ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ: ಡಾ. ಜಿ. ಪರಮೇಶ್ವರ್

1 year ago

ಬೆಂಗಳೂರು: ರಾಜಧೂ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಅತ್ಯಂತ ಜನನಿಬಿಡ ಮುಖ್ಯ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಅಪಾಯಕಾರಿ ವ್ಹೀಲಿಂಗ್  ಮಾಡಿ ಚಾಕು-ಚೂರಿ ತೋರಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. 

ವಿಧಾನಪರಿಷತ್ತಿನ ಪ್ರಶ್ನೋತ್ತರ ಕಾಲದಲ್ಲಿ ಈ ಕುರಿತಾದ ಪ್ರಸ್ತಾವನೆಗಳಿಗೆ ಉತ್ತರಿಸಿದ ಆವರು ಇಂತಹ ವ್ಯಕ್ತಿಗಳನ್ನು ಮುಲಾಜಿಲ್ಲದೆ ಬಂಧಿಸಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 449 ವ್ಹೀಲಿ ಪ್ರಕರಣಗಳಿಂದ 258 ಮಂದಿಯನ್ನು ಬಂಧಿಸಿದ್ದಾರೆ. ಬೈಕ್ ನಲ್ಲಿ ಕೂತು ಚಾಕು ತೋರಿಸಿದವರ ವಿರುದ್ಧ 160 ಪ್ರಕರಣ ದಾಖಲಿಸಿ 420 ಮಂದಿ ಆರೋಪಿಗಳನ್ನು  ಬಂಧನ ಮಾಡಲಾಗಿದೆ ಎಂದರು.

ಬೆಂಗಳೂರು ನಗರದಲ್ಲಿ 893 ಪ್ರಕರಣ ದಾಖಲಿಸಿ 788 ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಸಮಾಜದ ಶಾಂತಿ ಹಾಳು ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಗಲಭೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಗೂಂಡಾ ಕಾಯ್ದೆಯಡಿ ಮೂರು ವರ್ಷಗಳಲ್ಲಿ 139 ಗೂಂಡಾಗಳನ್ನ ಬಂಧಿಸಿ ಜೈಲಿಗಟ್ಟಲಾಗಿದೆ. ಪೊಲೀಸ್ ಠಾಣೆಗಳಲ್ಲಿ  ಬೀಟ್ ವ್ಯವಸ್ಥೆ ಹೆಚ್ಚಿಸಲಾಗಿದೆ. ಹೊಯ್ಸಳ ಗಸ್ತು ಕರ್ತವ್ಯ ಬಲಪಡಿಸಲಾಗಿದೆ. ಯಾವುದೇ ಸ್ಥಳದಿಂದ 112ಗೆ ಕರೆ ಮಾಡಿದರೆ ಸರಾಸರಿ 9 ನಿಮಿಷಗಳಲ್ಲಿ ಸ್ಥಳಕ್ಕೆ ಹೊಯ್ಸಳ ಬರುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಬೆಂಗಳೂರು ನಗರ ಸುರಕ್ಷತೆ ದೃಷ್ಟಿಯಿಂದ 1640 ಕಡೆಗಳಲ್ಲಿ 7500 ಸಿಸಿಟಿವಿ ಕ್ಯಾಮರ ಅಳವಡಿಸಲಾಗಿದೆ. ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಎಐ ಕ್ಯಾಮರ ಹಾಕಲಾಗಿದೆ. ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡು ಆರೋಪಿಗಳ ಹೆಡೆಮುರಿಯುವ ಕೆಲಸ ಮಾಡಲಾಗುತ್ತಿದೆ.  ಕಳೆದ ಐದು ವರ್ಷಗಳಲ್ಲಿ  ರಾಜ್ಯದಲ್ಲಿ ಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ ಎಂದು ಅಂಕಿ-ಅಂಶ ಸಮೇತ ನೀಡಿದರು.

ಬೆಂಗಳೂರು ಮಾತ್ರವಲ್ಲದೆ ರಾಜ್ಯದಲ್ಲಿ ಸೈಬರ್ ಅಪರಾಧಗಳು ದಿನೇದಿನೆ ಹೆಚ್ಚಾಗುತ್ತಿವೆ. ದಿನನಿತ್ಯ ಕೋಟ್ಯಂತರ ರೂಪಾಯಿ ಹಣವನ್ನ ಜನ ಕಳೆದುಕೊಳ್ಳುತ್ತಿದ್ದಾರೆ. 2022ರಲ್ಲಿ 10,575 ಸೈಬರ್ ಪ್ರಕರಣಗಳು ದಾಖಲಾದರೆ 2024 ಅಂತ್ಯಕ್ಕೆ 21,984 ಪ್ರಕರಣಗಳು ದಾಖಲಾಗಿವೆ. ಸೈಬರ್ ವಂಚನೆ ನಿಯಂತ್ರಣಕ್ಕಾಗಿ ಮೊದಲ ಬಾರಿಗೆ ಪ್ರತ್ಯೇಕ ಡಿಜಿಪಿ ಹುದ್ದೆ ಸೃಷ್ಟಿಸಲಾಗಿದೆ. ಇವರ ನೇತೃತ್ವದಲ್ಲಿ ಒಬ್ಬ ಐಜಿಪಿ, ಏಳು ಎಸ್ಪಿಗಳು ಸೇರಿ ಇನ್ನಿತರ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

Leave a Reply