ಕನ್ನಡಿಗರೆಲ್ಲರೂ ಎದ್ದೆದ್ದು ಬನ್ನಿ, ಕೇಂದ್ರದ ಗೃಹ ಸಚಿವರನ್ನು ಸ್ವಾಗತಿಸೋಣ ಬನ್ನಿ

2 years ago

ಪ್ರವಾಹ ಬಂದಾಗ ಬಂದು ಕಷ್ಟ ಕೇಳದ ಗೃಹ ಸಚಿವರು ಬರುತ್ತಿದ್ದಾರೆ ಬನ್ನಿ ಅವರನ್ನ ಸ್ವಾಗತಿಸೋಣ

ಕರೋನ ಮಹಾಮಾರಿ ಬಂದಾಗ ನಮ್ಮ ರಾಜ್ಯದ ಕಡೆ ತಿರುಗಿ ನೋಡಲು ಸಮಯವೇ ಇರಲಿಲ್ಲ ಈಗ ಬರುತ್ತಿದ್ದಾರೆ ಚುನಾವಣೆಗಾಗಿ ಬನ್ನಿ ಅವರನ್ನು ಸ್ವಾಗತಿಸೋಣ

ಕನ್ನಡ ಭಾಷೆ ಮತ್ತು ಬದುಕಿಗೆ ಸಂಬಂಧಿಸಿದ ಹಲವಾರು ಮಸೂದೆಗಳು ಅನುಮೋದನೆಗಾಗಿ ಕಾಯುತ್ತಲೇ ಇದೆ ಇವರ ಕಚೇರಿಗಳಲ್ಲಿ ಬನ್ನಿ ಸ್ವಾಗತಿಸೋಣ ಇವರನ್ನು

ನಾಡಿನ ಜನರ ಬದುಕಿನ ಭವಣೆಯನ್ನ ಹೇಳಿಕೊಳ್ಳಲು ಸಮಯವನ್ನ ಕೊಡಲು ನಿರಾಕರಿಸಿದ ಗೃಹ ಸಚಿವರು ನಮ್ಮೂರಿಗೆ ಬರುತ್ತಿದ್ದಾರೆ ಚುನಾವಣೆಗಾಗಿ ಬನ್ನಿ ಸ್ವಾಗತಿಸೋಣ

ಬರಗಾಲ ಒಂದು ಅನ್ನದಾತರು ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ವೇಳೆಯಲ್ಲಿ ಪರಿಹಾರವನ್ನು ನಮ್ಮ ಪಾಲಿನ ಪಾಲನ್ನು ಕೊಡಿ ಎಂದು ಕೋರಿ ಮನವಿ ಪತ್ರಗಳು ಕೊಟ್ಟು ಹಲವಾರು ತಿಂಗಳುಗಳು ಕಳೆದರೂ ಬಿಡಿಗಾಸು ನೀಡದ ಕೇಂದ್ರದ ಗೃಹ ಸಚಿವರು ನಾಡ ಜನರ ಬಗ್ಗೆ ಮಾತನಾಡಲು ಮತ ಕೇಳಲು ಬರುತ್ತಿದ್ದಾರೆ ಬನ್ನಿ ಅವರನ್ನ ಸ್ವಾಗತಿಸೋಣ

ನಮ್ಮ ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳನ್ನು ಉತ್ತರ ಭಾರತೀಯರ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಿ, ನಮ್ಮ ಹೆಮ್ಮೆಯ ಮೈಸೂರು ಬ್ಯಾಂಕು ಕಾರ್ಪೊರೇಷನ್ ಬ್ಯಾಂಕ್ ವಿಜಯ ಬ್ಯಾಂಕ್ ಇವುಗಳ ಹೆಸರು ಇಲ್ಲದಂತೆ ಮಾಡಿದ ಪುಣ್ಯಾತ್ಮರು ಬರುತ್ತಿದ್ದಾರೆ ಬನ್ನಿ ಇವರನ್ನು ಸ್ವಾಗತಿಸೋಣ

ನಮ್ಮ ನಂದಿನಿ ಸಂಸ್ಥೆಯನ್ನು ಗುಜರಾತಿನ ಅಮೂಲ್ ಸಂಸ್ಥೆಯೊಂದಿಗೆ ವಿಲೀನಗೊಳಿಸಿ, ನಮ್ಮ ಅಸ್ತಿತ್ವವನ್ನೇ ಕಸಿದುಕೊಳ್ಳಲು ಹೊರಟಿದ್ದ ಪುಣ್ಯಾತ್ಮರು ಬರುತ್ತಿದ್ದಾರೆ ಬನ್ನಿ ಸ್ವಾಗತಿಸೋಣ

2023ರ ವಿಧಾನಸಭಾ ಚುನಾವಣೆಯಲ್ಲಿ ಹಲವಾರು ಬಾರಿ ಬಂದು ನಮ್ಮ ರಾಜ್ಯದ ಜನರ ಮತವನ್ನು ಯಾಚಿಸಿದವರು 9 ತಿಂಗಳ ನಂತರ ಮತ್ತೆ ಬರುತ್ತಿದ್ದಾರೆ ನಿಮ್ಮ ಹಿತ ಕೇಳಲು ಅಲ್ಲ ನಿಮ್ಮ ಕಷ್ಟ ಕೇಳಲು ಅಲ್ಲ ನಿಮ್ಮ ದುಃಖ ಕೇಳಲು ಅಲ್ಲ ಬರುತ್ತಿದ್ದಾರೆ ಕನ್ನಡಿಗರ ಮತ ಕೇಳಲು,

ಬರಗಾಲಕ್ಕೆ ಬಿಡಿ ಕಾಸು ನೀಡದಿದ್ದರೂ ಕೇಳುವುದಿಲ್ಲ ನಮ್ಮ 25 ಜನ ಸಂಸದರು ಒಮ್ಮೆಯೂ ಇವರ ಮುಂದೆ ನಿಂತು ಎಂಬ ಸತ್ಯ ಇವರಿಗೆ ಅರಿತಿದೆ ಅದಕ್ಕಾಗಿ ಬರುತ್ತಿದ್ದಾರೆ ಹೆಮ್ಮೆಯಿಂದ ನಮ್ಮೂರಿಗೆ ಸ್ವಾಗತಿಸೋಣ ಬನ್ನಿ

ಲಕ್ಷಾಂತರ ಕೋಟಿ ರೂಪಾಯಿಗಳ ತೆರಿಗೆಯನ್ನ ಪಾವತಿಸುವ ದೇಶದ ಎರಡನೆಯ ರಾಜ್ಯವಾದ ನಾವು ಕನ್ನಡಿಗರು ನಮ್ಮ ತೆರಿಗೆಯ ಪಾಲನ್ನು ಕೇಳಲು ಧರಣಿ ನಡೆಸಿದರು, ಮನವಿ ನೀಡಿದರು, ಎಷ್ಟೇ ಅಬ್ಬರಿಸಿದರು ನಮ್ಮೊಂದಿಗೆ 25 ಸಂಸದರು ನಿಲ್ಲದ ಕಾರಣದಿಂದ ಆನಂದಗೊಂಡ ಗೃಹ ಸಚಿವರು ಬರುತ್ತಿದ್ದಾರೆ ಬನ್ನಿ ಅವರನ್ನು ಸ್ವಾಗತಿಸೋಣ

ಅವರ ಆವೇಶಭರಿತವಾದ ಆಕ್ರೋಶದ ನುಡಿಯ ಮುಂದಿನ ಭರವಸೆಯ ಮಾತುಗಳ ಕೇಳಲು ಬನ್ನಿ ಬೇಗ ಬನ್ನಿ ಸ್ವಾಗತಿಸುತ್ತಾ ನಮಗೇನು ಕೊಡದಿದ್ದರೂ ಚಿಂತೆ ಇಲ್ಲ ಅವರನ್ನು ನೋಡಿ ಕಣ್ತುಂಬಿಕೊಳ್ಳೋಣ ಬನ್ನಿ

ಬಾಡಿಗೆ ಮಂದಿಯನ್ನು ನೇಮಿಸಿ, ಪುಷ್ಪದ ಮಳೆಯನ್ನ ಸುರಿಸಿ, ಗಂಧದ ಹಾರವನ್ನ ಹಾಕಿ ಮೈಸೂರು ಪೇಟವನ್ನು ತೊಡಿಸಿ, ಪಟಾಕಿಗಳನ್ನು ಸಿಡಿಸಿ, ಜಯಕಾರ ಘೋಷಣೆ ಮಾಡುತ್ತಾ, ಮಾಧ್ಯಮದವರ ಅದ್ದೂರಿ ಪ್ರಚಾರಕ್ಕೆ ಸನ್ನದ್ಧರಾಗಿ ಸ್ವಾಗತಿಸೋಣ ಬನ್ನಿ,

ಕೆ ಎಸ್ ನಾಗರಾಜ್, ಬೆಂಗಳೂರು

Leave a Reply