ರಾಜ್ಯಕ್ಕೆ 8ರಿಂದ 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಬರುವ ನಿರೀಕ್ಷೆ: ಎಂ ಬಿ ಪಾಟೀಲ್

1 year ago

ಬೆಂಗಳೂರು: ದಾವೋಸ್ ನಲ್ಲಿ ನಡೆಯುವ ಜಾಗತಿಕ ಆರ್ಥಿಕ ಶೃಂಗಸಭೆ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳ ಆಕರ್ಷಣೆಯ ವಿದ್ಯಮಾನ. ಇಲ್ಲಿ ಜಗತ್ತಿನ ಎಲ್ಲಾ ಪ್ರತಿಷ್ಠಿತ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಪ್ರಮುಖರು ಪಾಲ್ಗೊಳ್ಳುತ್ತಾರೆ. ಇಲ್ಲಿ ಹೂಡಿಕೆ ಒಪ್ಪಂದಗಳು ಏರ್ಪಡುತ್ತದೆ. ಹೀಗಾಗಿ ಈ ಶೃಂಗ ಸಭೆಯ ಆಹ್ವಾನಕ್ಕೆ ಎಲ್ಲರೂ ಎದುರು ನೋಡುತ್ತಿರುತ್ತಾರೆ.

ರಾಜ್ಯಗಳ ಮುಖ್ಯಮಂತ್ರಿಗಳು ಕೈಗಾರಿಕೆ ಹಾಗೂ ಹಣಕಾಸು ಸಚಿವರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ, ಈ ಬಾರಿ ಕರ್ನಾಟಕವನ್ನು ಆಹ್ವಾನಿಸಿದ್ದರೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾರೂ ಕೂಡ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್, ರಾಜ್ಯ ಈ ಸಲ ಪ್ರಜ್ಞಾಪೂರ್ವಕವಾಗಿಯೇ ಭಾಗವಹಿಸುತ್ತಿಲ್ಲ. ಅಲ್ಲಿಗೂ ಹೋಗಿ ಒಡಂಬಡಿಕೆಗಳಿಗೆ ಸಹಿ ಹಾಕುವುದು ಮತ್ತು ಅವೇ ಕಂಪನಿಗಳನ್ನು‌‌ ಇಲ್ಲಿಗೂ ಕರೆದು ಮತ್ತೆ ಅದೇ ಒಡಂಬಡಿಕೆಗಳಿಗೆ ಸಹಿ ಹಾಕುವುದರಿಂದ ವೃಥಾ ಗೊಂದಲ ಉಂಟಾಗುತ್ತದೆ. ಇದನ್ನು ತಪ್ಪಿಸಲೆಂದೇ ನಾವು ಈ ಸಲ ದಾವೋಸ್ ಶೃಂಗಸಭೆಯಿಂದ ದೂರ ಉಳಿದಿದ್ದೇವೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಫೆ.11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಜಾಗತಿಕ ಮಟ್ಟದ ಕಂಪನಿಗಳೆಲ್ಲ ಭಾಗವಹಿಸಲಿವೆ. ಇದರಿಂದ ರಾಜ್ಯಕ್ಕೆ 8ರಿಂದ 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಬರುವ ನಿರೀಕ್ಷೆ ಇದೆ. ಹೀಗಾಗಿ ದಾವೋಸ್ ಶೃಂಗದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದರು. 

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಳ್ಳುವ ಒಡಂಬಡಿಕೆಗಳ ಪೈಕಿ ಮುಕ್ಕಾಲು ಪಾಲಾದರೂ ವಾಸ್ತವವಾಗಿ ಬಂಡವಾಳ ರೂಪದಲ್ಲಿ ನಮಗೆ ಬರಬೇಕು. ಇಲ್ಲದೆ ಹೋದರೆ ಎಲ್ಲವೂ ವ್ಯರ್ಥ. ಆದ್ದರಿಂದ ನಾವು ವಾಸ್ತವಿಕ ದೃಷ್ಟಿಕೋನ ಹೊಂದಿದ್ದೇವೆ. ಸಿಎಂ ಸಿದ್ದರಾಮಯ್ಯ ಕೂಡ ಇದನ್ನೇ ಹೇಳಿದ್ದಾರೆ ಎಂದರು.

2022ರಲ್ಲಿ ಬಿಜೆಪಿ ಸರಕಾರ ಕೂಡ ಹೂಡಿಕೆದಾರರ ಸಮಾವೇಶ ಮಾಡಿ, 50 ಲಕ್ಷ ಕೋಟಿ ರೂಪಾಯಿ ಬರುತ್ತದೆ ಎಂದಿತು. ಅದರಲ್ಲೂ ಗ್ರೀನ್ ಎನರ್ಜಿ ವಲಯಕ್ಕೆ 2.40 ಲಕ್ಷ ಕೋಟಿ ರೂಪಾಯಿ ಹೂಡಿಕೆ ಆಗಲಿದೆ ಎಂದಿತು‌. ಆದರೆ ಒಂದು ರೂಪಾಯಿ ಕೂಡ ಬರಲಿಲ್ಲ ಎಂದು ಅವರು ನೈಜ ಚಿತ್ರಣ ಕೊಟ್ಟರು.

ನಮ್ಮಲ್ಲಿ ಗ್ರೀನ್ ಎನರ್ಜಿ ಕ್ಷೇತ್ರಕ್ಕೆ ಅಷ್ಟೊಂದು ಬಂಡವಾಳ ತಡೆದುಕೊಳ್ಳುವ ಧಾರಣಾಶಕ್ತಿಯೇ ಇಲ್ಲ. ಆದರೂ ಬಿಜೆಪಿ ಸರಕಾರ ದೊಡ್ಡದಾಗಿ ಹೇಳಿಕೊಂಡಿತು. ಅಂತಹ ತಪ್ಪು ಈ ಬಾರಿ ಆಗುವುದಿಲ್ಲ ಎಂದರು.

Leave a Reply