ತೆರಿಗೆಯ ಮೇಲೆ ತೆರಿಗೆ, ಬೆಲೆ ಏರಿಕೆ ಮೇಲೆ ಬೆಲೆ ಏರಿಕೆ: ವಿಜಯೇಂದ್ರ

1 year ago

ಮಾನ್ಯ ಮುಖ್ಯಮಂತ್ರಿ Siddaramaiah  ಅವರೇ, ಗತ್ಯಂತರವಿಲ್ಲದೆ ರಾಜಕೀಯ ಅರಾಜಕತೆ ಸೃಷ್ಟಿಸುವತ್ತ ನಿಮ್ಮ ಆಡಳಿತ ಮುನ್ನಡೆದಿದೆ, ನೀವು ಅಧಿಕಾರದಲ್ಲಿ ಇರಲೇಬೇಕೆಂದರೆ “ತೆರಿಗೆಯ ಮೇಲೆ ತೆರಿಗೆ, ಬೆಲೆ ಏರಿಕೆ ಮೇಲೆ ಬೆಲೆ ಏರಿಕೆ” ಮಾಡಿ ಜನರನ್ನು ಸುಲಿಗೆ ಮಾಡುವುದೊಂದೇ ಉಳಿದಿರುವ ಮಾರ್ಗವಾಗಿದೆ. ವಸ್ತು ಸ್ಥಿತಿ ಹೀಗಿರುವಾಗ ಕೇಂದ್ರ ಸರ್ಕಾರವು ಔಷಧಿಗಳು, ಎಲೆಕ್ಟ್ರಿಕ್, ಚರ್ಮ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸಿ ವಿಕಸಿತ ಭಾರತ ಕಟ್ಟುವ ದೂರದೃಷ್ಟಿಯ ಬಜೆಟ್ ಮಂಡಿಸಿರುವ ಕೇಂದ್ರ ಸರ್ಕಾರವನ್ನು ಟೀಕಿಸುವುದು ಕೇವಲ ರಾಜಕೀಯ ದುರುದ್ದೇಶದಿಂದ ಮಾತ್ರ ಎಂಬುದು ರಾಜ್ಯದ ಜನತೆಗೆ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಸುಳ್ಳುಗಳ ಸರಮಾಲೆ ಕಟ್ಟಿ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ನಿಮ್ಮ ಆಟ ಮುಗಿಯುತ್ತಾ ಬರುತ್ತಿದೆ, ಸತ್ಯ ಏನೆಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ.

ಕೇಂದ್ರದ ವಿತ್ತ ಸಚಿವರಾದ ಶ್ರೀಮತಿ Nirmala Sitharaman ಅವರು ಸತತ 8ನೇ ಬಾರಿ ಮಂಡಿಸಿರುವ ಬಜೆಟ್ ದೇಶದ ಪರಿಶಿಷ್ಟ ವರ್ಗದವರಿಗೆ ಉದ್ಯಮ ಆರಂಭಿಸಲು, ಸ್ಟಾರ್ಟ್ ಅಪ್ ಆರಂಭಿಸಲು ಸಾಲ ಸೌಲಭ್ಯ ಕಲ್ಪಿಸಲಿದೆ.

ಮಧ್ಯಮ ವರ್ಗದವರಿಗೆ ನೆರವಾಗುವ ನಿಟ್ಟಿನಲ್ಲಿ 12 ಲಕ್ಷದವರೆಗೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ನೀಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮಿತಿಯನ್ನು ಈಗ ಇರುವ 3 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಕಿಸಾನ್ ಕ್ರೆಡಿಟ್‌ಗಳಿಂದ 7 ಕೋಟಿಗೂ ಅಧಿಕ ರೈತರಿಗೆ ಸುಲಭವಾಗಿ ಸಾಲ ಸೌಲಭ್ಯಗಳು ದೊರೆಯಲಿವೆ ಇದು ನಾಡಿನ ರೈತರಿಗಾಗುವ ಅನುಕೂಲವಲ್ಲವೇ?

ಬೆಳೆಗಳ ಉತ್ಪಾದಕತೆ ವೃದ್ಧಿಸುವ ಸಲುವಾಗಿ ಪ್ರಧಾನಮಂತ್ರಿ ಧನ-ಧಾನ್ಯ ಯೋಜನೆ ಆರಂಭಿಸುವ ನಿರ್ಧಾರ ಕೈಗೊಂಡಿದ್ದು ಈ ಯೋಜನೆ 1.7 ಕೋಟಿ ರೈತರಿಗೆ ಪ್ರಯೋಜನ ನೀಡಲಿದೆ ಇದು ನಮ್ಮ ಅನ್ನದಾತರಿಗಾಗುವ ಅನುಕೂಲವಲ್ಲವೇ?

“ಉದ್ಯಮಕ್ಕೆ ಶಕ್ತಿ ತುಂಬಲು ಹೊಸ ಸ್ಟಾರ್ಟ್‌ಅಪ್‌ಗಳಿಗೆ ವಿಶೇಷ ನಿಧಿ” ಸ್ಥಾಪನೆಗೆ ಮುಂದಾಗಿದ್ದು ಪ್ರಸ್ತುತ ಕೇಂದ್ರ ಸರ್ಕಾರ ನೀಡುತ್ತಿರುವ ₹10,000 ಕೋಟಿ ಜೊತೆಗೆ ಹೊಸದಾಗಿ ₹10,000 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 5 ಲಕ್ಷ ಮಹಿಳೆಯರಿಗೆ ಹೊಸ ಉದ್ಯಮ ಸ್ಥಾಪನೆಗೆ ಯೋಜನೆ ಆರಂಭಿಸಿರುವುದು ನಾಡಿನ ಪರಿಶಿಷ್ಟ ಮಹಿಳೆಯರ ಸ್ವಾವಲಂಬಿ ಬದುಕು ಕಟ್ಟಿಕೊಡುವ ಯೋಜನೆಯಲ್ಲವೇ?

ಭಾರತದಲ್ಲಿ ಸಂಪನ್ಮೂಲ ಸಮೃದ್ಧತೆ ಹೊಂದಿರುವ ಮುಂಚೂಣಿ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ಸದಾ ಮುಂದು, ಇಂತಹ ಸಂಪತ್ಭರಿತ ಕರ್ನಾಟಕವನ್ನು ಬರಡು ಮಾಡಲು ಹೊರಟಿರುವ ನಿಮ್ಮ ಆಡಳಿತ ವೈಖರಿ ಇತಿಹಾಸದ ಕಪ್ಪು ಚುಕ್ಕೆಯಾಗುತ್ತಿರುವಾಗ ಮೋದಿ ಸರ್ಕಾರದ ಬಗ್ಗೆ ಕೀಳುಮಟ್ಟದ ಟೀಕೆಗೆ ಇಳಿಯುವುದು ಶೋಭೆಯಲ್ಲ.

ರಸ್ತೆಯಲ್ಲಿ ತರಕಾರಿಯಂತೆ ಚಿನ್ನ ಮಾರುತ್ತಿದ್ದ ಕೃಷ್ಣದೇವರಾಯರಾಳಿದ ನಾಡಿದು, ರಾಮ ರಾಜ್ಯವನ್ನು ಅಕ್ಷರಶಃ ನಿರ್ಮಾಣ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರು ಆಳಿದ ನಾಡಿದು, ಕೆರೆ-ಕಟ್ಟೆಗಳನ್ನು ನಿರ್ಮಿಸಿ ಸಮೃದ್ಧ ನಾಡು ಕಟ್ಟಿದ ಕೆಂಪೇಗೌಡರ ಬೀಡಿದು, ಕರುನಾಡು ಎಂದೂ ಯಾರ ಮುಂದೆಯೂ ಕೈಚಾಚಿಲ್ಲ, ‘ನೀಡುವ ಕೈ ಕರ್ನಾಟಕ’ ಎಂದು ಖ್ಯಾತಿಯಾಗಿದೆ. ಆದರೆ ದುರಾಡಳಿತ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಈ ರಾಜ್ಯದ ಕೀರ್ತಿಯನ್ನು ಕಸಿಯುತ್ತಿದೆ ಅದರ ರೂವಾರಿ ನಿಮ್ಮ ಕಾಂಗ್ರೆಸ್ ಸರ್ಕಾರವೇ ಆಗಿರುವುದು ಈ ರಾಜ್ಯದ ದುರಂತವೇ ಸರಿ.

ಹಾಲಿನ ದರ 2 ರೂ ಹೆಚ್ಚಳ, ಉದ್ಯೋಗದಾತರ ಮೇಲೆ ಏರಿಸಿದ ವಿದ್ಯುತ್ ದರದಿಂದ ಬಂದ ಆದಾಯ, ಶೇಕಡ 40 ರಿಂದ 50 ರಷ್ಟು ಏರಿಸಿದ ಮುದ್ರಾಂಕ ಶುಲ್ಕ, ಮೋಟಾರ್ ವಾಹನ ತೆರಿಗೆ ದರ ಹೆಚ್ಚಳ, ಅಬಕಾರಿ ಶುಲ್ಕ ಹೀಗೆ ಏರಿಸಿದ ಆದಾಯದ ಮೂಲಗಳು ಎಲ್ಲಿ ಹೋಯಿತು? ಇನ್ನಾದರೂ ರಾಜ್ಯದ Indian National Congress – Karnataka  ಸರ್ಕಾರ ಕೇಂದ್ರದ ಜನಪರ ನಿಲುವುಗಳನ್ನು ಟೀಕಿಸುವ ಬದಲು ಸಮೃದ್ಧ ಕರ್ನಾಟಕ ಕಟ್ಟಲೂ ಬರಪೂರ ಯೋಜನೆಗಳನ್ನು ನೀಡುತ್ತಿರುವ ಮೋದಿ ಸರ್ಕಾರದೊಂದಿಗೆ ವಿಶ್ವಾಸಪೂರ್ಣ ಸಹಕಾರದ ಹೆಜ್ಜೆ ಹಾಕಲಿ ಎಂದು ಒತ್ತಾಯಿಸುವೆ.

– ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Leave a Reply