ಖಜಾನೆಯ ರಕ್ಷಣೆಗೆ ಕಳ್ಳರನ್ನೇ ಕಾವಲು ನಿಲ್ಲಿಸಿದಂತಾಗುವುದು ಖಚಿತ: ಅಶ್ವಥ್ ನಾರಾಯಣ

2 years ago

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಭ್ರಷ್ಟ ಆಡಳಿತ ಓರ್ವ ಪ್ರಾಮಾಣಿಕ ಅಧಿಕಾರಿಯನ್ನು ಬಲಿ ಪಡೆದಿದೆ ಎಂದು ಮಾಜಿ ಸಚಿವ ಅಶ್ವತ್ ನಾರಾಯಣ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಅಮಾಯಕ ಅಧಿಕಾರಿಯೇ ಪ್ರಾಣ ಕೊಡುವ ಪರಿಸ್ಥಿತಿ ಬಂದೊದಗಿರುವುದು ರಾಜ್ಯಕ್ಕೇ ಕಪ್ಪುಚುಕ್ಕೆಯಾಗಿದೆ ಎಂದಿದ್ದಾರೆ.

ಘನ ಘೋರ ಭ್ರಷ್ಟಾಚಾರದ ಬಗ್ಗೆ ಸರ್ಕಾರವೇ ಒಪ್ಪಿಕೊಂಡರೂ ಮಾನ್ಯ ಮುಖ್ಯಮಂತ್ರಿ Siddaramaiah  ಅವರು ಸಚಿವ ನಾಗೇಂದ್ರ ಅವರ ರಾಜಿನಾಮೆ ಪಡೆದು, ಬಂಧಿಸಿ ತನಿಖೆ ನಡೆಸಲು ಹಿಂದೆ ಮುಂದೆ ನೋಡುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಯಾರ ಆದೇಶದ ಮೇರೆಗೆ ಹಣ ವರ್ಗಾವಣೆ ಆಗಿದೆ ಅಕ್ರಮವಾಗಿ ವರ್ಗಾವಣೆಯಾಗಿರುವ ಹಣ ಯಾರ ಖಾತೆಗೆ ಜಮೆಯಾಗಿದೆ? ಆರ್ಥಿಕ ಇಲಾಖೆಯ ಸಮ್ಮತಿ ಇಲ್ಲದೇ ಖಾತೆ ತೆರೆಯಲಾಗಿತ್ತೇ? ವಸಂತ ನಗರದಲ್ಲಿರುವ ಯೂನಿಯನ್‌ ಬ್ಯಾಂಕ್‌ನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆ ಇದ್ದರೂ ಎಂಜಿ ರಸ್ತೆ ಬಳಿ ಇರುವ ಯೂನಿಯನ್‌ ಬ್ಯಾಂಕ್‌ನಲ್ಲಿ ಉಪಖಾತೆ ತೆರೆದಿರುವ ಉದ್ದೇಶವೇನು? ಆರ್ಥಿಕ ಇಲಾಖೆಯ ಜವಾಬ್ದಾರಿ ಹೊಂದಿರುವ ಮುಖ್ಯಮಂತ್ರಿಯವರೇ ಈ ಕೋಟ್ಯಂತರ ರೂಪಾಯಿ ಅವ್ಯವಹಾರದ ಹೊಣೆ ಹೊರಬೇಕು ಎಂದಿದ್ದಾರೆ.

ಪ್ರತಿ ಇಲಾಖೆಯಲ್ಲಿಯೂ ಕಾಂಪಿಟೇಷನ್‌ ಮೇಲೆ ಲೂಟಿ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರದ ಸಚಿವರು ದುರ್ಬಲ ಸಮುದಾಯದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನೇ ಹಗಲು ದರೋಡೆ ಮಾಡಿದ್ದಾರೆ ಎಂದಿದ್ದಾರೆ.

ಪರಿಶಿಷ್ಟ ವರ್ಗದ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕಾಗಿ ಬಳಸಿಕೊಂಡಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದ ಅಭಿವೃದ್ಧಿಗೆ ನೀಡಿದ ಕೊಡುಗೆ ಮಾತ್ರ ಶೂನ್ಯ. ಬರ ಪರಿಹಾರದ ಬಗ್ಗೆ ಸ್ವಲ್ಪವೂ ಆಲೋಚನೆ ಮಾಡದ ಈ ಸರ್ಕಾರ ಶಿಕ್ಷಣ, ಉದ್ಯೋಗ, ಜನ ಕಲ್ಯಾಣ ಯೋಜನೆಗಳ ಬಗ್ಗೆ ಕಿಂಚಿತ್‌ ಕಾಳಜಿವಹಿಸಿಲ್ಲ ಎಂದಿದ್ದಾರೆ.

ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿರುವ ಕಾಂಗ್ರೆಸ್‌ ಸರ್ಕಾರ ಮಾಡಿದ್ದು ಎರಡೇ ಕೆಲಸ. ಮೊದಲನೇಯದು ಪ್ರತಿನಿತ್ಯ ಭ್ರಷ್ಟಾಚಾರ & ಅಧಿಕಾರ ದುರ್ಬಳಕೆ, ಎರಡನೇಯದು ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಅವ್ಯವಹಾರ. ಈ ಭ್ರಷ್ಟ ಸರ್ಕಾರದ ನಿತ್ಯ ದರೋಡೆಯನ್ನು ತಡೆಯದಿದ್ದರೆ ರಾಜ್ಯದ ಖಜಾನೆಯ ರಕ್ಷಣೆಗೆ ಕಳ್ಳರನ್ನೇ ಕಾವಲು ನಿಲ್ಲಿಸಿದಂತಾಗುವುದು ಖಚಿತ ಎಂದಿದ್ದಾರೆ.

Leave a Reply