ಜಮೀರ್ ಅಹಮದ್ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಗೋಪಾಲಕೃಷ್ಣ ಬೇಳೂರು

10 months ago

ಬೆಂಗಳೂರು: ಮನೆ ಹಂಚಿಕೆಗೆ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳಿಗೆ ಲಂಚ ನೀಡಬೇಕಿದೆ ಎಂದು ಹಿರಿಯ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಆರೋಪ ನಿಜವಾಗಿದ್ದರೆ ವಸತಿ ಸಚಿವ ಜಮೀರ್ ಅಹಮದ್ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಸಾಗರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆಯ ನಂತರ ಜಮೀರ್ ಅಹ್ಮದ್ ಖಾನ್ ನಿರ್ದೋಷಿ ಎಂದು ಸಾಬೀತಾದಲ್ಲಿ ಮತ್ತೆ ಸಚಿವರಾಗಿ ಮುಂದುವರೆಯಲಿ ಎಂದರು. 

ವಸತಿ ಯೋಜನೆಯಲ್ಲಿನ ಲಂಚದ ಬಗ್ಗೆ ಹಿರಿಯ ಸದಸ್ಯರೊಬ್ಬರು ಧ್ವನಿಯೆತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಸಚಿವರು ತನಿಖೆಗೆ ಒಳಪಡಬೇಕು. ಅಲ್ಲಿಯವರೆಗೂ ರಾಜೀನಾಮೆ ನೀಡುವುದು ಒಳ್ಳೆಯದು ಎಂದರು.

ಪಕ್ಷದ ಶಾಸಕರೇ ಸಚಿವರ ಮೇಲೆ ಈ ರೀತಿ ಆರೋಪ ಮಾಡುವುದರಿಂದ ಪಕ್ಷದಲ್ಲಿ ಗೊಂದಲ ಉಂಟಾಗುತ್ತದೆ. ಆರೋಪ ಸತ್ಯವೋ ಸುಳ್ಳೋ, ಸತ್ಯಾಂಶ ಹೊರಬರಬೇಕು. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸುವುದು ಸೂಕ್ತ ಎನ್ನುವುದು ತಮ್ಮ ಅಭಿಪ್ರಾಯ ಎಂದರು.

ತನಿಖೆ ಮುಗಿದ ಬಳಿಕ ಜಮೀರ್ ಅಹಮದ್ ಖಾನ್ ಬೇಕಾದರೆ ಮತ್ತೆ ಮಂತ್ರಿ ಆಗಲಿ. ಇದಕ್ಕೆ ಯಾವುದೇ ತಕರಾರು ಇಲ್ಲ. ಈ ಹಿಂದೆ ಬೇರೆ ಬೇರೆ ಹಗರಣಗಳಲ್ಲೂ ಕೂಡ ಹಲವರು ರಾಜೀನಾಮೆ ಕೊಟ್ಟಿರುವ ನಿದರ್ಶನವಿದೆ ಎಂದರು.

ಜಮೀರ್ ಅಹಮದ್ ಖಾನ್ ತಪ್ಪಿತಸ್ಥರು ಅಲ್ಲ ಎಂದ ತಕ್ಷಣ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಅವಕಾಶವೂ ಇದೆ ಎಂದರು.

Leave a Reply