ಬೆಂಗಳೂರು ದಕ್ಷಿಣ: ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಬಿಜೆಪಿ ಸತತವಾಗಿ ಆಯ್ಕೆಯಾಗುತ್ತಾ ಬಂದಿದೆ. ಹಿರಿಯ ನಾಯಕ ಎಂ ಶ್ರೀನಿವಾಸ್ ಅವರ ಸೋದರ ಎಂ ಕೃಷ್ಣಪ್ಪ ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಈ ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ವರು ಬೇರೆ -ಬೇರೆ ಅಭ್ಯರ್ಥಿಗಳನ್ನು ಬಿಜೆಪಿ ವಿರುದ್ಧ ಕಣಕ್ಕಿಳಿಸಿದೆ.
ಜೆಡಿಎಸ್ ನಿಂದ ಸತತ ಸ್ಪರ್ಧೆ ಮಾಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ ರೆಡ್ಡಿ ಅವರಿಗೆ ಈ ಬಾರಿ ಟಿಕೆಟ್ ತಪ್ಪಿದೆ. ಇದರಿಂದ ಮುನಿಸಿಕೊಂಡಿರುವ ಅವರು ಕಾಂಗ್ರೆಸ್ ಸೇರಿ ಕಾಂಗ್ರೆಸ್ ಅಭ್ಯರ್ಥಿ ಆರ್ ಕೆ ರಮೇಶ್ ಪರವಾಗಿ ಭರಾಟೆ ಪ್ರಚಾರ ನಡೆಸುತ್ತಿದ್ದಾರೆ.
ಆರ್ ಕೆ ರಮೇಶ್ ಕಳೆದೊಂದು ವರ್ಷದಿಂದ ತಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಕೆಲಸ ಮಾಡುತ್ತಿರುವುದು ಅವರಿಗೆ ಸಾಕಷ್ಟು ಅನುಕೂಲ ತಂದಿದೆ. ತಮ್ಮದೇ ಆದ ಮತ ಬ್ಯಾಂಕ್ ಹೊಂದಿರುವ ಪ್ರಭಾಕರ್ ರೆಡ್ಡಿ ಇವರನ್ನು ಬೆಂಬಲಿಸಿರುವುದು ಮತ್ತಷ್ಟು ಶಕ್ತಿ ಬರುವಂತೆ ಮಾಡಿದೆ.
ಜೆಡಿಎಸ್ ಎಚ್ ಪಿ ರಾಜೇಶ್ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ರೆಡ್ಡಿ ಸಮುದಾಯಕ್ಕೆ ಸೇರಿದ ಹೆಚ್ಚಿನ ಸಂಖ್ಯೆಯ ಮತದಾರರು ಈ ಕ್ಷೇತ್ರದಲ್ಲಿದ್ದು ಅಷ್ಟೇ ಪ್ರಮಾಣದಲ್ಲಿ ಒಕ್ಕಲಿಗ ಸಮುದಾಯದ ಮತದಾರರು ಇದ್ದಾರೆ. ಇವರನ್ನು ಜೆಡಿಎಸ್ ಬಲವಾಗಿ ನಂಬಿದೆ. ಎರಡು ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವಿನ ಸಮೀಪ ಬಂದಿತ್ತು. ಆದರೆ ಸತತವಾಗಿ ಮೂರು ಬಾರಿ ಆಯ್ಕೆಯಾಗಿರುವ ಕೃಷ್ಣಪ್ಪ ತಮ್ಮದೇ ಆದ ಮತ ಬ್ಯಾಂಕ್ ಹೊಂದಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.



