ಬೆಂಗಳೂರು: ರಾಜ್ಯದ ಆಂತರಿಕ ಭದ್ರತಾ ವಿಭಾಗ (ಐಎಸ್ ಡಿ) ಹಾಗೂ ಕೇಂದ್ರೀಯ ತನಿಖಾ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿ ಅಂತರಾಷ್ಟ್ರೀಯ ಉಗ್ರ ಸಂಘಟನೆ ಅಲ್ ಖೈದಾ ಜೊತೆ ನಂಟು ಹೊಂದಿದ್ದ ಶಂಕಿತ ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಥಣಿಸಂದ್ರದ ಮಂಜುನಾಥ್ ನಗರದಲ್ಲಿ ನೆಲೆಸಿದ್ದ ಶಂಕಿತ ಉಗ್ರ ಆರೀಫ್ ಎಂಬುವನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವುದು ಆಗಾಗ ಬೆಳಕಿಗೆ ಬರುತ್ತಿದ್ದು ಈ ಬಗ್ಗೆ ಗುಪ್ತದಳದ ಸೂಚನೆ ಆಧರಿಸಿ ಹೆಚ್ಚಿನ ನಿಗಾ ವಹಿಸಿರುವ ಬೆನ್ನಲ್ಲೇ ಶಂಕಿತ ಉಗ್ರರು ಸದ್ದಿಲ್ಲದೆ ಸಂಚು ಮಾಡುತ್ತಿರುವುದು ಪತ್ತೆಯಾಗುತ್ತಿದೆ.
ಕೆಲ ತಿಂಗಳ ಹಿಂದೆ ಡೆಲವರಿ ಬಾಯ್ ಆಗಿ ಉಗ್ರ ಕೃತ್ಯ ನಡೆಸುತ್ತಿದ್ದ ಶಂಕಿತ ಉಗ್ರನ ಬಂಧನ ಬೆನ್ನಲ್ಲೇ ಬಂಧಿಸಿರುವ ಶಂಕಿತ ಭಯೋತ್ಪಾದಕ ಆರೀಫ್ ನನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಭಯೋತ್ಪಾದಕ ತನಗೆ ಗೊತ್ತಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದು ಇದರ ಆಧಾರದಲ್ಲಿ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ಶಂಕಿತ ಉಗ್ರ ಆರೀಫ್ ಅಲ್ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಪತ್ತೆಯಾಗಿದೆ.
ಖಾಸಗಿ ಸಾಫ್ಟ್ವೇರ್ ಕಂಪನಿಯ ಉದ್ಯೋಗಿಯಾಗಿ (ವರ್ಕ್ ಪ್ರಮ್ ಹೋಮ್) ಮೂಲಕ ಮನೆಯಲ್ಲೆ ಕೆಲಸ ಮಾಡುತ್ತಿದ್ದ.
ಆರೀಫ್ ಗೆ ಕಳೆದ ಎರಡು ವರ್ಷಗಳಿಂದ ಅಲ್ಖೈದಾ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ದೊರೆತಿದೆ. ಈತನಿಗೆ ಉಗ್ರ ಸಂಘಟನೆಗಳಲ್ಲಿ ಸೇರಿಕೊಳ್ಳಬೇಕು ಎಂಬ ಕನಸಿತ್ತು. ಅದರಂತೆ ಸಾಮಾಜಿಕ ಜಾಲತಾಣಗಳು, ವೆಬ್ ಸೈಟ್ ಮೂಲಕ ಉಗ್ರ ಸಂಘಟನೆಗಳನ್ನು ಸೇರಲು ತಯಾರಿ ನಡೆಸಿದ್ದ.
ಟೆಲಿಗ್ರಾಮ್ ಹಾಗೂ ಡಾರ್ಕ್ ನೆಟ್ ಮೂಲಕ ಉಗ್ರ ಸಂಘಟನೆ ಆಲ್ ಖೈದಾ ಗ್ರೂಪ್ಗಳಲ್ಲಿ ಸಕ್ರಿಯನಾಗಿದ್ದ ಎಂದು ತಿಳಿದುಬಂದಿದೆ.
ಮಾರ್ಚ್ನಲ್ಲಿ ಇರಾಕ್ ಮೂಲಕ ಸಿರಿಯಾಗೆ ತೆರಳಲು ಯತ್ನಿಸಿದ್ದ ಆರೀಫ್ ಗೆ ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ ಹೋಗಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಈಗ ಮಾರ್ಚ್ ನಲ್ಲಿ ಮತ್ತೆ ಇರಾಕ್ ಮೂಲಕ ಸಿರಿಯಾ ಹಾಗು ಅಫ್ಘಾನ್ ಗೆ ತೆರಳಲು ಯೋಜನೆ ಹಾಕಿಕೊಂಡು ವಿಮಾನದ ಟಿಕೆಟ್ ರೆಡಿ ಮಾಡಿಕೊಳ್ಳುತ್ತಿರುವ ಮಾಹಿತಿ ದೊರೆತಿದ್ದು ಆತನನ್ನು ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ನಡೆಸಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಆರೋಪಿಯ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ತನಿಖಾ ಸಂಸ್ಥೆಗಳು ರಾಜ್ಯ ಆಂತರಿಕ ಭದ್ರತಾ ವಿಭಾಗದ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಂಡು ಮುಂಬರುವ ಮಾರ್ಚ್ ತಿಂಗಳಿನಲ್ಲಿ ಇರಾಕ್ ಮೂಲಕ ಸಿರಿಯಾಗೆ ತೆರಳಲು ಸಿದ್ಧನಾಗಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ಬಂಧಿಸಲಾಗಿದೆ.




