ಕಾಡಾನೆ, ಕಾಡೆಮ್ಮೆ ಹಾವಳಿ ತಡೆಗೆ ಪರ್ಯಾಯ ಮಾರ್ಗಗಳ ಬಗ್ಗೆ ಅಧ್ಯಯನ ನಡೆಸಿ: ಈಶ್ವರ್ ಖಂಡ್ರೆ

1 year ago

ಬೆಂಗಳೂರು: ಅರಣ್ಯದಂಚಿನ ಗ್ರಾಮಗಳಲ್ಲಿ ಜೀವ ಮತ್ತು ಬೆಳೆ ಹಾನಿ ಉಂಟು ಮಾಡುತ್ತಿರುವ ಕಾಡಾನೆ ಮತ್ತು ಕಾಡೆಮ್ಮೆ ಹಾವಳಿ ತಡೆಗೆ ಪರ್ಯಾಯ ಮಾರ್ಗೋಪಾಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಾಡಾನೆ ಹಾವಳಿ ತಡೆಗೆ ಸದ್ಯ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಇದು ಸದ್ಯದ ಸಾಬೀತಾದ ಪರಿಹಾರವಾಗಿದೆ. ಆದರೆ ಇದು ಅತ್ಯಂತ ದುಬಾರಿಯಾದ ಪರಿಹಾರವಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿ  ಕಿ.ಮೀ. ಬ್ಯಾರಿಕೇಡ್ ಅಳವಡಿಕೆಗೆ ಸುಮಾರು 1.50 ಕೋಟಿ ರೂ. ವೆಚ್ಚವಾಗುತ್ತಿದೆ. ಇದರ ಜೊತೆಗೆ ರೈಲ್ವೆ ಹಳಿಗಳೂ ಸಿಗುವುದಿಲ್ಲ. ಹೀಗಾಗಿ ನೆರೆಯ ತಮಿಳುನಾಡಿನಲ್ಲಿ ಪರ್ಯಾಯ ವ್ಯವಸ್ಥೆ ರೂಪಿಸಲಾಗಿದೆ. ಇಲ್ಲಿ ಉಕ್ಕಿನ ಹಗ್ಗದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಇದು ಪರಿಣಾಮಕಾರಿ ಮಾತ್ರವಲ್ಲ, ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ಪರಿಹಾರವಾಗಿದೆ ಎಂದಿದ್ದಾರೆ.

ಪ್ರತಿ ಕಿ.ಮೀ.ಉಕ್ಕಿನ ಹಗ್ಗದ ತಡೆಗೋಡೆ ನಿರ್ಮಾಣಕ್ಕೆ 45 ಲಕ್ಷ ರೂ. ವೆಚ್ಚವಾಗುತ್ತದೆ ಎನ್ನಲಾಗಿದೆ. ಹೀಗಾಗಿ ಈ ಬಗ್ಗೆ ಪರಿಶೀಲಿಸಿ 10 ದಿನಗಳ ಒಳಗಾಗಿ ವರದಿ ಸಲ್ಲಿಸಲು  ಸೂಚನೆ ನೀಡಿದ್ದಾರೆ.

ತುಲನಾತ್ಮಕ ವರದಿಗೂ ಸೂಚನೆ: ರಾಜ್ಯದಲ್ಲಿ ಈಗಾಗಲೇ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಮುನ್ನ ಮತ್ತು ಅಳವಡಿಕೆ ನಂತರದ ಜೀವಹಾನಿ ಮತ್ತು ಬೆಳೆಹಾನಿ ಕುರಿತಂತೆ ತುಲನಾತ್ಮಕ ವರದಿ ಸಲ್ಲಿಸುವಂತೆಯೂ ಸೂಚಿಸಿದ್ದಾರೆ.

Leave a Reply