ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ವರ್ಗದ ಯುವಕರು ಡೆಲಿವರಿ ಸೇರಿದಂತೆ ಸ್ವ ಉದ್ಯೋಗದಲ್ಲಿ ತೊಡಗಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನೂರು ಫಲಾನುಭವಿಗಳಿಗೆ ನೂರು ದ್ವಿಚಕ್ರ ವಾಹನಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಂದು ಆಯೋಜಿಸಿದ್ದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಸಮುದಾಯದವರಿಗೆ ವ್ಯಾಪಾರ ಮಾಡಲು ವಾಹನ ನೀಡಬೇಕು ಎಂದು ಬಜೆಟ್ನಲ್ಲಿ ಇಲ್ಲದಿದ್ದರೂ 250 ಕೋಟಿಗಿಂತ ಹೆಚ್ವು ಹಣವನ್ನು ಅಧಿಕವಾಗಿ ಒದಗಿಸಿ ಬಾಬು ಜಗಜೀವನ್ ರಾಂ ಅವರ ಹೆಸರಿನಲ್ಲಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ದ್ವಿಚಕ್ರ ವಾಹನ ಒದಗಿಸಲಾಗುತ್ತಿದೆ ಎಂದರು.
ಈ ವರ್ಷ ನೂರು ಎಸ್ಸಿ-ಎಸ್ಟಿ ಹಾಸ್ಟೆಲ್ ಹಾಗೂ 50 ಕನಕದಾಸ ಹಾಸ್ಟೆಲ್ಗಳಿಗೆ ಮಂಜೂರಾತಿ ನೀಡಲಾಗಿದೆ. ವಿದ್ಯಾಸಿರಿ ಯೋಜನೆಯಡಿ 33 ಸಾವಿರ ವಿದ್ಯಾರ್ಥಿಗಳಿಗೆ ಸುಮಾರು 59 ಕೋಟಿಗಿಂತ ಹೆಚ್ವು ಅನುದಾನ ನೀಡಿ ಹಾಸ್ಟೆಲ್ಗಳಲ್ಲಿ ಪ್ರವೇಶ ನೀಡಲಾಗಿದೆ ಎಂದರು.
ನವಕರ್ನಾಟಕದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಮೊದಲ ವ್ಯಕ್ತಿಗೆ ಸಿಗುವ ಸ್ಥಾನಮಾನ, ಗೌರವ, ಅವಕಾಶ ದೊರಕುವುದು ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ವಿಭಿನ್ನವಾಗಿ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದೆ. 17 ಸಾವಿರ ಜನರಿಗೆ ಗಂಗಾಕಲ್ಯಾಣ ಮಂಜೂರಾಗಿದೆ. 595 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡು ಅನುದಾನ ಬಿಡುಗಡೆಯಾಗಿದೆ ಎಂದರು.
ಮೊದಲ ಹಂತದಲ್ಲಿ 8 ಸಾವಿರ ಫಲಾನುಭವಿಗಳಿಗೆ 75 ಸಾವಿರ ರೂ. ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಅನುಮೋದನೆ ಪಡೆದುಕೊಂಡ ಫಲಾನುಭವಿಯ ಹೊಲದಲ್ಲಿಯೇ ಕೊಳವೆಬಾವಿ ಕೊರೆಸಬೇಕು. ಸ್ಥಳ ಪರಿಶೀಲನೆ ಮಾಡಬೇಕು ಆಗ ಮಾತ್ರ ನ್ಯಾಯ ಸಿಗುತ್ತದೆ ಎಂದರು.
ಭಾರತ ಮತ್ತು ಕರ್ನಾಟಕ ಹಲವಾರು ಆರ್ಥಿಕ ಸ್ತರಗಳಲ್ಲಿರುವ ಜನ ಮತ್ತು ಜನಾಂಗಗಳಿಂದ ಕೂಡಿರುವ ದೇಶ. ಸ್ವತಂತ್ರಪೂರ್ವದಿಂದಲೂ, ಮಾನಸಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ತುಳಿತಕ್ಕೊಳಪಟ್ಟ ಹಲವಾರು ಸಮಾಜಗಳಿವೆ ಭಾರತ ರತ್ನ, ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಜನಾಂಗಗಳಿಗೆ ಹಕ್ಕು ನೀಡಿ ಅವರು ಮುಖ್ಯವಾಹಿನಿಗೆ ಸೇರಿ ಶೈಕ್ಷಣಿಕಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸುಧಾರಿಸಿಕೊಂಡು ತಮ್ಮ ಕುಟುಂಬವನ್ನು ದೇಶ ಕಟ್ಟಲು ಪಾತ್ರ ವಹಿಸುತ್ತಿದ್ದಾರೆ ಎಂದರು.
ಸಂವಿಧಾನದ ಹಕ್ಕು 75 ವರ್ಷವಾದ ನಂತರ ಎಷ್ಟರಮಟ್ಟಿಗೆ ಅಂಬೇಡ್ಕರ್ ಅವರ ಕನಸನ್ನು ಈಡೇರಿಸಲು ಸಾಧ್ಯವಾಗಿದೆ ಎಂಬ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಿದು. ಪ್ರತಿ ಹತ್ತು ವರ್ಷಕ್ಕೊಮ್ಮೆ ಇದರ ಪುನರ್ವಿಮರ್ಶೆಯಾಗಬೇಕು. ಮೀಸಲಾತಿ ಮತ್ತು ಈ ಎಲ್ಲಾ ಸಮುದಾಯಗಳಿಗೆ ನೀಡಿರುವ ಸರ್ಕಾರದ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಮುಟ್ಟಿದೆ ಹಾಗೂ ಎಷ್ಟು ಜನರ ಜೀವನ ಗುಣಮಟ್ಟ ಉತ್ತಮಗೊಂಡಿದೆ, ಅವಕಾಶಗಳು ಯಾವ ಜನಾಂಗಕ್ಕೆ ದೊರೆತಿದೆ ಹಾಗೂ ಯಾರಿಗೆ ದೊರೆತಿಲ್ಲ ಎಂಬ ಸಾಮಾಜಿಕ ಲೆಕ್ಕಪರಿಶೋಧನೆಯಾಗಬೇಕು ಎಂದರು.
ನಮ್ಮ ಹಕ್ಕು ನಮಗೆ ತಿಳಿದಿಲ್ಲವೆಂದರೆ ಅದನ್ನು ಪಡೆಯುವುದು ದೂರದ ಮಾತು. ಕಾರ್ಯಕ್ರಮ ಲೋಪದೋಷಗಳಿದ್ದು ಕಟ್ಟಕಡೆಯ ವ್ಯಕ್ತಿಗೆ ಮುಟ್ಟದಂತೆ ಮಾಡಲಾಗುತ್ತದೆ. ಪ್ರಾಮಾಣಿಕವಾಗಿ ಆ ಬಗ್ಗೆ ಚಿಂತಿಸುವ ಅಗತ್ಯವಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ಸೌಲಭ್ಯಗಳನ್ನು. ಮುಟ್ಟಿಸಲಾಗಿಲ್ಲ. ಇದಕ್ಕೆ ಯಾರು ಹೊಣೆಗಾರರು ಎಂದು ಆತ್ಮಾವಲೋಕನ ಮಾಡಿಕೊಳ್ಳೋಣ ಎಂದರು.



