ಎಸ್‌‍ಐಟಿ ತನಿಖೆಯ ಮಧ್ಯಂತರ ವರದಿಯನ್ನು ಬಹಿರಂಗಪಡಿಸಬೇಕು: ವಿ.ಸುನೀಲ್‌ಕುಮಾರ್‌

8 months ago

ಬೆಂಗಳೂರು: ಅನಾಮಿಕ ವ್ಯಕ್ತಿಯೊಬ್ಬ, ಧರ್ಮಸ್ಥಳದ ಸುತ್ತಮುತ್ತ ಹಲವು ಶವಗಳನ್ನು  ಹೂತಿರುವುದಾಗಿ ಹೇಳಿಕೊಂಡಿರುವ ವಿಚಾರದ ಬಗ್ಗೆ ಸರ್ಕಾರ ರಚಿಸಿರುವ ಎಸ್‌‍ಐಟಿ ತನಿಖೆಯ ಮಧ್ಯಂತರ ವರದಿಯನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ಶಾಸಕ ವಿ.ಸುನೀಲ್‌ಕುಮಾರ್‌ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.

ನಿಯಮ 69ರಡಿ ವಿಷಯ ಪ್ರಸ್ತಾಪಿಸಿದ ಅವರು, ಅನಾಮಿಕ ವ್ಯಕ್ತಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಇನ್ನು ಎಷ್ಟು ದಿನ ಎಸ್‌‍ಐಟಿ ತನಿಖೆ ನಡೆಯಲಿದೆ. ಆ ವ್ಯಕ್ತಿಯಿಂದ ಯಾರಿದ್ದಾರೆ, ಯಾವ ಸಂಘಟನೆ ಇದೆ,  ಹಣಕಾಸಿನ ನೆರವು ಹೇಗೆ ಬರುತ್ತಿದೆ ಎಂದು ಎಸ್‌‍ಐಟಿ 2ನಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಕೋಟ್ಯಂತರ ಭಕ್ತರ ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದ ಬಗ್ಗೆ ಅವಹೇಳನವಾಗುತ್ತಿದ್ದರೂ  ಸರ್ಕಾರ ಎಫ್‌ಐಆರ್‌ ಹಾಕಿಲ್ಲ. ಮೌನವಾಗಿರುವುದು ನೋಡಿದರೆ ಸರ್ಕಾರದ ಸಹಾನುಭೂತಿ ಇದ್ದಂತಿದೆ. ಇದು ಇಂಡಿ ಒಕ್ಕೂಟದ ಅಜೆಂಡಾವೇ? ಪಾಪದ ಕೂಸೇ ಎಂದು ಪ್ರಶ್ನಿಸಿದರು.

ದೊಡ್ಡ ಪ್ರಮಾಣದಲ್ಲಿ ಅಪ್ರಚಾರವಾಗುತ್ತಿದ್ದರೂ ಒಂದೇ ಒಂದು  ಎಫ್‌ಐಆರ್‌ ಕೂಡ ಹಾಕಿಲ್ಲ. ಜಿಲ್ಲಾಡಳಿತ, ಸರ್ಕಾರ ಏಕೆ ಮಾಡಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ಮಾತ್ರ ಕಾನೂನು ಕ್ರಮವೇ? ಧರ್ಮಸ್ಥಳದ ಬಗ್ಗೆ ಮಾತನಾಡಿದ  ವ್ಯಕ್ತಿಯ  ಮೇಲೆ ಕ್ರಮವಾಗಿದ್ದರೆ ಶಹಭಾಷ್‌ಗಿರಿ ಹೇಳುತ್ತಿದ್ದೆ.  ಹಿಂದೂ ಧರ್ಮದ ಮೇಲೆ ಅವಹೇಳನ ಮಾಡಿದರೆ ಸಹಿಸುವುದಿಲ್ಲ. ಮಂತ್ರಿ ಮಂಡಲವೇ ಧರ್ಮಸ್ಥಳದ ಬಗ್ಗೆ ಅಪಪ್ರಚಾರವಾಗಿರುವುದರ ಬಗ್ಗೆ ಕ್ಷಮೆ ಯಾಚಿಸಬೇಕು. ಆಗ ಸರ್ಕಾರದ ಮೇಲೆ ವಿಶ್ವಾಸ ಬರುತ್ತದೆ. ಕೇವಲ ಮಾತಿನಲ್ಲಿ ಹೇಳಿದರೆ ಸಾಲು ಕೃತಿಯಲ್ಲೂ ಬರಬೇಕು ಎಂದರು.

ಅಸಂಖ್ಯಾತ ಜನರ ಧಾರ್ಮಿಕ ಶ್ರದ್ದಾಭಕ್ತಿಯ ಪಾವಿತ್ರ್ಯ ಕ್ಷೇತ್ರ. ಪ್ರತಿ ಮನೆಯಲ್ಲಿ ಧರ್ಮಸ್ಥಳದ ಫೋಟೋ ಇಟ್ಟು ಪೂಜಿಸುತ್ತಾರೆ. ಸೌಜನ್ಯಳಿಗೆ ನ್ಯಾಯ ಸಿಗಲಿ. ಆದರೆ ಸಂವಿಧಾನ, ಕಾನೂನಿನ ನೆರಳಲ್ಲಿ ಅಪಮಾನ ಮಾಡುವುದು ಸರಿಯಲ್ಲ. ಒಂದು  ಗುಂಪು ಪಿತೂರಿ ನಡೆಸುತ್ತಿದೆ. ಅದು ಹೊರಬರಬೇಕಲ್ಲವೇ ಎಂದು ಕೇಳಿದರು.

ಪತ್ತೆದಾರಿ ಸಿನಿಮಾ ರೀತಿಯಲ್ಲಿ ಅನಾಮಿಕ ತೋರಿಸಿದ ಜಾಗಗಳ ಗುಂಡಿ ತೋಡಲಾಗುತ್ತಿದೆ. ಪೊಲೀಸ್‌‍ ಇಲಾಖೆಗೆ ಮಂಕು ಕವಿದಂತಾಗಿದೆ. ಊಹಾಪೋಹಗಳಿಗೆ ತೆರೆ ಎಳೆಯಲು ಮಧ್ಯಂತರ ವರದಿಯನ್ನು ಕೊಡಿ. ಈ ಬಗ್ಗೆ ಸರ್ಕಾರ ಸ್ವಯಂ ಹೇಳಿಕೆಯನ್ನೂ ನೀಡಿಲ್ಲ ಎಂದರು.

ಡಿ.ಜೆಹಳ್ಳಿ, ಕೆ.ಜೆಹಳ್ಳಿ  ಘಟನೆ ನಡೆದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿಎಂ ಸಿದ್ದರಾಮಯ್ಯ ಅವರು, ಭಾವನೆಗಳಿಗೆ ಧಕ್ಕೆಯಾದಾಗ ಈ ರೀತಿ ವರ್ತಿಸುತ್ತಾರೆ ಎಂದಿದ್ದರು. ಈಗ ಧರ್ಮಸ್ಥಳದ ಬಗ್ಗೆ ನೂರಾರು  ಅಪಪ್ರಚಾರ ನಡೆಸುತ್ತಿದ್ದರೂ ಸರ್ಕಾರ ಸಹಾನೂಭೂತಿ ತೋರುತ್ತಾ ಮೌನವಾಗಿರುವುದು ಏಕೆ ಎಂದು ಕೇಳಿದರು.

ಅಪಪ್ರಚಾರದ ಬಗ್ಗೆ ಜನ ರಸ್ತೆಗಿಳಿದು  ಪ್ರತಿಭಟಿಸುತ್ತಿದ್ದಾರೆ. ಬಾಹುಬಲಿ ಬೆಟ್ಟದ ಬುಡಕ್ಕೆ ಕೈ ಹಾಕಿರುವ ನಿಮ್ಮ ಸರ್ಕಾರದ  ಬುಡಕ್ಕೂ ಬರುತ್ತದೆ. ಗುಂಡಿ ಹುಡುಕಿದರೆ ಸಾಲು ಸಾಕ್ಷೀದಾರರನ್ನು ತನಿಖೆಗೆ ಒಳಗಪಡಿಸಬೇಕೆಂದು ಆಗ್ರಹಿಸಿದರು.

ಇದಕ್ಕೂ ಮುನ್ನ   ಮಾತನಾಡಿದ ಗೃಹಸಚಿವ ಪರಮೇಶ್ವರ್‌, ವ್ಯಕ್ತಿಯೊಬ್ಬ ಧರ್ಮಸ್ಥಳದ ಠಾಣೆಗೆ ದೂರು ನೀಡಿ ಮ್ಯಾಜಿಸ್ಟ್ರೇಟ್‌ರ ಅವರ ಮುಂದೆ 144ರಡಿ ಹೇಳಿಕೆ ನೀಡಿದ ನಂತರ  ಎಸ್‌‍ಐಟಿ ರಚಿಸಲಾಗಿದೆ. ಎಸ್‌‍ಐಟಿ ತನಿಖೆಗೆ ಈ ಚರ್ಚೆಯಿಂದ ಅಡ್ಡಿಯಾಗಬಹುದೆಂಬ  ಅನುಮಾನ ವ್ಯಕ್ತಪಡಿಸಿದರು. ಅದಕ್ಕೆ ಸುನೀಲ್‌ಕುಮಾರ್‌, ತನಿಖೆಗೆ ಅಡ್ಡಿಯಾಗದಂತೆ ಚರ್ಚೆ ಮಾಡುವುದಾಗಿ ಹೇಳಿ ಮಾತು ಮುಂದುವರೆಸಿದರು.

Leave a Reply