ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸುತ್ತಿರುವ ಬಿಜೆಪಿ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಹಾಗೂ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಹಲವು ಶಾಸಕರಿಗೆ ಟಿಕೆಟ್ ನೀಡದಿರಲು ತೀರ್ಮಾನಿಸಿದೆ. ಇವರ ಬದಲಿಗೆ ಹೊಸ ಮುಖಗಳಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ.
ಕಳೆದ ರಾತ್ರಿ ಪಕ್ಷದ ಹಿರಿಯ ನಾಯಕ ಅಮಿತ್ ಶಾ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಆನಂತರ ಈ ಬೆಳಿಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಕೆಲ ಪ್ರಮುಖರ ಜೊತೆ ಮಾತನಾಡಿದ ಅಮಿತ್ ಶಾ ಟಿಕೆಟ್ ನಿರಾಕರಿಸುತ್ತಿರುವವರ ಜೊತೆ ಮಾತನಾಡಲು ಸೂಚಿಸಿದರು ಎನ್ನಲಾಗಿದೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಬಸವರಾಜ ದಡೆಸಗೂರು, ನೆಹರು ಓಲೇಕಾರ್, ಮಾಡಾಳ್ ವಿರೂಪಾಕ್ಷಪ್ಪ, ರಘುಪತಿ ಭಟ್, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ವಿ.ಎಸ್.ಅಂಗಾರ, ಕೆ.ಜಿ.ಬೋಪಯ್ಯ ಅವರುಗಳಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ.
ಗೋವಿಂದ ಕಾರಜೋಳ ಬದಲಿಗೆ ಅವರ ಪುತ್ರ ಮೈಸೂರಿನ ರಾಮದಾಸ್ ಬದಲಿಗೆ ಅವರು ಸೂಚಿಸುವ ವ್ಯಕ್ತಿಗೆ ಟಿಕೆಟ್ ನೀಡಲು ಪಕ್ಷದ ಚಿಂತಕರ ಚಾವಡಿ ಅಭಿಪ್ರಾಯ ತಿಳಿಸಿದ್ದು, ಇದನ್ನು ಅಮಿತ್ ಶಾ ಸಿಎಂ ಬೊಮ್ಮಾಯಿ ಹಾಗೂ ಇತರ ನಾಯಕರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿಯು ದೆಹಲಿ ಮೂಲದ ಖಾಸಗಿ ಸಂಸ್ಥೆಯಿಂದ ಐದು ಬಾರಿ ಈ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ್ದು, ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಇವರು ಸೋಲುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಬದಲು ಹೊಸ ಮುಖಗಳಿಗೆ ಅಂದರೆ ಆರ್.ಎಸ್ಎಸ್, ಸಂಘಪರಿವಾರದ ಹಿನ್ನಲೆಯುಳ್ಳ ಹಾಗೂ ಸಮಾಜದಲ್ಲಿ ಒಂದಿಷ್ಟು ಹೆಸರು ಗಳಿಸಿರುವ ಯುವ ಮುಖಗಳನ್ನು ಕಣಕ್ಕಿಳಿಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಗುಜರಾತ್ ಮಾಡೆಲ್ ಕೂಡ ಇದೇ ಆಗಿದ್ದು ಅಲ್ಲಿ ಹಿರಿಯರ ಬದಲು ಕಿರಿಯರಿಗೆ ಮಣೆ ಹಾಕಲಾಗಿತ್ತು. ಇದು ಉತ್ತಮ ಫಲಿತಾಂಶ ನೀಡಿದ ಹಿನ್ನೆಲೆಯಲ್ಲಿ ಇದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲಾಗುತ್ತದೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ಆಂತರಿಕ ಸರ್ವೆಯಲ್ಲೂ ಕೆಲ ಹಾಲಿ ಶಾಸಕರು ಈ ಬಾರಿ ಸೋಲು ಕಾಣುವ ವರದಿ ಬಂದಿದೆ. ಅಂಥ ಹಾಲಿ ಶಾಸಕರಿಗೆ ಈ ಬಾರಿ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಕ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಿನಲ್ಲಿ ಸುಮಾರು 15ಕ್ಕೂ ಹೆಚ್ಚು ಬಿಜೆಪಿ ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಆತಂಕ ಎದುರಿಸುತ್ತಿದ್ದಾರೆ



