ನನ್ನ ಬಾಲ್ಯಕಾಲದ ಸಹಪಾಠಿ ಗೆಳತಿ ಲಕ್ಷ್ಮೀದೇವಮ್ಮ ಮತ್ತು ಬಂದೂಕದ ರಾಜಣ್ಣನವರ ಮಗನಾದ ಎ.ಆರ್.ಸಾಯಿರಾಂ (ಬಾಬು) A R Sai Ramm ಅವರ ಚೊಚ್ಚಲ ನಿರ್ದೇಶನದ ಧೈರ್ಯಂ ಸರ್ವತ್ರ ಸಾಧನಂ (DSS) ಎಂಬ ಚಲನಚಿತ್ರವು ಇಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗಿದೆ.
ಆರ್ಯ-ದ್ರಾವಿಡ ಸಂಘರ್ಷದ ಕಥಾನಕವಿರುವ ಈ ಚಲನಚಿತ್ರದಲ್ಲಿ ಬೇಟೆ ಮತ್ತು ಬಂದೂಕು ಈ ಎರಡು metaphors ಮೂಲಕ ಸಂಘರ್ಷದ ಕಥನವನ್ನು ನಿರ್ದೇಶಕ ಎ.ಆರ್.ಸಾಯಿರಾಂ ಸಮರ್ಥವಾಗಿ ನಿರೂಪಿಸಿದ್ದಾರೆ.
ಬೇಟೆಯಾಡಲು ಧೈರ್ಯ ಇರಬೇಕು. ಬೇಟೆಗಾರರಿಗೆ ಬೇಟೆಯ ಆಯುಧವೇ ತಮ್ಮ ಅಸ್ತಿತ್ವದ ಅಸ್ಮಿತೆ. ಆಯುಧವೇ ಅವರ ಸ್ವಾಭಿಮಾನದ ಗುರುತು. ಧೈರ್ಯಂ ಸರ್ವತ್ರ ಸಾಧನಂ DSS ಸಿನಿಮಾದಲ್ಲಿ ಬೇಟೆಗಾರ ನಾಗದೊರೆಯ ಆಯುಧವಾದ ಬಂದೂಕು ದ್ರಾವಿಡರ ಸ್ವಾಭಿಮಾನದ ಅಸ್ಮಿತೆಯಾಗಿ ಹಾಗೂ ನಾಗದೊರೆಯ ಮಗನಾದ ದ್ರಾವಿಡ್-ನ ಬದುಕಿನ ಅಸ್ತಿತ್ವದ ಗುರುತಾಗಿ ಬಹುದೊಡ್ಡ ಪಾತ್ರವನ್ನು ನಿರ್ವಹಿಸಿದೆ.
ಇಪ್ಪತ್ತಾರರ ಆಕರ್ಷಕ ಮೈಕಟ್ಟಿನ ತರುಣ ವಿವಾನ್ ಕೆ.ಕೆ Vivan K K ಅತ್ಯಂತ ಲವಲವಿಕೆಯಿಂದ ಅಭಿನಯಿಸಿದ್ದು, ಈ ಸಿನಿಮಾದ ಅರಂಗೇಟ್ರಂ ಮೂಲಕವೇ ಆತನ ಸಿನಿ ಪಯಣದ ಜೈತ್ರಯಾತ್ರೆ ಪ್ರಾರಂಭವಾಗಿದೆ.
ಎ.ಆರ್.ಸಾಯಿರಾಂ ಅವರು ಸ್ವತಂತ್ರ ನಿರ್ದೇಶಕನಾಗಿ ಈ ಸಿನಿಮಾದ ಮೂಲಕವೇ ತನ್ನ ಸಾಧನೆಗಳ ಹೊಸ ಪುಟಗಳನ್ನು ಬರೆಯುತ್ತಿದ್ದಾರೆ. ಹಾಗಾಗಿ ಈ ಚಿತ್ರ ಮತ್ತು ಚಿತ್ರ ತಂಡಕ್ಕೆ ನಮ್ಮೆಲ್ಲರ ಪ್ರೋತ್ಸಾಹ ತುಂಬಾ ಮುಖ್ಯ.
ದಾರ್ಶನಿಕ ಕವಿ ಕುವೆಂಪು ಅವರು ಆಶಿಸಿರುವ ಹಾಗೆ ನಮ್ಮ ತಲೆಯಲ್ಲಿರುವ ಬ್ರಾಹ್ಮಣ್ಯದ ಹುಲಿಯನ್ನು ನಾವು, ಜೋಡುನಳಿಕೆಯ ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲಬೇಕು. ನಮ್ಮ ತಲೆಯನ್ನು ನಾವೇ ಹೊಡೆದುಕೊಂಡು ತಲೆಯಲ್ಲಿರುವ ಬ್ರಾಹ್ಮಣ್ಯದ ಹುಲಿಯನ್ನು ಕೊಲ್ಲುವ ಬೇಟೆಗಾರರು ನಾವಾಗಬೇಕು. ಇಂತಹ ಸಾಮಾಜಿಕ ಸಂದೇಶವನ್ನು ಸಾರುವ ಧೈರ್ಯ ಸರ್ವತ್ರ ಸಾಧನಂ ಚಲನಚಿತ್ರದಲ್ಲಿ ದೇವರಾಯನದುರ್ಗ, ನಾಮದ ಚಿಲುಮೆಯ ಕಾಡು, ಎಂ.ಗೊಲ್ಲಹಳ್ಳಿಯ ಮಿಂಚುಕಲ್ಲು ಬೆಟ್ಟ, ದೊಡ್ಡಪಾಲನಹಳ್ಳಿ ಪಾಂಡವರ ಬೆಟ್ಟ, ಎಲೆರಾಂಪುರದ ಸುತ್ತಮುತ್ತಲಿನ ಕಾಡುಗಳ ಸೌಂದರ್ಯವನ್ನು ಹಾಗೂ ಬೇಟೆಯ ರೋಚಕತೆಯನ್ನು ಸೆರೆ ಹಿಡಿಯಲಾಗಿದೆ.
ನಿರ್ದೇಶಕ ಎ.ಆರ್.ಸಾಯಿರಾಂ ಸ್ವಯಂ ಪಾರಂಪರಿಕ ಬೇಟೆಗಾರರ ವಂಶದ ಕುಡಿ ಎಂದಮೇಲೆ ಕೇಳಬೇಕೆ!! ಧೈರ್ಯಂ ಸರ್ವತ್ರ ಸಾಧನಂ ಸಿನಿಮಾವನ್ನು ನೀವು ನೋಡಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿರಿ.
- ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು



