ಬೆಂಗಳೂರು: ಹಬ್ಬ, ಹರಿದಿನ, ವಿಶೇಷ ಸಂದರ್ಭಗಳಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂದಲ್ಲಿ ವಿಶೇಷ ಭೋಜನ ಬಡಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಬೇಕು ಎಂದು ಹೇಳಿದೆ.
‘ಶಾಲೆಗಾಗಿ ನಾವು ನೀವು’ ಕಾರ್ಯಕ್ರಮದಡಿ ಟ್ರಸ್ಟ್, ಸಂಘ-ಸಂಸ್ಥೆಗಳು, ಎಸ್ಡಿಎಂಸಿಗಳು, ಸಾರ್ವಜನಿಕರೂ ಸೇರಿದಂತೆ ಸಮುದಾಯದವರು ಆರ್ಥಿಕ ನೆರವು ನೀಡಬಹುದು. ವಿಶೇಷ ಪೌಷ್ಠಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದು. ಈ ರೀತಿ ನೀಡುವ ಆಹಾರ ಸಂಪೂರ್ಣ ಸಸ್ಯಾಹಾರ ಆಗಿರಬೇಕು. ಇಲಾಖೆ ಗುರುತಿಸಿರುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿರಬೇಕು ಎಂದು ತಿಳಿಸಿದೆ.
ಈ ಕಾರ್ಯಕ್ರಮದ ಮೂಲಕ ಯಾವುದೇ ವರ್ಗ, ಜಾತಿ, ಮತ, ಲಿಂಗಭೇದವಿಲ್ಲದೆ ನಾವೆಲ್ಲರೂ ಒಂದು ಎಂಬ ಏಕತಾ ಭಾವನೆಯನ್ನು ಮಕ್ಕಳಲ್ಲಿ ಬೆಳೆಸುವುದು ಇದರ ಉದ್ದೇಶ. ಸಮುದಾಯದಲ್ಲೂ ಒಗ್ಗಟ್ಟು, ಸಹಬಾಳ್ವೆ, ಬಾಂಧವ್ಯ, ಐಕ್ಯತೆ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಇಲಾಖೆಯು ಸುತ್ತೋಲೆಯಲ್ಲಿ ತಿಳಿಸಿದೆ.




