ಕೋಲಾರಕ್ಕೆ ನೀರುಣಿಸುವ ಕೆಸಿ ವ್ಯಾಲಿ ಯೋಜನೆ ಬಗ್ಗೆ ಜನರಿಗೆ ತಪ್ಪು ಸಂದೇಶ ನೀಡಬೇಡಿ: ಕೃಷ್ಣ ಬೈರೇಗೌಡ

2 years ago

. ನೀರಿನ ಗುಣಮಟ್ಟದ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ ಸಚಿವರು
• ಕೆಸಿ ವ್ಯಾಲಿ ನೀರಿಗೆ ಪ್ರತಿ ಗಂಟೆಗೊಮ್ಮೆ ಗುಣಮಟ್ಟದ ಪರೀಕ್ಷೆ
• ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮೂಲಕ ಸಂಶೋಧನೆ

ಬೆಂಗಳೂರು: ಕೋಲಾರದ ಕೆರೆಗಳಿಗೆ ನೀರುಣಿಸುತ್ತಿರುವ ಕೆಸಿ ವ್ಯಾಲಿ (ಕೋರಮಂಗಲ – ಚಲ್ಲಘಟ್ಟ) ಯೋಜನೆಯ ಬಗ್ಗೆ ಸದನದ ಮೂಲಕ ಜನರಿಗೆ ತಪ್ಪು ಸಂದೇಶ ನೀಡಬೇಡಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮನವಿ ಮಾಡಿದರು.

ವಿಧಾನಸಭೆ ಅಧಿವೇಶದ ಪ್ರಶ್ನೋತ್ತರ ಅವಧಿಯಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್ ಅವರು ಕೆಸಿ ವ್ಯಾಲಿ ಯೋಜನೆಯಡಿ ನೀರಿನ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ್ದರು. ಬೆಂಗಳೂರಿನ ಕೊಳಚೆ ನೀರನ್ನು ಸರಿಯಾಗಿ ಶುದ್ದೀಕರಣ ಮಾಡದ ಕಾರಣ ಕೋಲಾರದ ಕೆರೆ ಹಾಗೂ ಅಂತರ್ಜಲದ ಗುಣಮಟ್ಟ ಕುಗ್ಗಿದೆ. ಪಶುಗಳೂ ಸಹ ಕೆರೆಯ ನೀರನ್ನು ಸೇವಿಸುತ್ತಿಲ್ಲ. ಹೀಗಾಗಿ ಕೆಸಿ ವ್ಯಾಲಿ ನೀರಿಗೆ ಮೂರನೇ ಹಂತದ ಶುದ್ದೀಕರಣದ ಅಗತ್ಯ ಇದೆ ಎಂದರು.

ಈ ವೇಳೆ ಸದನದಲ್ಲಿ ಎದ್ದು ನಿಂತು ಶಾಸಕರ ಪ್ರಶ್ನೆಗೆ ಅಸಮಾಧಾನ ಸೂಚಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕೆಸಿ ವ್ಯಾಲಿ ನೀರಿಗೆ ಮೂರನೇ ಹಂತದ ಶುದ್ದೀಕರಣ ಅಗತ್ಯವಿದೆ ಎಂಬ ಬಗ್ಗೆ ನಮ್ಮ ಯಾವುದೇ ತಕರಾರು ಇಲ್ಲ. ಆದರೆ, ಕೋಲಾರದ ಜೀವನಾಡಿಯಾಗಿರುವ ಈ ಯೋಜನೆಯ ಬಗ್ಗೆ ಸದನದ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡಬೇಡಿ” ಎಂದು ಮನವಿ ಮಾಡಿದರು.

“ಕೆಸಿ ವ್ಯಾಲಿ ಯೋಜನೆಯ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಕ್ಕೂ ಪಾಲಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಎರಡನೇ ಮತ್ತು ಮೂರನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಜೆ.ಸಿ. ಮಾಧುಸ್ವಾಮಿ ಅವರು ವೃಷಭಾವತಿ ವ್ಯಾಲಿಗೆ ಅನುಮತಿ ಕೊಡಿಸಿದ್ದರು. ಈ ವೇಳೆ ನಾನು ಸ್ವತಃ ಮಾಧುಸ್ವಾಮಿ ಹಾಗೂ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದೆ” ಎಂದರು.

ಕೆಸಿ ವ್ಯಾಲಿ ನೀರಿನ ಗುಣಮಟ್ಟದಲ್ಲಿ ಮಾನದಂಡ ಪಾಲಿಸುತ್ತಿಲ್ಲ ಹಾಗೂ ಕೆಸಿ ವ್ಯಾಲಿ ನೀರನ್ನು ಹರಿಸಿದ ಕಡೆ ನೀರಿನ ಗುಣಮಟ್ಟ ಕುಸಿದಿದೆ ಎಂಬ ಮಾತನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ 2017-18 ರಲ್ಲಿ ಈ ಯೋಜನೆ ಅನುಷ್ಠಾನಗೊಂಡ ದಿನದಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರತಿನಿತ್ಯ ನೀರಿನ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸುತ್ತಿದೆ ಎಂದರು.

ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಎಲ್ಲಾ ಇಲಾಖೆಗಳ ಗುಣಮಟ್ಟದ ಮಾನದಂಡಗಳನ್ನೂ ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಇಲ್ಲಿ ನಿರ್ಲಕ್ಷ್ಯದ ಮಾತೇ ಇಲ್ಲ. ಈ ಯೋಜನೆಯಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಹೀಗಾಗಿ ನಾವು ವಾಸ್ತವದ ಆಧಾರದಲ್ಲಿ ಚರ್ಚಿಸಲು ತಯಾರಿದ್ದೇವೆಯೇ ವಿನಃ, ಯಾವುದೋ ವಿಚಾರವನ್ನು ಇನ್ನೆಲ್ಲೋ ಸಂಬಂಧ ಕಲ್ಪಿಸುವ ಊಹಾಪೋಹದ ಅಭಿಪ್ರಾಯಗಳಿಗೆ ಉತ್ತರಿಸಲಾಗದು ಎಂದರು.

ನೀರಿನ ಗುಣಮಟ್ಟದ ಬಗ್ಗೆಯೂ ಸದನಕ್ಕೆ ಮಾಹಿತಿ ನೀಡಿದ ಸಚಿವರು, “ನನ್ನ ಊರು ಕೋಲಾರದ ನರಸಾಪುರ. ಇಡೀ ಊರಿನ ಚರಂಡಿ ನೀರನ್ನು ಕೆರೆಯ ನೀರಿಗೆ ಹರಿಸಲಾಗುತ್ತಿದೆ. ಪರಿಣಾಮ ನೀರು ಮಲಿನವಾಗಿದೆ. ಆದರೆ, ನೀರಿನ ಮಲಿನದ ಕಾರಣಕ್ಕೆ ಎಲ್ಲೋ ಮೀನು ಸತ್ತೋದ್ರೆ ಕೆಸಿ ವ್ಯಾಲಿ ನೀರಿನಿಂದಲೇ ಕೆರೆಯ ಮೀನುಗಳು ಮೃತಪಟ್ಟಿವೆ ಎಂದು ಸತ್ಯಕ್ಕೆ ದೂರವಾದ ವಿಚಾರಗಳನ್ನು ವೈರಲ್ ಮಾಡುವುದು ಸರಿಯಲ್ಲ ಎಂದರು.

ಅಸಲಿಗೆ ಸ್ಕಾಡಾ (SCADA) ಯಾಂತ್ರೀಕೃತ ತಂತ್ರಜ್ಞಾನದ ಮೂಲಕ ಕೆಸಿ ವ್ಯಾಲಿ ನೀರನ್ನು ಪ್ರತಿ ಗಂಟೆಗೊಮ್ಮೆ ಗುಣಮಟ್ಟದ ಪರೀಕ್ಷೆ (ಸ್ಯಾಂಪಲ್ ಟೆಸ್ಟ್) ಮಾಡಲಾಗುತ್ತಿದೆ. ಶುದ್ದೀಕರಣಗೊಂಡ ನೀರು ಮಾನದಂಡಗಳ ಪ್ರಕಾರ ಗುಣಮಟ್ಟವಾಗಿಲ್ಲದಿದ್ದರೆ ಆ ನೀರನ್ನು ಪಂಪ್ ಮಾಡಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ 280 ಎಂಎಲ್‌ಡಿ (millions of liter per day or megaliters per day) ಸಾಮರ್ಥ್ಯದ ಒಂದು ಘಟಕದಿಂದ ಈವರೆಗೆ ನೀರನ್ನು ಪಂಪ್ ಮಾಡಿಲ್ಲ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮೂಲಕ ಆ ಘಟಕವನ್ನು ಉನ್ನತೀಕರಿಸುವ ಕೆಲಸ ನಡೆಯುತ್ತಿದೆ. ಈ ಯೋಜನೆಯ ಬಗ್ಗೆ ದೂರದೃಷ್ಟಿಯ ಕಾರಣಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಇದರ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿದೆ ಎಂದರು.

ಅಲ್ಲದೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮೂಲಕವೇ ಕೆಸಿ ವ್ಯಾಲಿ ನೀರು ಹರಿಯುವ ಭಾಗಗಳಲ್ಲಿ ಆರೋಗ್ಯ ನಿಯತಾಂಕಗಳು (Health Parameters) ಮತ್ತ ಆರ್ಥಿಕ ಪರಿಣಾಮಗಳ (Econometrics Impact) ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ನ್ಯುಮೋನಿಯಾ ಡಯೇರಿಯಾ ಸೇರಿದಂತೆ ನೀರಿಗೆ ಸಂಬಂಧಿಸಿದ ಖಾಯಿಲೆಗಳಿಂದ ಜನ ವಿಮುಕ್ತರಾಗುತ್ತಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಈ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆ. ಅವರ ಸಮೀಕ್ಷೆಯನ್ನೇ ಒಪ್ಪದಿದ್ದರೆ ನಾವೇನೂ ಮಾಡಲಾಗುವುದು ಎಂದು ವಿಷಾದ ವ್ಯಕ್ತಪಡಿಸಿದರು.

Leave a Reply