ಎಲ್ಲರೆದುರು 6 ಬಾರಿ ತಲಾಖ್ ಹೇಳಿದ್ದಾನೆ ಎಂದು ದೂರು ಕೊಟ್ಟ ಮಹಿಳೆ

10 months ago

ಬೆಂಗಳೂರು: ಪರಸ್ತ್ರೀಯರ ಸಹವಾಸ ಹೊಂದಿರುವ ಪತಿ ತನ್ನನ್ನು ರಾಜಕಾರಣಿಯೊಬ್ಬರಿಗೆ ಹಣಕ್ಕಾಗಿ ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದಾನೆ ಎಂದು ಆರೋಪಿಸಿ ಪತ್ನಿ ಬನಶಂಕರಿ ಪೊಲೀಸರ ಮೊರೆ ಹೋಗಿದ್ದಾರೆ.

ಪತ್ನಿ ನೀಡಿರುವ ದೂರಿನನ್ವಯ ಆಕೆಯ ಪತಿ, ಮಾವ ಹಾಗು ಅತ್ತೆಯ ವಿರುದ್ಧ ಬನಶಂಕರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದೂರುದಾರ ಮಹಿಳೆಗೆ 2021ರಲ್ಲಿ ಆರೋಪಿಯೊಂದಿಗೆ ವಿವಾಹವಾಗಿದ್ದು, ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ. ಪತಿ ತನಗೆ ಕಿರುಕುಳ ನೀಡಲಾರಂಭಿಸಿದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಹಿಂಸೆಯಿಂದ ಗರ್ಭಪಾತದ ಆರೋಪ: ಗರ್ಭಿಣಿಯಾಗಿದ್ದ ತನಗೆ ದೈಹಿಕ ಹಿಂಸೆ ನೀಡಿದ್ದರಿಂದ ಗರ್ಭಪಾತವಾಯಿತು. ಇದು ನನಗೆ ಶಾಶ್ವತವಾಗಿ ಭಾವನಾತ್ಮಕ ಮತ್ತು ದೈಹಿಕ ಆಘಾತಕ್ಕೆ ಕಾರಣವಾಯಿತು. ಪರಸ್ತ್ರೀಯರ ಸಹವಾಸ ಹೊಂದಿರುವ ಪತಿ ನನ್ನನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾನೆ. ಇದನ್ನು ವಿರೋಧಿಸಿದ್ದಕ್ಕೆ ಚಾಕು ಮತ್ತು ಪಿಸ್ತೂಲ್​ ತೋರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿದ್ದಾರೆ.

ಅಲ್ಲದೆ, ನನ್ನ ಕುಟುಂಬಕ್ಕೂ ಹಾನಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಪತಿ ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ. ಇದಕ್ಕೆಲ್ಲಾ ಕುಮ್ಮಕ್ಕು ನೀಡುವಂತೆ ಆತನನ್ನು ರಕ್ಷಿಸುವ ಪ್ರಭಾವಿ ವ್ಯಕ್ತಿಗಳ ಬೆಂಬಲವಿದೆ. ನೀನು ಕಾನೂನಾತ್ಮಕವಾಗಿ ಏನೂ ಮಾಡಲು ಸಾಧ್ಯವಿಲ್ಲ. ನನಗೆ ಮಂತ್ರಿಗಳು ಮತ್ತು ರೌಡಿಗಳ ಬೆಂಬಲವಿದೆ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಮಾರಾಟ ಮಾಡಲು ಪ್ಲಾನ್​: ಅಷ್ಟೇ ಅಲ್ಲದೆ, ಹಣಕ್ಕಾಗಿ ನನ್ನನ್ನು ಓರ್ವ ರಾಜಕಾರಣಿಗೆ ಮಾರಾಟ ಮಾಡಲು ಯೋಜಿಸಿದ್ದಾನೆ ಎಂದು ನನಗೆ ತಿಳಿದುಬಂದಿದೆ. ಇದರ ನಂತರ ಆತನ ಮನೆಯಿಂದ ತಪ್ಪಿಸಿಕೊಂಡು ಕಳೆದ 2 ತಿಂಗಳಿನಿಂದ ನನ್ನ ತಾಯಿಯೊಂದಿಗೆ ವಾಸವಿದ್ದೇನೆ. ಜೂನ್ 4ರಂದು, ನನ್ನ ಬಟ್ಟೆ ಮತ್ತು ವೈಯಕ್ತಿಕ ವಸ್ತುಗಳನ್ನು ತೆಗೆದುಕೊಳ್ಳಲು ನಾನು ಪತಿಯ ಮನೆಗೆ ಹೋಗಿದ್ದಾಗ ಆತ, ನನಗೆ ಹಾಗೂ ನನ್ನ ತಾಯಿಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ್ದ. ಆ ದಿನ ಎಲ್ಲರೆದುರು 6 ಬಾರಿ “ತಲಾಖ್” ಹೇಳಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಠಾಣೆ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

Leave a Reply