ತೇಜಸ್ವಿನಿ ಅನಂತಕುಮಾರ್ ಆಶೀರ್ವಾದ ಪಡೆದ ಸೌಮ್ಯಾ ರೆಡ್ಡಿ

2 years ago

ಬೆಂಗಳೂರು: ಇಂದು ಮುಂಜಾನೆ ಲಾಲ್ ಬಾಗ್ ನಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಮಾಜಿ ಶಾಸಕಿ ಮತ್ತು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಸೌಮ್ಯಾ ರೆಡ್ಡಿ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ @Tej_AnanthKumar ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. ಇದೇ ವೇಳೆ ಅವರ ಕುಶಲೋಪರಿಯನ್ನು ವಿಚಾರಿಸಿದರು.

ಅನಂತಕುಮಾರ್ ಮತ್ತು ತೇಜಸ್ವಿನಿ ಅನಂತಕುಮಾರ್ ಅವರ ಸೇವೆಯನ್ನು ಸ್ಮರಿಸಿರುವ ಸೌಮ್ಯಾ ರೆಡ್ಡಿ, ಅದಮ್ಯ ಚೇತನ ಸಂಸ್ಥೆಯ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ತೇಜಸ್ವಿನಿಯವರು ಎಲ್ಲಾ ಮಹಿಳೆಯರಿಗೂ ಆದರ್ಶಪ್ರಾಯರು. ಬಡವರು, ನೊಂದವರ ಬಗ್ಗೆ ಅವರಿಗಿರುವ ಅಪಾರ ಕಾಳಜಿಯ ಪ್ರಭಾವಕ್ಕೆ ಒಳಗಾದವರಲ್ಲಿ ನಾನೂ ಒಬ್ಬಳಾಗಿದ್ದೇನೆ ಎಂದಿದ್ದಾರೆ.

ಪಕ್ಷಾತೀತವಾಗಿ ಜನರೊಂದಿಗೆ ಕೆಲಸ ಮಾಡುವ ಜೊತೆಗೆ ನಾವು ಭೇಟಿಯಾದಾಗಲೆಲ್ಲಾ ನನಗೆ ಸಲಹೆ ಮತ್ತು ಆಶೀರ್ವಾದವನ್ನು ನೀಡುತ್ತಿದ್ದ ಅದ್ಭುತ ವ್ಯಕ್ತಿ ಅನಂತ್ ಕುಮಾರ್ ಅವರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

2018ರಲ್ಲಿ ಅನಂತಕುಮಾರ್ ಅವರು ನಿಧನರಾದ ನಂತರ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ತೇಜಸ್ವಿನಿ ಅನಂತಕುಮಾರ್ ಅವರಿಗೆ ನೀಡಲಾಗುತ್ತದೆ ಎಂಬ ವರದಿಗಳಿದ್ದವು. ಈ ವೇಳೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಗಿತ್ತು. ಈ ವೇಳೆ ತೇಜಸ್ವಿನಿ ಅನಂತಕುಮಾರ್ ಅವರ ಭೇಟಿಗೆ ತೆರಳಿದ್ದ ತೇಜಸ್ವಿ ಸೂರ್ಯ ಅವರನ್ನು ಮನೆಯೊಳಗೆ ಬಿಡಲು ಗಂಟೆಗಟ್ಟಲೆ ತೇಜಸ್ವಿನಿ ಅನಂತಕುಮಾರ್ ಅವರು ಕಾಯಿಸಿದ್ದರು.

ಇದೀಗ 2024ರ ಲೋಕಸಭೆ ಚುನಾವಣೆಯಲ್ಲಿ ಸೌಮ್ಯಾರೆಡ್ಡಿ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಕಣದಲ್ಲಿದ್ದಾರೆ. ಇದೇ ಸಮಯದಲ್ಲಿ ತೇಜಸ್ವಿನಿಯವರನ್ನು ಭೇಟಿಯಾಗಿ, ಅವರ ಕಾಲಿಗೆ ಎರಗಿ ಆಶೀರ್ವಾದ ಪಡೆದಿರುವುದು ಮಹತ್ವ ಪಡೆದುಕೊಂಡಿದೆ.

Leave a Reply