ಡಾ.ಕೆ.ಸುಧಾಕರ್ ಅವರಿಂದ ಪ್ರಚಾರ ಗಿಟ್ಟಿಸುವ ಯತ್ನ: ಎಸ್.ಆರ್.ವಿಶ್ವನಾಥ್

2 years ago

ಬೆಂಗಳೂರು: ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಮತ್ತು ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ನಡುವೆ ಜಟಾಪಟಿ ತೀವ್ರಗೊಂಡಿದೆ.

ಚುನಾವಣೆ ಅಖಾಡಕ್ಕೆ ಧುಮುಕಿರುವ ಡಾ. ಸುಧಾಕರ್ ಅವರು ತಮ್ಮ ಜೊತೆ ಮಾತನಾಡಲು ಮತ್ತು ಭೇಟಿಯಾಗಲು ಮೂರ್ನಾಲ್ಕು ಬಾರಿ ಮೆಸೇಜ್ ಮಾಡಿರುವ ಮತ್ತು ಕಾಲ್ ಮಾಡಿರುವ ದಾಖಲೆ ನೀಡಿದರೆ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಿಶ್ವನಾಥ್ ಸವಾಲೆಸಿದಿದ್ದಾರೆ.

ತಾವು ಒಬ್ಬ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಚುನಾವಣೆಗೆ ತಮ್ಮ ಪುತ್ರನನ್ನು ಕಣಕ್ಕಿಳಿಸಲು ಪ್ರಯತ್ನ ಮಾಡಿದ್ದು ನಿಜ. ಆತನಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬೇಸರವಾಗಿರುವುದು ಸತ್ಯ. ಆದರೆ ಪಕ್ಕದ ನಿರ್ಧಾರ ಧಿಕ್ಕರಿಸುವಷ್ಟು ದೊಡ್ಡ ಮನುಷ್ಯ ನಾನಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಇಲ್ಲದ ಸಮಯದಲ್ಲಿ ಮನೆಗೆ ಬಂದ ಸುಧಾಕರ್ ಅವರು ತಮ್ಮ ಜೊತೆ ಮಾಧ್ಯಮ ಪ್ರತಿನಿಧಿಗಳನ್ನು ಕರೆತಂದು ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು ಮುಖಂಡರು ಮತ್ತು ಜನಸಾಮಾನ್ಯರಿಗೆ ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ. ಮನೆಗೆ ಬಂದವರನ್ನು ಉಪಚರಿಸಿ ಕಳಿಸುವುದು ನಮ್ಮ ಸಂಪ್ರದಾಯ. ಒಬ್ಬ ಮಾಜಿ ಮಂತ್ರಿ ಮನೆ ಬಾಗಿಲಿಗೆ ಬಂದರೆ ಅವರನ್ನು ಒಳಗೆ ಬಿಟ್ಟುಕೊಳ್ಳಲಾರದಷ್ಟು ಕೆಟ್ಟವರು ನಾವಲ್ಲ. ನಮ್ಮನ್ನು ಅಂತಹ ಕೆಟ್ಟವರು ಎಂದು ಬಿಂಬಿಸಿ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ಯಾರೂ ಕೂಡ ಮಾಡಬಾರದು ಎಂದರು.

ಸುಧಾಕರ್ ಅವರು ಒಮ್ಮೆ ಮಾತ್ರ ನಮಗೆ ಮೆಸೇಜ್ ಮಾಡಿ ಭೇಟಿಗೆ ಬರುವುದಾಗಿ ತಿಳಿಸಿದ್ದಾರೆ. ಅದನ್ನು ಬಿಟ್ಟು ಒಮ್ಮೆಯೂ ಕರೆ ಮಾಡಿಲ್ಲ. ನಂತರ ಮೆಸೇಜ್ ಕೂಡ ಮಾಡಿಲ್ಲ. ಆದರೆ ಈಗ ಹಲವು ಬಾರಿ ಕರೆ ಮಾಡಿದೆ, ಮೆಸೇಜ್ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಅದನ್ನು ಅವರು ಸಾಬೀತು ಪಡಿಸಿದರೆ ನಾನು ಶಾಸಕ ಸ್ಥಾನ ತೊರೆಯುತ್ತೇನೆ ಎಂದು ಸವಾಲೆಸೆದರು.

ಪಕ್ಷದ ಅಭ್ಯರ್ಥಿ ನಮ್ಮ ಮನೆಯ ಬಾಗಿಲಿಗೆ ಬರಲಿ ಬಿಡಲಿ ನಾವಂತೂ ಪಕ್ಷದ ನಿಷ್ಠಾವಂತರು ಕ್ಷೇತ್ರದ ಮತದಾರರಲ್ಲಿ ಈಗಾಗಲೇ ಬಿಜೆಪಿಗೆ ಮತ ಹಾಕುವಂತೆ ಹೇಳಿದ್ದೇನೆ. ಮತದಾನಕ್ಕೆ ವ್ಯವಸ್ಥೆಯನ್ನು ಮಾಡಿದ್ದೇನೆ. ಪಕ್ಷದ ಅಭ್ಯರ್ಥಿಯ ಹೆಸರು ಹೇಳಿ ನಾವು ಮತ ಕೇಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹೆಸರು ಹೇಳಿ ಮತಯಾಚಿಸುತ್ತೇನೆ ಎಂದು ಪರೋಕ್ಷವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಸುಧಾಕರ್ ಅವರಿಗೆ ತಮ್ಮನ್ನು ಭೇಟಿ ಮಾಡುವುದು ಅಷ್ಟೊಂದು ಮುಖ್ಯವಾಗಿದ್ದರೆ ಅವರೊಬ್ಬರೇ ಬರಬೇಕಾಗಿತ್ತು. ತಮ್ಮ ಜೊತೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದುಕೊಂಡು ಬಂದು ದೊಡ್ಡ ಪ್ರಚಾರ ಗಿಟ್ಟಿಸುವ ಪ್ರಯತ್ನ ಯಾಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದರು.

Leave a Reply