ಕಲಾಪದಲ್ಲಿ ವ್ಯಕ್ತಿಗತ ಮತ್ತು ದ್ವೇಷ ಪೂರಿತ ಭಾಷೆ ಬಳಸುವುದು ಕೆಟ್ಟ ಸಂದೇಶ: ಡಾ. ಎಚ್ ಸಿ ಮಹದೇವಪ್ಪ

1 year ago

ಮೈಸೂರು: ಪ್ರಜಾಪ್ರಭುತ್ವ ಮತ್ತು ಜನರ ಸಂಕಷ್ಟಗಳನ್ನು ಹೇಳಬೇಕಾದ ವಿಧಾನಸಭೆಯ ಕಲಾಪದಲ್ಲಿ ವ್ಯಕ್ತಿಗತ ಮತ್ತು ದ್ವೇಷ ಪೂರಿತ ಭಾಷೆ ಬಳಸುವುದು ಮತ್ತು ಸ್ಪೀಕರ್ ಅವರ ಮೇಲೆಯೇ ಕೆಟ್ಟ ವರ್ತನೆ ತೋರುವುದು ಜನ ಪ್ರತಿನಿಧಿಗಳು ಜನ ಸಾಮಾನ್ಯರಿಗೆ ನೀಡುವಂತಹ ಕೆಟ್ಟ ಸಂದೇಶವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್ ಸಿ ಮಹದೇವಪ್ಪ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಹನಿ ಟ್ರ್ಯಾಪ್ ವಿಷಯಕ್ಕೆ ಸಂಬಂಧಿಸಿದಂತೆ ಇದೊಂದು ಕೆಟ್ಟ ಸಂಗತಿಯಾಗಿದ್ದು ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳ ಚಾರಿತ್ರ್ಯ ಹರಣ ಮಾಡಲು ಬಳಸುವ ಕುತಂತ್ರವಾಗಿದೆ ಎಂದರು.

ಈ ರೀತಿಯ ಕುತಂತ್ರಗಳು ದಶಕಗಳಿಂದ ಚಾಲ್ತಿಯಲ್ಲಿ ಇದ್ದು ಇದನ್ನು ಸೂಕ್ತ ಕಾಯ್ದೆಯ ಜಾರಿಯ ಮೂಲಕ ತಡೆಗಟ್ಟದೇ ಹೋದರೆ ಸಾರ್ವಜನಿಕ ಜೀವನದ ಮಹತ್ವವು ಜನರ ಕಣ್ಣಲ್ಲಿ ಸಂಪೂರ್ಣ ಕುಸಿದು ಹೋಗುತ್ತದೆ. ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ನಡೆಯಲು ನಾವು ಆಸ್ಪದ ಕೊಡಬಾರದು ಎಂದರು.

ಹನಿಟ್ರ್ಯಾಪ್ ವಿಷಯಕ್ಕೆ ಸಂಬಂಧಿತ ಸಚಿವ ರಾಜಣ್ಣ ಅವರು ಗೃಹ ಸಚಿವರಿಗೆ ದೂರನ್ನು ನೀಡಿದ್ದು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದಾರೆ. ಈ ವಿಷಯದಲ್ಲಿ ಸೂಕ್ತ ತನಿಖೆ ನಡೆಯಲಿದ್ದು ಬಾಧಿತರಿಗೆ ನ್ಯಾಯ ತೊರಲಿದೆ ಎಂದರು.

Leave a Reply