ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಬಿ.ನಾಗೇಂದ್ರ

2 years ago

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತನಿಖಾ ವರದಿ ಬಂದ ನಂತರ ಇದರಲ್ಲಿ ಯಾರೇ ಶಾಮೀಲಾಗಿದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ವ್ಯವಸ್ಥಾಪಕ ನಿರ್ದೇಶಕರೂ ಸೇರಿದಂತೆ ಯಾರ ವಿರುದ್ಧವೂ ಮೃದು ಧೋರಣೆ ಅನುಸರಿಸುವುದಿಲ್ಲ ಎಂದರು.

ಹಣ ವರ್ಗಾವಣೆಯಲ್ಲಿ ತಮ್ಮ ಪಾತ್ರವಿಲ್ಲ. ಈ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ತನಿಖೆ ನಡೆಯುತ್ತಿದ್ದು, ಅವರ ವಿರುದ್ಧ ಶೀಘ್ರವೇ ಕ್ರಮ ಜರುಗಿಸಲಾಗುವುದು. ಹಣ ದುರುಪಯೋಗವಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ನಿಗಮದಲ್ಲಿ 187 ಕೋಟಿ ರೂ. ಹಣವಿತ್ತು. ಇದರಲ್ಲಿ 87 ಕೋಟಿ ರೂ.ಗಳನ್ನು ಯೂನಿಯನ್ ಬ್ಯಾಂಕ್ನ ನಿಗಮದ ಖಾತೆಯಿಂದ ಅದೇ ಬ್ಯಾಂಕಿನ ಮತ್ತೊಂದು ಶಾಖೆಯ ನಕಲಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆ ಬ್ಯಾಂಕ್ ಅಧಿಕಾರಿಗಳ ಪಾತ್ರ ಇರುವ ಶಂಕೆ ಇದೆ ಎಂದರು.

ಬೃಹತ್ ಮೊತ್ತದ ಹಣವನ್ನು ವರ್ಗಾವಣೆ ಮಾಡುವಾಗ ನನ್ನ ಗಮನಕ್ಕೆ ತರದೇ ಇರುವುದು ವ್ಯವಸ್ಥಾಪಕ ನಿರ್ದೇಶಕರ ಲೋಪವಾಗಿದೆ. ಈ ಕಾರಣಕ್ಕೆ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಪ್ರಕರಣದ ಬಗ್ಗೆ ನನಗೆ ಯಾವ ಮಾಹಿತಿಯೂ ಇರಲಿಲ್ಲ. ನಿಗಮ ಪ್ರತ್ಯೇಕವಾದ ಸಂಸ್ಥೆಯಾಗಿದೆ. ಹೀಗಾಗಿ ವಿರೋಧಪಕ್ಷಗಳು ಒತ್ತಾಯಿಸುವಂತೆ ತಾವು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪ್ರಕರಣವೇ ಬೇರೆ, ಈ ಪ್ರಕರಣವೇ ಬೇರೆ. ನಿಗಮದ ಉಳಿತಾಯ ಖಾತೆ ಲೆಕ್ಕಾಧಿಕಾರಿ ಚಂದ್ರಶೇಖರ್ ಅವರ ಹೆಸರಿನಲ್ಲಿರುತ್ತದೆ. ಅವರ ಮೇಲೆ ಯಾರು ಒತ್ತಡ ಹೇರಿ ಹಣ ವರ್ಗಾವಣೆ ಮಾಡಿಸಿದ್ದಾರೆ ಎಂದು ಗೊತ್ತಿಲ್ಲ. ಈ ಬಗ್ಗೆ ಸಿಐಡಿ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಲಿದ್ದಾರೆ ಎಂದರು.

ವ್ಯವಸ್ಥಾಪಕ ನಿರ್ದೇಶಕರ ಸಹಿಯ ಸಾಚಾತನದ ಬಗ್ಗೆ ಶೀಘ್ರವೇ ಎಫ್ಎಸ್ಎಲ್ ವರದಿ ಪಡೆಯಲಾಗುವುದು. ಆತಹತ್ಯೆ ಮಾಡಿಕೊಂಡ ಚಂದ್ರಶೇಖರ್, ನನ್ನ ಹೆಸರನ್ನು ಏಕೆ ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ. ನಾನು ಯಾವುದೇ ಆದೇಶವನ್ನೂ ಮೌಖಿಕವಾಗಿ ನೀಡಿಲ್ಲ. ಎಲ್ಲವನ್ನೂ ಲಿಖಿತವಾಗಿಯೇ ಸೂಚನೆ ನೀಡುತ್ತೇನೆ ಎಂದರು.

ವರ್ಗಾವಣೆಯಾಗಿದ್ದ ಹಣದ ಪೈಕಿ ನಿನ್ನೆಯವರೆಗೆ 28 ಕೋಟಿ ರೂ.ಗಳನ್ನು ಮರು ವಸೂಲಿ ಮಾಡಿ ನಿಗಮದ ಖಾತೆಯಲ್ಲಿಡಲಾಗಿದೆ. ಬಾಕಿ ಇರುವ ಸುಮಾರು 50 ಕೋಟಿ ರೂ.ಗಳನ್ನು ತಕ್ಷಣವೇ ಮರಳಿಸಬೇಕು, ಇಲ್ಲದೇ ಹೋದರೆ ಯೂನಿಯನ್ ಬ್ಯಾಂಕ್ನ ಅಧ್ಯಕ್ಷರು, ನಿರ್ದೇಶಕರು ಮತ್ತು ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ ಎಂದರು.

Leave a Reply