ಬೆಂಗಳೂರು: ಹಿಂದೂ ಧರ್ಮ ಯಾವಾಗ ಹುಟ್ಟಿತು? ಅದರ ಸಂಸ್ಥಾಪಕರು ಯಾರು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆಯನ್ನು ಬಿಜೆಪಿ ಬಲವಾಗಿ ಖಂಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಾಲು ಸಾಲು ಪೋಸ್ಟ್ ಮಾಡಿರುವ ಬಿಜೆಪಿ, ಯಾರಿಗಾದರೂ ಅವರ ಮುತ್ತಾತನ, ತಾತನ ಹೆಸರು ಗೊತ್ತಿಲ್ಲವೆಂದರೆ ಅವರಿಗೆ ತಾತ – ತಂದೆಯಿಲ್ಲ ಎಂದಲ್ಲ, ಅವರಿಗೆ ಆ ಬಗ್ಗೆ ಜ್ಞಾನವಿಲ್ಲ ಎಂದಷ್ಟೇ. ಪಾಪ ಪರಮೇಶ್ವರ್ ಅವರ ಸ್ಥಿತಿ ಇಂಡಿಯಾ ಮೈತ್ರಿಕೂಟದ ಪ್ರಭಾವದಿಂದಾಗಿ ಪಲ್ಲಟವಾದ ಹಾಗಿದೆ ಎಂದು ವ್ಯಂಗ್ಯವಾಡಿದೆ.
ಹಿಂದೂ ಧರ್ಮ ಒಬ್ಬ ಪುರುಷ ಅಥವಾ ಒಂದು ಪುಸ್ತಕದಿಂದ ಹುಟ್ಟಿದ ಧರ್ಮವಲ್ಲ. ಅದಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಇದೊಂದು ಸಹಸ್ರಾರು ವರ್ಷಗಳಿಂದ ನಡೆದು ಬಂದ, ಬಹು ಉಪಾಸನಾ ವಿಧದ ಜೀವನ ಪದ್ಧತಿ ಎಂಬ ಕಾರಣಕ್ಕೇ ಇದು ಸನಾತನ ಧರ್ಮ ಮತ್ತು ಭಾರತ ಸನಾತನ ಭೂಮಿ ಎಂದು ಸಮರ್ಥಿಸಿಕೊಂಡಿದೆ. ಔರಂಗಜೇಬನಿಂದ ಹಿಡಿದು ಉದಯನಿಧಿ ಸ್ಟಾಲಿನ್ವರೆಗೆ ಅವೆಷ್ಟೋ ದಾಳಿಕೋರರನ್ನು ಈ ಮಣ್ಣು ಕಂಡ ಮೇಲೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂದು ಹೇಳಿದೆ.
ಧರ್ಮ ಜಿಜ್ಞಾಸೆಗಿಂತಲೂ ಹೆಚ್ಚು ಸದ್ಯಕ್ಕೆ ನಿಮ್ಮ ಪಕ್ಷದಲ್ಲೇ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ಕೊಡುವುದು ನಿಮ್ಮ ವೈಯಕ್ತಿಕ ಹಿತದ ದೃಷ್ಟಿಯಿಂದ ಒಳಿತು ಎಂದು ಸಲಹೆ ಮಾಡಿದೆ.




