ದೇಶ ಮೊದಲು ಎಂಬ ಭಾವನೆಯನ್ನ ಬೆಳಸಿಕೊಳ್ಳಿ: ವಿ.ಸೋಮಣ್ಣ

4 years ago

ಬೆಂಗಳೂರು: ಇಂದಿನ ಯುವಕರಿಗೆ ನೇತಾಜಿ ಸುಭಾಶ್ ಚಂದ್ರ ಬೋಸ್ ಸ್ಪೂರ್ತಿಯಾಗಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನೇತಾಜಿ ಸುಭಾಷ್ ಚಂದ್ರ ಬೋಸ್ ಉದ್ಯಾನವನದ ಅವರಣದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ  ಭಾರತದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಶ್ ಚಂದ್ರ ಬೋಸ್ 125ನೇ ಜಯಂತ್ಯುತ್ಸವ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತಾಡಿದ ಅವರು, ನೇತಾಜಿ ಸುಭಾಷ್ ಚಂದ್ರ ಬೋಸ್ ಅಪ್ರತಿಮ ದೇಶಭಕ್ತ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಪ್ರಮುಖ ಜನ ನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ಅವರು ಭಾರತೀಯ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಹೋರಾಡಿದ್ದರು ಎಂದರು.

ಸುಭಾಷ್ ಚಂದ್ರ ಬೋಸ್ ಆದರ್ಶ ಜೀವನ ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಬ್ರಿಟಿಷರ ವಿರುದ್ದ ಹೋರಾಟದಲ್ಲಿ ತಮ್ಮ ಜೀವನವನ್ನು ಸಮರ್ಪಣೆ ಮಾಡಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿರವರು ನೇತಾಜಿರವರ 125ನೇ ಜಯಂತಿ ಅಂಗವಾಗಿ ಇಂಡಿಯ ಗೇಟ್ ಬಳಿ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ. ಎರಡನೇಯ ಮಹಾಯುದ್ದ ನಂತರ ಭಾರತದ ಸ್ವಾತಂತ್ಯ್ರ ಮತ್ತು ಸಮಗ್ರತೆ ವಿಶ್ವದಲ್ಲಿ ಚಿಂತನೆ ಮಾಡುವಂತೆ ಆಯಿತು ಎಂದರು.

ಭಾರತದ ದೇಶ ಇಂದು ಬಲಿಷ್ಠವಾಗಲು ಸ್ವಾತಂತ್ಯ್ರ ಹೋರಾಟದಲ್ಲಿ ಪಾಲ್ಗೊಂಡ ಮಹನೀಯರಗಳ ತ್ಯಾಗ ಬಲಿದಾನ ನೀಡಿದ ಪ್ರತಿಫಲ. ದೇಶ ಮೊದಲು ಎಂಬ ಭಾವನೆಯನ್ನ ಎಲ್ಲರು ಬೆಳಸಿಕೊಂಡಾಗ ಮಾತ್ರ ದೇಶ ಅಭಿವೃದ್ದಿ ಸಾಧ್ಯ. ಸುಭಾಷ್ ಚಂದ್ರ ಬೋಸ್ ಐ.ಸಿ.ಎಸ್. ವಿದ್ಯಾಭ್ಯಾಸ ಮಾಡಲು ಬ್ರಿಟಿಷರ ದೇಶದಲ್ಲಿ ಇದ್ದಾಗ ಅವರ ಅಣ್ಣನಿಗೆ ಪತ್ರ ಬರೆದು ಭಾರತದಲ್ಲಿ ಬ್ರಿಟಿಷರು ನಮ್ಮನ್ನ ದಾಸರಾಗಿ ಮಾಡಿಕೊಂಡಿದ್ದಾರೆ. ಆಂಗ್ಲರ ರಾಷ್ಟದಲ್ಲಿ ಅವರನ್ನ ನನ್ನ ಶೂಲೇಸ್ ಕಟ್ಟುವ ಕೆಲಸ ಮಾಡಿಕೊಳ್ಳುತ್ತಿದ್ದೇನೆ ಇದು ಸಂತೋಷಕರ ಸಂಗತಿ ಎಂದು ಪತ್ರ ಬರೆಯುತ್ತಾರೆ ಎಂದರು.

ದೇಶದ ಏಕತೆ, ಸಮಗ್ರತೆ ನೇತಾಜಿ ಸಾಕ್ಷೀಯಾಗಿದ್ದಾರೆ. ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಚರಿತ್ರೆಯ 1 ಲಕ್ಷ ಪ್ರತಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುವುದು ಎಂದರು.

ಕರ್ನಾಟಕ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಅಗ್ರಗಣ್ಯ ನಾಯಕರು. ಕೇಂದ್ರ ಸರ್ಕಾರ ನೇತಾಜಿ ಹುಟ್ಟುಹಬ್ಬವನ್ನು ಪರಾಕ್ರಮ ದಿನ ಎಂದು ಘೋಷಣೆ ಮಾಡಿದೆ. ಆಂಗ್ಲರ ನಾಡಿನಲ್ಲಿ ನೇತಾಜಿ ಇಂಡಿಯನ್ ಸಿವಿಲ್ ಸರ್ವಿಸ್ ವಿದ್ಯಾಭ್ಯಾಸದಲ್ಲಿ 4ನೇ ರ್ಯಾಂಕ್ ಪಡೆದರು. ವೈಯಕ್ತಿಕ ಜೀವನ ಮತ್ತು ದೇಶ ಎಂಬುದರಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು  ಸ್ವಾತಂತ್ಯ್ರ ಸಂಗ್ರಾಮದಲ್ಲಿ ಭಾಗವಹಿಸಿದರು ಎಂದರು.

ಇಂಡಿಯನ್ ನ್ಯಾಷನಲ್ ಅರ್ಮಿ ಎಂಬ ಪಡೆ ಕಟ್ಟುತ್ತಾರೆ. ಹಲವಾರು ವಿದೇಶಗಳಿಗೆ ಭೇಟಿ ನೀಡುತ್ತಾರೆ. ಭಾರತದ ಮೊಟ್ಟ ಮೊದಲ ಪ್ರಧಾನಿ ಎಂದು ಘೋಷಣೆ ಮಾಡಿ, ರಾಷ್ಟ ಧ್ವಜಾರೋಹಣ ಮಾಡುತ್ತಾರೆ. ನೇತಾಜಿ ಅವರ ಜೀವನ ಚರಿತ್ರೆಯನ್ನು ಸಾರ್ವಜನಿಕರಿಗೆ ಸಮಗ್ರ ಇತಿಹಾಸ ತಿಳಿಯಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದರು.

ವಿ.ಸೋಮಣ್ಣ ಪ್ರತಿಷ್ಠಾನದ  ಕೋಶಾಧ್ಯಕ್ಷ ಡಾ.ನವೀನ್ ಸೋಮಣ್ಣ, ಹಿರಿಯ ರಾಜಕೀಯ ಮುಖಂಡ ನಾರಾಯಣಸ್ವಾಮಿ, ಎಂ.ಸಿ.ಬಡಾವಣೆ ಸಂಘದ ಸಿದ್ದಲಿಂಗಯ್ಯ, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಬಿ.ಬಿ.ಎಂ.ಪಿ. ಮಾಜಿ ಸದಸ್ಯರಾದ ಶಿಲ್ಪ ಶ್ರೀಧರ್, ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್, ವಾಗೇಶ್, ಡಾ.ಎಸ್.ರಾಜು, ರೂಪಲಿಂಗೇಶ್ವರ್, ಪಲ್ಲವಿ, ದಾಸೇಗೌಡ, ಸ್ಲಂ ಬೋರ್ಡ್ ನಿರ್ದೇಶಕ ಕ್ರಾಂತಿ ರಾಜು, ಬಿ.ಜೆ.ಪಿ. ಮುಖಂಡ ರಾಜಪ್ಪ ಮೊದಲಾದವರು  ಪಾಲ್ಗೊಂಡಿದ್ದರು. ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರಾದ ಧನಂಜಯ್, ಕೃಷ್ಣಗೌಡರವರಿಗೆ ಸನ್ಮಾನಿಸಲಾಯಿತು.

Leave a Reply