1958-59 ನೇ ಇಸವಿ ಮಿಡಲ್ ಸ್ಕೂಲ್ ಓದುತ್ತಿದ್ದ ನಾಯಕ ಸಮುದಾಯದ ಹುಡುಗನಿಗೆ ಸ್ಕಾಲರ್ಶಿಪ್ ಸಿಕ್ಕರೆ ಒಂದಷ್ಟು ಆಣೆ ಫೀಸ್ ಕಡಿಮೆ ಆಗುತ್ತೆ. ಆದರೆ ಅದಕ್ಕೆ ಮಂಡಲ್ ಪಂಚಾಯಿತಿ ಅಧ್ಯಕ್ಷರ ಸರ್ಟಿಫಿಕೇಟ್ ಬೇಕು. ಆ ಹುಡಗನ ಊರು ತುಮಕೂರಿನ ಕ್ಯಾತ್ಸಂದ್ರ. ಅಲ್ಲಿನ ಮಂಡಲ್ ಪಂಚಾಯಿತಿ ಅಧ್ಯಕ್ಷ ಒಬ್ಬ ಬ್ರಾಹ್ಮಣ ಶಾನುಭೋಗ. ಪೈಲ್ವಾನನಾಗಿದ್ದ ಹುಡುಗನ ಅಜ್ಜ ಮೊಮ್ಮಗನನ್ನು ತನ್ನ ಹೆಸರೇಳಿ ಶಾನುಭೋಗರ ಹತ್ತಿರ ಸರ್ಟಿಫಿಕೇಟ್ ಬರೆಸಿಕೊಂಡು ಬರಲು ಕಳಿಸುತ್ತಾರೆ. ಆದರೆ ಆ ಹುಡುಗ ಶಾನುಭೋಗರ ಮನೆಗೆ ಸಂಜೆ ಹೋದರೆ ಬೆಳಿಗ್ಗೆ ಬಾ ಎನ್ನುತ್ತಾನೆ, ಬೆಳಿಗ್ಗೆ ಹೋದರೆ ಇನ್ನೂ ಮಡಿ ಮೈಲಿಗೆ ಆಗಿಲ್ಲ ಸಂಜೆ ಬಾ ಅಂತ ಅಟ್ಟುತ್ತಾನೆ.
ಹೀಗೆ ಹಲವು ದಿನ ತಿರುಗಿದ ಹುಡುಗ ಕೊನೆಗೆ ಬೇಸತ್ತು ನನಗೆ ಸ್ಕಾಲರ್ಶಿಪ್ ಬೇಡ ಪೂರ್ತಿ ಫೀಸ್ ಕಟ್ಟುತ್ತೇನೆ ಕಾಸು ಕೊಡು ಅಂತ ತಾತನ ಹತ್ತಿರ ಜಗಳವಾಡಿ ದುಡ್ಡು ಪಡೆದು ಸ್ಕೂಲ್ ಫೀಸ್ ಕಟ್ಟುತ್ತಾನೆ. ಆದರೆ ಆ ಹುಡುಗ ಒಂದು ತೀರ್ಮಾನ ಮಾಡುತ್ತಾನೆ. ತಾನು ಸ್ಕಾಲರ್ಶಿಪ್ ಕಟ್ಟಲು ಮಂಡಲ ಪಂಚಾಯಿತಿ ಅಧ್ಯಕ್ಷನ ಸರ್ಟಿಫಿಕೇಟ್ ಬೇಕಿತ್ತು. ಆದರೆ ಅದು ಸಿಗದೇ ಹೋಗಿದ್ದಕ್ಕೆ ಕಾರಣ ಆ ಹುಡುಗನ ಜಾತಿ.
ಬ್ರಾಹ್ಮಣ ಶಾನುಭೋಗನಿಂದ ಅಪಮಾನಕ್ಕಿಡಾದ ಆ ಹುಡುಗ ನಾಯಕ ಜಾತಿಯವನು. ಆ ಹುಡುಗ ಆವತ್ತೆ ತೀರ್ಮಾನ ಮಾಡುತ್ತಾನೆ. ನಾನು ಒಂದಲ್ಲ ಒಂದು ದಿನ ಮಂಡಲ ಪಂಚಾಯಿತಿ ಅಧ್ಯಕ್ಷನಾಗಿ ನನ್ನಂತೆ ಕಷ್ಟ ಪಡುವ ಬಡವರಿಗೆ ದಾರಿ ದಾರಿಯಲ್ಲಿ ಸಹಿ ಮಾಡಿಕೊಡಬೇಕು ಅಂತ. ಇದು ನನ್ನನ್ನು ರಾಜಕಾರಣಕ್ಕೆ ಪ್ರವೇಶ ಮಾಡುವಂತೆ ಪ್ರೇರೇಪಿಸಿತು ಅಂದರು ಕೆ. ಎನ್. ರಾಜಣ್ಣ.
ಜಾತಿವ್ಯವಸ್ಥೆಯ ಜುಟ್ಟು ಹಿಡಿದಿರುವ ಬ್ರಾಹ್ಮಣ್ಯದ ಅಟ್ಟಹಾಸ ಏನು ಅಂತ ಅರ್ಥವಾದರೆ ಅದರಿಂದ ಹುಟ್ಟುವ ಪ್ರತಿರೋಧ ಎಷ್ಟು assertive ಆಗಿರಬಲ್ಲದು !
ಎಲಿನಾರ್ ಝೆಲಿಯೆಟ್ ಪುಸ್ತಕ ಕೊಟ್ಟು ಇದು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಇಂಗ್ಲೀಷಿನಲ್ಲಿ ಬಂದ ಮೊದಲ ಪಿಎಚ್ಡಿ ಥೀಸೀಸ್ ಮತ್ತು Ambedkarite movement ಬಗ್ಗೆ ಬಂದಿರುವ ಬಹಳ ಮುಖ್ಯ ಸಂಶೋಧನಾ ಗ್ರಂಥ ಅಂದಿದ್ದಕ್ಕೆ ಇಂಥವರ ಬಗ್ಗೆ ನಮಗೆ ಗೊತ್ತೇ ಆಗುವುದಿಲ್ಲವಲ್ಲ ಅಂದು ಕನ್ನಡಕ್ಕೆ ಬಂದಿದ್ದು ಬಹಳ ಒಳ್ಳೆಯ ಕೆಲಸ ಅಂದರು.
ತಳಸಮುದಾಯದ ನಾಯಕರ ಬಗ್ಗೆ ಮೀಡಿಯಾಗಳು ಸೃಷ್ಟಿಸುವ imageಗಳ ಆಚೆಗೆ ನಾವು ಗ್ರಹಿಸಬೇಕಾದದ್ದು ತುಂಬಾ ಇದೆ ಅಂತ ಎರಡು ಗಂಟೆಗಳ ಮಾತುಕತೆ ಮಾಡಿದ ಮೇಲೆ ಅನಿಸಿತು.
– ವಿ.ಎಲ್.ನರಸಿಂಮಮೂರ್ತಿ, ಸಾಮಾಜಿಕ ಹೋರಾಟಗಾರರು




