ಶಿವಮೊಗ್ಗ: ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದಂದು ಜಿಲ್ಲೆಯ 1 ವರ್ಷದಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆ ನೀಡುವ ಮೂಲಕ ಶೇ.100 ರಷ್ಟು ಗುರಿಯನ್ನು ಸಾಧಿಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮದ ಪೂರ್ವಸಿದ್ದತೆ ಮತ್ತು ಆರೋಗ್ಯ ಇಲಾಖೆಯ ಇತರೆ ಕಾರ್ಯಕ್ರಮಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಜಂತು ಹುಳು ನಿವಾರಣೆ ಮಾಡುವುದು ಅತಿ ಅಗತ್ಯ. ಅದರಿಂದ ಮಕ್ಕಳಲ್ಲಿನ ರಕ್ತಹೀನತೆ, ಏಕಾಗ್ರತೆ ಕೊರತೆಯನ್ನು ನೀಗಿಸಿ, ಕಲಿಕಾ ಸಾಮರ್ಥ್ಯ ಹೆಚ್ಚಿಸಬಹುದು. ಅಂಗನವಾಡಿ, ಶಾಲಾ-ಕಾಲೇಜಿನಲ್ಲಿ ಹಾಜರಾತಿ ಸುಧಾರಿಸಬಹುದು. ಕೆಲಸದ ಸಾಮರ್ಥ್ಯ ಹಾಗೂ ಜೀವನೋಪಾಯದ ಅವಕಾಶವನ್ನು ವೃದ್ದಿಸುತ್ತದೆ. ಆದ್ದರಿಂದ ಡಿ.09 ರ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದದಂದು ಅಂಗನವಾಡಿ, ಶಾಲೆಗಳು, ಪಿಯು, ಐಟಿಐ, ಟೆಕ್ನಿಕಲ್ ಕೋರ್ಸ್, ನರ್ಸಿಂಗ್ ಕಾಲೇಜು, ಪ್ರಥಮ ಪದವಿ, ಮೆಡಿಕಲ್ ಕಾಲೇಜು ಮತ್ತು ಆಯುರ್ವೇದಿಕ್ ಕಾಲೇಜುಗಳಲ್ಲಿ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಯಾದ ಆಲ್ಬೆಂಡಜೋಲ್ನ್ನು ಉಚಿತವಾಗಿ ಮಕ್ಕಳಿಗೆ ನೀಡಲಾಗುವುದು ಎಂದರು.
ಡಿಡಿಪಿಐ, ಎಲ್ಲ ತಾಲ್ಲೂಕುಗಳ ಬಿಇಓ, ಆರೋಗ್ಯ ಅಧಿಕಾರಿಗಳು, ಸಿಡಿಪಿಓ, ಅಂಗನವಾಡಿ ಮೇಲ್ವಿಚಾರಕರು ಸಮನ್ವಯದೊಂದಿಗೆ ಎಲ್ಲ ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ನೀಡಬೇಕು. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಪೋಷಕರಿಗೆ ಮೊದಲೇ ಮಾತ್ರೆ ನೀಡುವ ಬಗ್ಗೆ ಮಕ್ಕಳ ಮೂಲಕ ತಿಳಿಸಬೇಕು. ಹಾಗೂ ಆರೋಗ್ಯ ಇಲಾಖೆ ಸೂಚನೆಯಂತೆಯೇ ಮಾತ್ರೆಗಳನ್ನು ಮಕ್ಕಳಿಗೆ ತಮ್ಮ ಸಮ್ಮುಖದಲ್ಲೇ ನೀಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಆರ್ಸಿಹೆಚ್ ಅಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 470316 ಮಕ್ಕಳು ನೋಂದಣಿಯಾಗಿದ್ದು, ಡಿ.09 ರಂದು ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡುವ ಮೂಲಕ ಮಾತ್ರೆ ನೀಡಲಾಗುವುದು. ಅಂದು ಬಿಟ್ಟು ಹೋದ ಮಕ್ಕಳಿಗೆ ದಿ: 16-12-2024 ರಂದು ಮಾಪ್-ಅಪ್-ರೌಂಡ್ನಲ್ಲಿ ಮಾತ್ರೆ ನೀಡಿ ಶೇ.100 ಗುರಿ ಸಾಧನೆ ಮಾಡಲಾಗುವುದು. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ(ಪುಡಿ ಮಾಡಿ) ಮತ್ತು 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆಯನ್ನು ಜಗಿದು ನುಂಗಲು ನೀಡಲಾಗುವುದು ಎಂದರು.
ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿ ಡಾ.ನಾಗೇಶ್ ಮಾತನಾಡಿ, ಜಿಲ್ಲಾದ್ಯಂತ ಡಿ.07 ರಿಂದ 2025 ರ ಮಾರ್ಚ್ 24 ರವರೆಗೆ ಒಟ್ಟು 100 ದಿನಗಳ ಕಾಲ ಕ್ಷಯ ರೋಗ ಕುರಿತು ಅರಿವು ಮೂಡಿಸುವ ಅಭಿಯಾನ ನಡೆಯಲಿದೆ. ಶೀಘ್ರ ರೋಗ ಪತ್ತೆ ಹಚ್ಚುವುದು, ಗುಣಪಡಿಸುವುದು ಹಾಗೂ ಸಾರ್ವಜನಿಕರಲ್ಲಿ ರೋಗ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿರುತ್ತದೆ. ಹಾಗೂ ಶೇ.80 ರಷ್ಟು ಖಾಯಿಲೆ ಹರಡುವುದನ್ನು ತಡೆಗಟ್ಟುವುದು, ಮರಣ ಪ್ರಮಾಣವನ್ನು ಶೇ.90 ರಷ್ಟು ಕಡಿತಗೊಳಿಸುವುದು ಹಾಗೂ ಟಿ.ಬಿ.ಪರೀಕ್ಷೆ ಮತ್ತು ಚಿಕಿತ್ಸೆಗೆ ತಗಲುವ ವೆಚ್ಚವನ್ನು ಶೂನ್ಯ ಮಾಡುವುದು ಅಭಿಯಾನದ ಉದ್ದೇಶವಾಗಿದೆ ಎಂದರು.
ಸಿಇಓ ಮಾತನಾಡಿ, ಅಭಿಯಾನವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ರೋಗಿಗಳ ಪತ್ತೆ ಹಚ್ಚುವುದು, ಸಮಾಜದಲ್ಲಿ ಸಾರ್ವಜನಿಕರಿಗೆ ಖಾಯಿಲೆ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು, ನಿಕ್ಷಯ್ ಶಿಬಿರಗಳನ್ನು ನಡೆಸುವುದು, ಜಾಥಾ ನಡೆಸುವುದು ಹಾಗೂ ರೋಗಿಗಳಿಗೆ ಪೌಷ್ಟಿಕ ಆಹಾರ ಒದಗಿಸುವುದು ಮತ್ತು ಧಾರ್ಮಿಕ ನಾಯಕರಿಂದ ಸಮಾಜದಲ್ಲಿ ಖಾಯಿಲೆ ಬಗ್ಗೆ ಅರಿವು ಮೂಡಿಸುವುದು, ಪ್ರತಿಜ್ಞೆ ಪಡೆಯುವುದು ಹಾಗೂ ಭಿತ್ತಿ ಪತ್ರಗಳ ಮುಖಾಂತರ ಪ್ರಚಾರ ಮಾಡಬೇಕು. ಹಬ್ಬ ಹರಿದಿನಗಳಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು, ಮಾಧ್ಯಮಗಳ ಮುಖಾಂತರ ಖಾಯಿಲೆ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಆರ್ಬಿಎಸ್ಕೆ ತಂಡ ಶಾಲಾ ಭೇಟಿಯನ್ನು ನಿಗದಿಯಂತೆ ನಿಯಮಿತವಾಗಿ ಮಾಡಬೇಕು ಹಾಗೂ ಸಮರ್ಪಕವಾಗಿ ಮಕ್ಕಳ ತಪಾಸಣೆ ನಡೆಸಬೇಕು. ವಡ್ಡಿನಕೊಪ್ಪದ ಶಾಲೆಗೆ ಭೇಟಿ ನೀಡಿದ ಆರ್ಬಿಎಸ್ಕೆ ತಂಡ ಸಮರ್ಪಕವಾಗಿ ತಪಾಸಣೆ ನಡೆಸದೇ ವರದಿ ನೀಡಿರುವುದು ಗಮನಕ್ಕೆ ಬಂದಿದ್ದು ಆ ತಂಡಕ್ಕೆ ನೋಟಿಸ್ ನೀಡುವಂತೆ ಸೂಚಿಸಿದರು.
ಡಿಎಲ್ಓ ಡಾ.ಕಿರಣ್ ಮಾತನಾಡಿ, ಅಂಧತ್ವ ಮುಕ್ತ ಶಿವಮೊಗ್ಗ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ 12950 ಗುರಿ ನೀಡಲಾಗಿದ್ದು, 9299 ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಶೇ.72 ಪ್ರಗತಿ ಸಾಧಿಸಲಾಗಿದೆ. 5 ಎನ್ಜಿಓ ಗಳ ಮೂಲಕ ಕಣ್ಣಿನ ಇತರೆ ಶಸ್ತ್ರಚಕಿತ್ಸೆಗಳನ್ನು ಕೈಗೊಳ್ಳಲಾಗುತ್ತಿದ್ದು ಕಳೆದ ಸಾಲಿನಲ್ಲಿ 4380 ಗುರಿಯಲ್ಲಿ 3068 ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಸಕ್ತ ಸಾಲಿಗೆ 3400 ಶಸ್ತ್ರಚಿಕಿತ್ಸೆಗಳ ಗುರಿ ನೀಡಲಾಗಿದ್ದು ಈಗಾಗಲೇ 2290 ಶಸ್ತ್ರಚಿಕಿತ್ಸೆ ಆಗಿದೆ. ಕಣ್ಣಿನ ದೋಷ ಇರುವವರಿಗೆ 8000 ಕನ್ನಡಕಗಳನ್ನು ನೀಡಲಾಗಿದೆ. ಗ್ಲಾಕೋಮ, ಡಯಾಬಿಟಿಕ್ ರೆಟಿನೊಪಥಿ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದ್ದು ಸದರಿ ಸಮಸ್ಯೆಗಳ ಚಿಕಿತ್ಸೆಗೆ ಎನ್ಜಿಓ ಗಳು ಸಹಕರಿಸಬೇಕು ಎಂದು ಕೋರಿದರು.
ಸಭೆಯಲ್ಲಿ ಡಿಹೆಚ್ಓ ಡಾ.ನಟರಾಜ್, ವಿವಿಧ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಟಿಹೆಚ್ಓ ಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಡಿಡಿಪಿಯು ನಾಗರಾಜ್ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.




