ಹಿಂದಿ ಹೇರಿಕೆ ವಿರೋಧಿ  ಹೋರಾಟ ಯಶಸ್ವಿ

5 years ago

ಬೆಂಗಳೂರು: ಹಿಂದಿ ದಿವಸ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ಸರಣಿ ಪ್ರತಿಭಟನೆಗಳು ಅಭೂತಪೂರ್ವವಾಗಿ ಯಶಸ್ವಿಯಾಗಿದ್ದು, ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ರಾಷ್ಟ್ರೀಕೃತ, ಗ್ರಾಮೀಣ ಮತ್ತು ಖಾಸಗಿ ಬ್ಯಾಂಕ್ ಗಳ ಮುಂದೆ ಎರಡು ಸಾವಿರಕ್ಕೂ ಹೆಚ್ಚು ಪ್ರತಿಭಟನೆಗಳು ದಾಖಲಾಗಿವೆ.

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲೂ ಕರವೇ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದ್ದು, ಬ್ಯಾಂಕ್ ಗಳ ಮುಂದೆ ನೆರೆದು ಹಿಂದಿ ದಿವಸ ಆಚರಣೆ ವಿರುದ್ಧ ಘೋಷಣೆ ಕೂಗಿದರು. ಬ್ಯಾಂಕ್ ವ್ಯವಸ್ಥಾಪಕರಿಗೆ ಇದೇ ಸಂದರ್ಭದಲ್ಲಿ ಆಗ್ರಹಪತ್ರಗಳನ್ನು ನೀಡಲಾಯಿತು.

ಕರ್ನಾಟಕದ ಎಲ್ಲ ಬಗೆಯ ಬ್ಯಾಂಕುಗಳು, ಕನ್ನಡದಲ್ಲೇ ವ್ಯವಹರಿಸಬೇಕು. ಬ್ಯಾಂಕಿನಲ್ಲಿ ಬಳಕೆಯಾಗುವ ಚಲನ್, ಚೆಕ್ ಪುಸ್ತಕ, ಪಾಸ್ ಬುಕ್ ಗಳಲ್ಲಿ ಕನ್ನಡ ಬಳಕೆಯಾಗಬೇಕು. ಎಟಿಎಂಗಳಲ್ಲಿ ಕನ್ನಡದ ಆಯ್ಕೆ ಇರಬೇಕು. ಗ್ರಾಹಕರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. ಕನ್ನಡೇತರ ಬ್ಯಾಂಕ್ ಸಿಬ್ಬಂದಿ ಕನ್ನಡ ಕಲಿತು ಕನ್ನಡದಲ್ಲಿ ವ್ಯವಹರಿಸಬೇಕು, ಇಲ್ಲದಿದ್ದರೆ ಅವರನ್ನು ತವರು ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಲಾಯಿತು.

ಇಂದು‌ ಬೆಳಿಗ್ಗೆ ಹತ್ತು ಗಂಟೆಯಿಂದಲೇ ಕರವೇ ಕಾರ್ಯಕರ್ತರು ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲೂ ಬೀದಿಗಿಳಿದು ಪ್ರತಿಭಟಿಸಿದರು. ಹಲವೆಡೆ ಪಾದಯಾತ್ರೆ, ಬೈಕ್ ರ‌್ಯಾಲಿ ಮೂಲಕ ಬ್ಯಾಂಕ್ ಗಳ ಬಳಿ ತೆರಳಿದರು. ‘ಹಿಂದಿ ಹೇರಿಕೆಗೆ ಧಿಕ್ಕಾರ’ ‘ಒಕ್ಕೂಟ ಸರ್ಕಾರದ ಮಲತಾಯಿ ಧೋರಣೆಗೆ ಧಿಕ್ಕಾರ’ ಎಂದು ಘೋಷಣೆಗಳನ್ನು ಕೂಗಲಾಯಿತು.

ರಾಜ್ಯದ ಎಲ್ಲ ಭಾಗಗಳಲ್ಲೂ ಇಂದು ಕರವೇ ಕಾರ್ಯಕರ್ತರು ಸಂಸದರು ಮತ್ತು ಶಾಸಕರ ಕಚೇರಿಗಳಿಗೆ ತೆರಳಿ ಆಗ್ರಹಪತ್ರಗಳನ್ನು ಸಲ್ಲಿಸಿದರು. ಒಕ್ಕೂಟ ಸರ್ಕಾರ ಸಂವಿಧಾನದ 343, 351ನೇ ಪರಿಚ್ಛೇದಗಳಿಗೆ ತಿದ್ದುಪಡಿ ತಂದು, ಹಿಂದಿ ಭಾಷೆಗೆ ನೀಡಲಾಗಿರುವ ವಿಶೇಷ ಆದ್ಯತೆಗಳನ್ನು ತೆಗೆದುಹಾಕಬೇಕು. ಎಲ್ಲ ಭಾರತೀಯ ಭಾಷೆಗಳೂ ಸಮಾನ ಎಂದು ಸಂವಿಧಾನದಲ್ಲಿ ಘೋಷಿಸಬೇಕು. ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳನ್ನೂ ಒಕ್ಕೂಟ ಸರ್ಕಾರದ ಆಡಳಿತ ಭಾಷೆಯನ್ನಾಗಿ ಮಾಡಬೇಕು ಎಂದು ಆಗ್ರಹಪತ್ರದಲ್ಲಿ ಒತ್ತಾಯಿಸಲಾಗಿದೆ. ಜನಪ್ರತಿನಿಧಿಗಳು ಶಾಸನ ಸಭೆಗಳಲ್ಲಿ ಈ ವಿಷಯವನ್ನು ಮಾತನಾಡಿ, ಕನ್ನಡಿಗರ ಪರವಾಗಿ ಧ್ವನಿ ಎತ್ತಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.

ಟಿ.ಎ.ನಾರಾಯಣಗೌಡ ಬೆಳಿಗ್ಗೆ ಹತ್ತು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಟ್ವಿಟರ್ ಆಂದೋಲನಕ್ಕೆ ಕರೆ ನೀಡಿದ್ದರು. ಈ ಆಂದೋಲನವೂ ಕೂಡ ಯಶಸ್ಸು ಕಂಡಿತು. ಎರಡೂ ಹ್ಯಾಶ್ ಟ್ಯಾಗ್ ಗಳು ಇಂದು ರಾಷ್ಟ್ರಮಟ್ಟದಲ್ಲಿ ಟ್ರೆಂಡ್ ಆದವು. ಲಕ್ಷಾಂತರ ಟ್ವೀಟ್ ಗಳ ಮೂಲಕ ಒಕ್ಕೂಟ ಸರ್ಕಾರದ ಹಿಂದಿ ಹೇರಿಕೆ ನೀತಿಯನ್ನು ಖಂಡಿಸಲಾಯಿತು.

ಇಂದಿನ ಹೋರಾಟದ ಕುರಿತು ಟ್ವೀಟ್ ಮಾಡಿರುವ ಟಿ.ಎ.ನಾರಾಯಣಗೌಡ, ಹಿಂದಿ ದಿವಸ ಎಂಬುದು ದೇಶದ ಹಿಂದಿಯೇತರ ಜನರ ಮೇಲೆ ನಡೆಸುವ ದೌರ್ಜನ್ಯ, ಭಾಷಾ ಸಮುದಾಯಗಳನ್ನು ವಂಚಿಸುವ ಹುನ್ನಾರ. ನಮ್ಮ ತೆರಿಗೆ ಹಣದಲ್ಲಿ ನಮ್ಮ ಮೇಲೇ ಒಂದು ಭಾಷೆಯನ್ನು ಹೇರುವ ಕುಟಿಲತಂತ್ರ. ನಮ್ಮ ಕೈಗೇ ಕತ್ತರಿ ಕೊಟ್ಟು ನಮ್ಮ ನರಗಳನ್ನೇ ಕತ್ತರಿಸುವ ಹೀನ ಆಚರಣೆ. ಇದನ್ನು ಧಿಕ್ಕರಿಸೋಣ ಎಂದು ಹೇಳಿದ್ದಾರೆ.

ಹಿಂದಿ ದಿವಸ ಎಂಬ ಆಚರಣೆ ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ ಅನೈತಿಕ. ದೇಶದ ಪ್ರಜೆಗಳೆಲ್ಲರೂ ಸಮಾನರು ಎಂಬ ಸಂವಿಧಾನದ ಆಶಯಕ್ಕೆ ವಿರುದ್ಧ. ಕನ್ನಡಿಗರು ಮಾತ್ರವಲ್ಲದೆ ಎಲ್ಲ ಹಿಂದಿಯೇತರ ಭಾಷಾ ಸಮುದಾಯಗಳು ಮತ್ತು ಸಮಾನತೆಯಲ್ಲಿ ನಂಬಿಕೆ ಇಟ್ಟ ಹಿಂದಿ ಭಾಷಿಕರು ಇದನ್ನು  ವಿರೋಧಿಸಬೇಕು ಎಂದು ಕರೆ ನೀಡಿರುವ ಅವರು ಭಾರತ ಒಕ್ಕೂಟದಲ್ಲಿ ನಾವು ಯಾರ ಅಡಿಯಾಳೂ ಅಲ್ಲ. ಭಾರತ ಒಕ್ಕೂಟದಲ್ಲಿ ಪ್ರಥಮ ದರ್ಜೆ ಪ್ರಜೆಗಳು, ಎರಡನೇ ದರ್ಜೆ ಪ್ರಜೆಗಳು ಎಂಬ ಎರಡು ವಿಭಾಗ ಇರಲು ಸಾಧ್ಯವಿಲ್ಲ. ಹಿಂದಿ ಹೇರಿಕೆಯು ಭಾರತೀಯರನ್ನು ಎರಡು ದರ್ಜೆಗಳನ್ನಾಗಿ ವಿಭಾಗಿಸುತ್ತಿದೆ. ಇದು ಒಕ್ಕೂಟ ತತ್ತ್ವಕ್ಕೆ ಮಾರಕ. ಇದು ನಿಲ್ಲಲೇಬೇಕು ಎಂದು ಆಗ್ರಹಿಸಿದ್ದಾರೆ.

Leave a Reply