ದಾವಣಗೆರೆ: ಕುಂದುವಾಡ ಕೆರೆಬಳಿಯ ಗಾಜಿನ ಮನೆಯಲ್ಲಿ ನವೆಂಬರ್ 13 ರಿಂದ 16 ರ ವರೆಗೆ ಫಲಪುಷ್ಪ ಪ್ರದರ್ಶನದ ಜೊತೆಗೆ ಸಂಗೀತ ಕಾರಂಜಿ, ಲೇಜರ್ ಶೋ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಗಾಜಿನ ಮನೆಯಲ್ಲಿ ಏರ್ಪಡಿಸಲಾದ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲೆಯ ವೈವಿಧ್ಯತೆಯನ್ನು ಸಾರ್ವಜನಿಕರಿಗೆ ತೋರ್ಪಡಿಸುವ ಉದ್ದೇಶದಿಂದ ದೀಪಾವಳಿ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನವನ್ನು ಬಹಳ ಅರ್ಥಪೂರ್ಣವಾಗಿ ಮತ್ತು ಸೊಗಸಾಗಿ ಏರ್ಪಡಿಸಲಾಗಿದೆ ಎಂದರು.

ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಇಸ್ರೋ ಉಡಾವಣೆಗೊಳಿಸಿದ ಚಂದ್ರಯಾನ-3 ಜಿಲ್ಲೆಯ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ರೈತರು ಬೆಳೆದ ಹೂವುಗಳು, ಹಣ್ಣುಗಳನ್ನು ತಂದು ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು.
ನಗರದ ದೃಶ್ಯಮಾಧ್ಯಮ ಮಹಾವಿದ್ಯಾಲಯ ಕಾಲೇಜಿನ ವಿದ್ಯಾರ್ಥಿಗಳು ರಚಿಸಿರುವಂತಹ ಕಲಾಕೃತಿಗಳನ್ನು ಸಾರ್ವಜನಿಕರಿಗೆ ತೋರ್ಪಡಿಸುವ ನಿಟ್ಟಿನಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಕಲಾ ರಸಿಕರ ಕಣ್ಮನ ಸೆಳೆಯುವಲ್ಲಿ ಪ್ರದರ್ಶನ ಯಶಸ್ವಿಯಾಗಲಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬೇಕೆಂದು ಮನವಿ ಮಾಡಿದರು.
ಮಹಾನಗರ ಪಾಲಿಕೆ ಮೇಯರ್ ವಿನಾಯಕ ಬಿ.ಹೆಚ್, ಮಹಾನಗರ ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ರೇಖಾ ಸುರೇಶ್, ಮೀನಾಕ್ಷಿ ಜಗದೀಶ್, ಅಪರ ಜಿಲ್ಲಾಧಿಕಾರಿ ಪಿಎನ್ ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕಾ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಜಿ.ಸಿ ರಾಘವೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

ಹೂವಿನಲ್ಲಿ ಅರಳಿದ ಚಂದ್ರಯಾನ-3: ಗಾಜಿನಮನೆಯಲ್ಲಿ ಏರ್ಪಡಿಸಲಾದ ಫಲಪುಷ್ಪ ಪ್ರದರ್ಶನದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ದಿಪಡಿಸಿದ ಚಂದ್ರಯಾನ-3 ಪಿಎಸ್ಎ್ಲ್ವಿದ ಪಾಪುಲೇಷನ್ ಮಾದರಿ, ವಿಕ್ರಂ ಲ್ಯಾಂಡರ್, ಪ್ರಗ್ನ್ಯಾನ್ ರೋವರ್ಗಳನ್ನು ಹೂವಿನಲ್ಲಿ ಬಿಡಿಸಲಾಗಿದೆ.
ವಿಶ್ವಕಪ್: ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್, ಭಾರತ ಭೂಪಟ, ಭಾರತ ಆಟಗಾರರು, ಕಪ್ ಚಿತ್ರಣವನ್ನು ಹೂವಿನಲ್ಲಿ ಅರಳಿಸಲಾಗಿದೆ.
ಕರ್ನಾಟಕ ಸುವರ್ಣ ಸಂಭ್ರಮ-50: ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾವಿದ್ಯಾಲಯದಿಂದ ಕರ್ನಾಟಕ ಸುವರ್ಣ ಸಂಭ್ರಮಕ್ಕೆ ಸಂಬಂಧಿಸಿದ ಚಿತ್ರಗಳ ಪ್ರದರ್ಶನ, ಕರ್ನಾಟಕದ ಇತಿಹಾಸ, ಏಕೀಕರಣ, ಕಲೆ, ವಾಸ್ತುಶಿಲ್ಪ, ಸಾಂಸ್ದಕೃತಿಕತೆ ಇಲ್ಲಿ ನೋಡಬಹುದಾಗಿದೆ.
ಶಿವನಂದಿ: 16 ಅಡಿ ಎತ್ತರ ಮತ್ತು 10 ಅಡಿ ಅಗಲದ ಶಿವನಂದಿಯ ಕಲಾಕೃತಿ ಸ್ಥಾಪಿಸಲಾಗಿದೆ ಮತ್ತು ಡಾ. ಶಿವಕುಮಾರಸ್ವಾಮೀಜಿಯವರ ಪುತ್ಥಳಿ ಸೇರಿದಂತೆ ಆಕರ್ಷಿಣೀಯವಾದ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.
ಕಾರಂಜಿ, ಲೇಜರ್ ಶೋ: ಸಂಗೀತ ಕಾರಂಜಿಯ ಜೊತೆಗೆ ಲೇಜರ್ ಶೋ ಮೂಲಕ ಕನ್ನಡ ನಾಡಿನ ಸಾಹಿತ್ಯ, ಇತಿಹಾಸ, ಕವಿಗಳು, ಪುನೀತ್ ರಾಜ್ ಕುಮಾರ್ ಅವರ ಬೊಂಬೇ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಹಾಡಿನ ಸಂಯೋಜನೆ ಭಾವನಾಲೋಕಕ್ಕೆ ಕರೆದೊಯ್ಯುವಂತಿತ್ತು.




