ನಾವೇನು ಹೈಕಮಾಂಡ್ ಗುಲಾಮರಾ?: ಕೆ.ಎನ್.ರಾಜಣ್ಣ

2 years ago

ಬೆಂಗಳೂರು: ನಿಗಮ-ಮಂಡಳಿ‌ ನೇಮಕ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯ ನಾಯಕರು ಮಾತುಕತೆ ಮೂಲಕ ಸಿದ್ದಪಡಿಸಿದ ಪಟ್ಟಿ ಮಾರ್ಪಾಡು ಮಾಡಿರುವ ಹೈಕಮಾಂಡ್ ವಿರುದ್ಧ ಕಿಡಿಕಾರಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ನಮ್ಮನ್ನು ಹೈಕಮಾಂಡ್ ಗುಲಾಮರೆಂದು ಭಾವಿಸಿದೆಯಾ‌ ಎಂದು ಪ್ರಶ್ನಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಇದೇ ರೀತಿ ನಡೆದುಕೊಂಡರೆ ಅವರೇ ಇಲ್ಲಿಗೆ ಬಂದು ಗೆಲ್ಲಿಸಬೇಕಾಗುತ್ತದೆ. ನಮ್ಮನ್ನು ಏನೂ ಕೇಳುವಂತಿಲ್ಲ. ಎಲ್ಲಾ ಅವರೇ ಮಾಡುವುದಾದರೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ ಎಂದು ಸವಾಲೆಸೆದರು.

ನಾವೇನು ಹೈ ಕಮಾಂಡ್ ಗುಲಾಮರಾ? ಈ ರೀತಿ ಸವಾರಿ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಗಮ, ಮಂಡಳಿಗೆ ನೇಮಕ ಮಾಡಬೇಕಾ? ಇಲ್ಲ, ದೆಹಲಿಯಲ್ಲಿ ಕುಳಿತು ಪಟ್ಟಿ ಮಾಡಿ ಲಾಟರಿ ಟಿಕೆಟ್ ಹಂಚಿದಂತೆ ಹಂಚಿದರೆ ಹೇಗೆ ನಮ್ಮನ್ನು ಒಂದು ಮಾತು ಕೇಳಬೇಕಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯವಾಗಿ ಯಾವ ಕಾರ್ಯಕರ್ತರು, ಮುಖಂಡರು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿರುತ್ತದೆ. ನಾವು ಕೊಟ್ಟ ಹೆಸರುಗಳನ್ನು ಸೇರಿಸಬೇಕು. ಅದು ಬಿಟ್ಟು, ದೆಹಲಿಯಲ್ಲಿ ಕುಳಿತು ತಮಗೆ ಬೇಕಾದವರ ಹೆಸರುಗಳನ್ನು ಸೇರಿಸುವುದನ್ನು ಸಹಿಸುವುದಿಲ್ಲ ಎಂದರು.

ಈ ಹಿಂದೆ ಹೈಕಮಾಂಡ್ ನಲ್ಲಿದ್ದವರು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಿಗೆ ಜವಾಬ್ದಾರಿ ಕೊಟ್ಟು, ಸಲಹೆ ನೀಡುತ್ತಿದ್ದರು. ಈಗ ಅವರೇ ಪಟ್ಟಿ ಸಿದ್ಧಪಡಿಸಿ ಕಳುಹಿಸಿದ್ದಾರೆ. ಇದು ಹೊಸ ಹೈಕಮಾಂಡ್‌ನ, ಹೊಸ ವರಸೆ ಎಂದು ಕಿಡಿಕಾರಿದರು.

ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಂಸದ ಮುದ್ದಹನುಮೇಗೌಡ ಸ್ಪರ್ಧಿಸಲಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಆಗುವುದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ ತಮ್ಮ ವ್ಯಾಪ್ತಿಯ ಅಭ್ಯರ್ಥಿಯನ್ನು ಗೆಲ್ಲಿಸದಿದ್ದರೆ ಸಚಿವರ ತಲೆದಂಡ ಮಾಡುವುದಾದರೆ ಮಾಡಲಿ. ಯಾರು ಗೆಲ್ಲಿಸುವುದಿಲ್ಲ ಅವರ ತಲೆದಂಡವಾಗುತ್ತದೆ. ಗೆಲ್ಲಿಸದೇ ಇದ್ದರೆ ನನ್ನದೂ ತಲೆತಂಡವಾಗಲಿ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದರು.

Leave a Reply