಅದು ಚೆಕ್ನಲ್ಲಿಯೇ ಲೂಟಿಯಾಗಿದೆ ಎಂದು ಡೆತ್ನೋಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಇದಕ್ಕಿಂತ ಸಾಕ್ಷಿ ಏನು ಬೇಕು ಎಂದರು.

ಸರ್ಕಾರದ ವಿರುದ್ಧ ಯಾವುದೇ ಆಪಾದನೆ ಮಾಡಿದರೂ ಪ್ರತಿಪಕ್ಷನಾಯಕರ ಬಳಿ ಸಾಕ್ಷಿ ಇಲ್ಲವೇ, ದಾಖಲೆ ಇದೆಯೇ ಎಂದು ನಮನ್ನೇ ಕೇಳುತ್ತಿದ್ದರು. ಈಗ ಡೆತ್ ನೋಟ್ ಗಿಂತ ಯಾವ ಸಾಕ್ಷಿ ಬೇಕು ಎಂದರು.

ಡೆತ್ನೋಟ್ನಲ್ಲಿ ಅನೇಕ ಅಂಶಗಳನ್ನು ಬರೆದಿಟ್ಟು ಚಂದ್ರಶೇಖರನ್ ಆತಹತ್ಯೆಗೆ ಶರಣಾಗಿದ್ದಾರೆ. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಆರೋಪ ಕೇಳಿಬಂದಾಗ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸಚಿವರೊಬ್ಬರ ಮೇಲೆ ಇದೇ ರೀತಿ ಆರೋಪ ಕೇಳಿಬಂದಿರುವುದರಿಂದ ಸಚಿವ ನಾಗೇಂದ್ರ ತಕ್ಷಣವೇ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲವೇ ಮುಖ್ಯಮಂತ್ರಿಯವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಸರ್ಕಾರದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸಗಳೂ ನಡೆಯುತ್ತಿಲ್ಲ. ಲಂಚ ಕೊಟ್ಟರೆ ಮಾತ್ರ ಎಲ್ಲವೂ ಸರಾಗವಾಗಿ ನಡೆಯುತ್ತವೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ. ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಕಿಲೋಮೀಟರ್ ರಸ್ತೆಗೆ ಡಾಂಬರು ಹಾಕಿಲ್ಲ, ಗುಂಡಿಗಳನ್ನು ಮುಚ್ಚಲು ಇವರ ಹಣೆಬರಹಕ್ಕೆ ಸಾಧ್ಯವಾಗಿಲ್ಲ, ಕರ್ನಾಟಕ ಮಾದರಿ ಇದೇನಾ? ಎಂದು ಪ್ರಶ್ನಿಸಿದರು.

ನಾವು ಏನಾದರೂ ಆರೋಪ ಮಾಡಿದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಮ ಬ್ರದರ್ಸ್ ಎಂದು ವ್ಯಂಗ್ಯವಾಡುತ್ತಾರೆ. ಈಗ ಬೆಂಗಳೂರನ್ನು ಹಾಳು ಮಾಡುತ್ತಿರುವುದು ಇದೇ ಬ್ರದರ್ಸ್ ಅಕ್ಕಪಕ್ಕ ಇದ್ದಾರೆ. ಬ್ರಾಂಡ್ ಬೆಂಗಳೂರು ಈಗ ಗಬ್ಬೆದ್ದು ನಾರುವ ಸ್ಥಿತಿಗೆ ಬಂದಿದೆ ಎಂದರು.

ಮಾಜಿ ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಬೆಂಗಳೂರೇ ಇರಲಿ, ಕರ್ನಾಟಕದ ಎಲ್ಲೂ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಐದು ಗ್ಯಾರಂಟಿ ಕೊಟ್ಟಿದ್ದೇವೆಂದು ಹೇಳುತ್ತಿದ್ದಾರೆ. ಇದಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಐಟಿಬಿಟಿ ಮೂಲಕ ಬೆಂಗಳೂರು ಇಡೀ ವಿಶ್ವಕ್ಕೇ ಮಾದರಿಯಾಗಿತ್ತು. ಇಂದು ಅದೇ ಬೆಂಗಳೂರು ರಸ್ತೆಗಳಲ್ಲಿ ಗುಂಡಿಗಳಿಗೆ ಬಿದ್ದು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಒಂದು ಗುಂಡಿಯನ್ನೂ ಮುಚ್ಚಲು ಆಗದ ಸರ್ಕಾರ ಕರ್ನಾಟಕ ಮಾದರಿ ಬಗ್ಗೆ ಮಾತನಾಡುತ್ತಿರುವುದು ಐತಿಹಾಸಿಕ ವ್ಯಂಗ್ಯ ಎಂದರು.

Leave a Reply