ಬೆಂಗಳೂರು: ವಕ್ಫ್ ಮಂಡಳಿ ಹಿಂದೂಗಳು ಹಾಗೂ ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದು, ಈ ಹೋರಾಟಕ್ಕೆ ತಕ್ಕ ಮಟ್ಟಿನ ಜಯ ಸಿಕ್ಕಿದೆ. ಬಿಜೆಪಿಯ ಹೋರಾಟಕ್ಕೆ ಮಣಿದ ಸರ್ಕಾರ ಸಮಿತಿ ರಚನೆಗೆ ತೀರ್ಮಾನಿಸಿದೆ. ಜೊತೆಗೆ ಬಾಣಂತಿಯರ ಸಾವಿನ ಪ್ರಕರಣವನ್ನೂ ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನ ಹತ್ತು ದಿನ ನಿಗದಿಯಾಗಿತ್ತು. ಆದರೆ ಕನ್ನಡ ಸಾಹಿತ್ಯ ಸಮ್ಮೇಳನ ಇದೆ ಎಂದು ಅದನ್ನು 9 ದಿನಕ್ಕೆ ಇಳಿಕೆ ಮಾಡಲಾಯಿತು. ಬಸವಣ್ಣನವರ ವರ್ಣಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಒಂದು ದಿನ ಕಳೆಯಿತು. ಉಳಿದಿದ್ದು ಏಳು ದಿನ ಮಾತ್ರ. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿಧನದಿಂದ ಎರಡು ದಿನ ಸದನ ನಡೆಯಲಿಲ್ಲ. ಉಳಿದಂತೆ ಬಿಜೆಪಿಗೆ ಚರ್ಚೆಗೆ ಕೇವಲ ಐದು ದಿನ ದೊರೆತಿದ್ದು, ವಕ್ಫ್ ಬೋರ್ಡ್, ಬಾಣಂತಿಯರ ಸಾವು, ಅನುದಾನ ತಾರತಮ್ಯ, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಿ ಸರ್ಕಾರವನ್ನು ಕಟ್ಟಿ ಹಾಕುವ ಕೆಲಸ ಮಾಡಿದ್ದೇವೆ. ಇದಕ್ಕೆ ಸಹಕರಿಸಿದ ಎಲ್ಲ ಶಾಸಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಸದನದಲ್ಲಿ ಒಟ್ಟು ಎರಡು ಗಂಟೆಗಳ ಕಾಲ ನಾನು ವಕ್ಫ್ ಬೋರ್ಡ್ ವಿಚಾರವಾಗಿ ದಾಖಲೆ ಸಮೇತ ಮಾತನಾಡಿದ್ದೇನೆ. ಸರ್ಕಾರದ ಆದೇಶ, ಕೋರ್ಟ್ ಆದೇಶ, ಬ್ರಿಟಿಷರಿಂದ ಆರಂಭವಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದವರೆಗೂ ಯಾವ ರೀತಿ ಮುಸ್ಲಿಮರನ್ನು ವೋಟ್ ಬ್ಯಾಂಕ್ ಆಗಿ ಹಂತ ಹಂತವಾಗಿ ಬಳಕೆ ಮಾಡಲಾಗಿದೆ ಎಂದು ವಿವರಿಸಿದ್ದೇನೆ ಎಂದರು.
ಮುಸ್ಲಿಮರ ಆಸ್ತಿ ಕಬಳಿಕೆ ತಡೆಯಲು ಬ್ರಿಟಿಷರು ವಕ್ಫ್ ಬೋರ್ಡ್ ಸ್ಥಾಪಿಸಿದರು. ಆದರೆ ಕಾಂಗ್ರೆಸ್ನವರು ಮುಸ್ಲಿಮರಿಗೆ ಅನುಕೂಲವಾಗುವ ಕಾಯಿದೆ ತಂದರು. ಮುಸ್ಲಿಮರಿಗೆ ಹಿಂದೂಗಳಿಗಿಂತ ಎತ್ತರದ ಸ್ಥಾನ ನೀಡಿದರು. ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ವಕ್ಫ್ ಬೋರ್ಡ್ಗೆ ವಿಶೇಷ ಅಧಿಕಾರಗಳನ್ನು ಕೊಟ್ಟರು. ಮನಮೋಹನ್ ಸಿಂಗ್ ಅವರಂತೂ ಒನ್ಸ್ ವಕ್ಫ್ ಬೋರ್ಡ್ ಅಲ್ ವೇಸ್ ವಕ್ಫ್ ಬೋರ್ಡ್ ಎಂಬ ಕಾನೂನು ತಂದರು. ಇವರು ಈ ಕಾನೂನು ಮಾಡಿದ ಬಳಿಕ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ವಕ್ಫ್ ಬೋರ್ಡ್ ಸೇರಿತು ಎಂದರು.
ಕರ್ನಾಟಕದಲ್ಲಿ ವಕ್ಫ್ ವೆಬ್ಸೈಟ್ನಲ್ಲಿ 1.11 ಲಕ್ಷಕ್ಕೂ ಹೆಚ್ಚು ಎಕರೆ ಜಮೀನು ಸ್ವಾಧೀನದಲ್ಲಿದೆ ಎಂದಿದೆ. ಅದರಲ್ಲಿ 86 ಸಾವಿರ ಎಕರೆ ವಿವಾದದಲ್ಲಿದೆ. ಚಿಕ್ಕಬಳ್ಳಾಪುರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಓದಿದ ಶಾಲೆಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸಿ ಅಲ್ಲಿ ಮಸೀದಿ ಕಟ್ಟಿದ್ದಾರೆ. ರಾಷ್ಟ್ರಧ್ವಜ ಹಾರಿಸಬೇಕಾದ ಜಾಗದಲ್ಲಿ ಹಸಿರು ಧ್ವಜ ಹಾರಿಸುತ್ತಿದ್ದಾರೆ. ಬೀದರ್ನಲ್ಲಿ 560 ಎಕರೆ ಇರುವ ಹಳ್ಳಿಯನ್ನು ವಕ್ಫ್ ಬೋರ್ಡ್ ಆಸ್ತಿ ಮಾಡಿಬಿಟ್ಟಿದ್ದಾರೆ. ಇಷ್ಟೆಲ್ಲ ವಿಚಾರಗಳನ್ನು ಮಂಡಿಸಿದ ಬಳಿಕ ನಮ್ಮ ಹೋರಾಟಕ್ಕೆ ಮಣಿದ ಸರ್ಕಾರ, ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿ ರಚಿಸುತ್ತೇವೆ ಎಂದು ಭರವಸೆ ನೀಡಿದೆ. ಇದು ಬಿಜೆಪಿಯ ಹೋರಾಟಕ್ಕೆ ಸಂದ ಜಯ. ಈಗ ಸರ್ಕಾರ ನ್ಯಾಯಾಂಗ ತನಿಖೆಗೆ ನಿರ್ಧರಿಸಿದೆ. ಯಾವೆಲ್ಲಾ ರೈತರಿಗೆ ಅನ್ಯಾಯ ಆಗಿದೆ ಅವರು ಈಗ ಮನವಿ ಸಲ್ಲಿಸಬಹುದು. ಈ ಮೂಲಕ ವಕ್ಫ್ ಬೋರ್ಡ್ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದೇವೆ ಎಂದರು.
ಬಾಣಂತಿಯರು ಹಾಗೂ ನವಜಾತ ಶಿಶುಗಳ ಸಾವಿಗೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಬಹಳಷ್ಟು ಚರ್ಚೆ ಮಾಡಿದ್ದೇವೆ. ಅವಧಿ ಮುಗಿದ ಔಷಧಿ ಬಗ್ಗೆಯೂ ದಾಖಲೆ ಕೊಟ್ಟಿದ್ದೇನೆ. ಆರೋಗ್ಯ ಸಚಿವರ ರಾಜೀನಾಮೆಗೂ ಸದನದಲ್ಲಿ ಆಗ್ರಹಿಸಿದ್ದೇವೆ. ಇದನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರ ಒಪ್ಪಿದೆ. ಇದು ಕೂಡ ವಿಧಾನಸಭೆಯ ಒಳಗೆ ಬಿಜೆಪಿಯ ಹೋರಾಟಕ್ಕೆ ಸಿಕ್ಕ ಜಯ ಎಂದರು.
ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಬಿಜೆಪಿಯ 30 ಕ್ಕೂ ಹೆಚ್ಚು ಶಾಸಕರು ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಂತೆ ಭಾಷಣ ಮಾಡುವುದನ್ನು ಬಿಡಬೇಕು. ಕಳೆದ ಅಧಿವೇಶನದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿ ಉತ್ತರ ಕರ್ನಾಟಕಕ್ಕೆ ನಾನು ಏನೇನು ಕೊಡುತ್ತೇನೆ ಎಂದು ಘೋಷಿಸಿದ್ದರು. ಬೀದರ್, ಧಾರವಾಡ, ವಿಜಯಪುರ, ಕಲ್ಬುರ್ಗಿ ಹೀಗೆ ಎಲ್ಲಾ ಜಿಲ್ಲೆಗೆ ಒಂದೊಂದು ಕೈಗಾರಿಕೆಯನ್ನು ತರುತ್ತೇನೆ ಎಂದಿದ್ದರು. ನಂಜುಡಪ್ಪ ವರದಿಯಂತೆ ಸಮಿತಿ ನೇಮಕ ಮಾಡುತ್ತೇನೆ, ಆರು ತಿಂಗಳಲ್ಲಿ ವರದಿ ನೀಡುತ್ತೇನೆ ಎಂದಿದ್ದರು. ಆದರೆ ವರ್ಷ ಕಳೆದರೂ ಇನ್ನೂ ವರದಿ ಬರಲಿಲ್ಲ. ಪ್ರವಾಸೋದ್ಯಮಕ್ಕೆ ಹಣ ಕೊಡುತ್ತೇನೆ ಎಂದು ಹೇಳಿ ಅದನ್ನೂ ಮಾಡಲಿಲ್ಲ. ಕಳೆದ ಬಾರಿ ಹೇಳಿದ್ದನ್ನೇ ಮಾಡದ ಮುಖ್ಯಮಂತ್ರಿ, ಈಗ ಮತ್ತೆ ಘೋಷಣೆ ಮಾಡಿದ್ದಾರೆ ಎಂದರು.
ಸ್ಪೀಕರ್ ಯು.ಟಿ.ಖಾದರ್ ಅವರು ಅಧಿವೇಶನವನ್ನು ಇನ್ನಷ್ಟು ಚೆನ್ನಾಗಿ ನಡೆಸಬಹುದಿತ್ತು. ಅವರಿನ್ನೂ ಕಾಂಗ್ರೆಸ್ ಮನಸ್ಥಿತಿಯಲ್ಲೇ ಇದ್ದಾರೆ. ಸ್ಪೀಕರ್ ಯಾವುದೇ ಪಕ್ಷಕ್ಕೆ ಸೀಮಿತವಾಗಬಾರದು. ಅವರು ಆಡಳಿತ ಪಕ್ಷದ ಕಡೆ ನೋಡುವ ಬದಲಾಗಿ, ವಿಪಕ್ಷಕ್ಕೆ ಹೆಚ್ಚಿನ ಅವಕಾಶ ಕೊಟ್ಟರೆ ಜನರಿಗೆ ನ್ಯಾಯ ಕೊಡಿಸಬಹುದು. ಇನ್ನು ಮುಂದೆಯಾದರೂ ಸ್ಪೀಕರ್ ಆಡಳಿತ ಪಕ್ಷದ ಕಡೆಗೆ ನೋಡುವುದನ್ನು ಬಿಟ್ಟು ವಿರೋಧ ಪಕ್ಷದ ಕಡೆಗೆ ನೋಡಬೇಕು ಎಂದರು.
ಶಾಸಕ ಸಿ.ಟಿ.ರವಿ ಅವರನ್ನು ಪೊಲೀಸರು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋದರು. ಸೇಫ್ಟಿ ದೃಷ್ಟಿಯಿಂದ ಕೆಲವರು ಕಾಡು, ಕ್ವಾರಿಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಪೊಲೀಸರು ಹೊಸ ಸೇಫ್ಟಿ ಮಾರ್ಗ ಹುಡುಕಿದ್ದಾರೆ. ಮುಖ್ಯಮಂತ್ರಿ ಹಾಗೂ ಸಚಿವರನ್ನು ಸುರಕ್ಷತೆ ದೃಷ್ಟಿಯಿಂದ ಕಬ್ಬಿನ ಗದ್ದೆಗೆ ಅಥವಾ ಕ್ವಾರಿಗೆ ಕರೆದುಕೊಂಡು ಹೋಗಿ ಬಿಡುವುದು ಉತ್ತಮ ಎಂದರು.
ಒಬ್ಬ ವಿಧಾನಪರಿಷತ್ ಸದಸ್ಯನಿಗೆ ಸುರಕ್ಷತೆ ಕೊಡಲು ಸಾಧ್ಯವಾಗದ ಸರ್ಕಾರ, ಅಪರಾಧಿಗಳಿಂದ ಜನರನ್ನು ಹೇಗೆ ಕಾಪಾಡುತ್ತದೆ? ಸಿ.ಟಿ.ರವಿ ನಕ್ಸಲ್ ಪ್ರದೇಶದಿಂದ ಬಂದವರು. ಅವರಿಗೆ ಮೊದಲೇ ನಕ್ಸಲರಿಂದ ಪ್ರಾಣ ಬೆದರಿಕೆ ಇದ್ದು, ಅಂತಹವರನ್ನು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದಾರೆ. ಅವರಿಗೆ ನಕ್ಸಲರು ಗುಂಡು ಹೊಡೆಯಲಿ ಎಂಬ ಕಾರಣಕ್ಕೆ ಅಲ್ಲಿಗೆ ಕರೆದುಕೊಂಡು ಹೋದರೇ? ಈ ಪ್ರಕರಣವನ್ನು ಸದನದ ಒಳಗೆ ಬಗೆಹರಿಸಬೇಕಿತ್ತು. ಅದನ್ನು ಬಿಟ್ಟು ಎಲ್ಲೋ ಪ್ರಕರಣ ದಾಖಲಿಸಿ ರಾತ್ರಿಯೆಲ್ಲಾ ಬಸ್ನಲ್ಲಿ ಸುತ್ತಾಡಿಸಲಾಗಿದೆ. ಹೀಗೆ ಬಂಧಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ. ಬಂಧನ ಬಳಿಕ ಪೊಲೀಸ್ ಅಧಿಕಾರಿಗಳು ಫೋನ್ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದರು.




