ಜನತಾ ಜನಾರ್ದನರ ಪ್ರೀತಿ-ಅಭಿಮಾನಕ್ಕೆ ತುಂಬು ಹೃದಯದ ಕೃತಜ್ಞತೆಗಳು: ಸಿದ್ದರಾಮಯ್ಯ

4 years ago

ದಾವಣಗೆರೆ: ದಾವಣಗೆರೆಯಲ್ಲಿ ನಡೆದ ನನ್ನ ಹುಟ್ಟು ಹಬ್ಬದ ಅಮೃತ ಮಹೋತ್ಸವ ಸಮಾರಂಭಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಬಂದಿರುವ ಜನತಾ ಜನಾರ್ದನರ ಪ್ರೀತಿ-ಅಭಿಮಾನಕ್ಕೆ ತುಂಬು ಹೃದಯದ ಕೃತಜ್ಞತೆಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣಗೆರೆಯಲ್ಲಿ ನಡೆದ ತಮ್ಮ ಜನ್ಮದಿನಾಚರಣೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್, ಬಿ.ಎಲ್.ಶಂಕರ್, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಸೇರಿದಂತೆ ಹಿರಿಕಿರಿಯ ನಾಯಕರು ಮತ್ತು ನಾಡಿನ ಮೂಲೆಮೂಲೆಗಳಿಂದ ಸೇರಿದ್ದ ಸುಮಾರು 10 ಲಕ್ಷ ಜನರ ಸಮಾರಂಭ ಮುಗಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಇಂದಿನ ನನ್ನ ಜನ್ಮದಿನಕ್ಕೆ ಶುಭ ಕೋರಿದ ನನ್ನೆಲ್ಲಾ ಹಿತೈಷಿಗಳಿಗೆ, ಅಭಿಮಾನಿಗಳಿಗೆ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅನಂತ ಧನ್ಯವಾದಗಳು. ತಾವು ತೋರಿದ ಪ್ರೀತಿ, ಅಭಿಮಾನ ಈ ದಿನವನ್ನು ಅವಿಸ್ಮರಣೀಯವಾಗಿಸಿದೆ ಎಂದಿದ್ದಾರೆ.

ದಾವಣಗೆರೆಯಲ್ಲಿ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ, ಶುಭ ಕೋರಿದ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರಿಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಪದಾಧಿಕಾರಿಗಳು, ಶಾಸಕರು ಮತ್ತು ಮಾಜಿ ಶಾಸಕರಿಗೆ ಧನ್ಯವಾದಗಳು ಎಂದಿದ್ದಾರೆ.

ಇಂದಿನ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ, ಸಂತಸದ ಕ್ಷಣದಲ್ಲಿ ನನ್ನೊಂದಿಗೆ ಭಾಗಿಯಾದ ನನ್ನೆಲ್ಲಾ ಸಹೃದಯಿ ಮಿತ್ರರು. ತಮ್ಮ ಪ್ರೀತಿಗೆ ನಾನು ಚಿರ‌ಋಣಿ ಎಂದಿದ್ದಾರೆ.

ಈ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ಅಯೋಜಿಸಿದ್ದ ಸಂಘಟನಾ ಸಮಿತಿಯ ಎಲ್ಲ ಪದಾಧಿಕಾರಿಗಳಿಗೆ ನಾನು ಕೃತಜ್ಞ. ನಿಮ್ಮೆಲ್ಲರ ಶ್ರಮಕ್ಕೆ ಸಾಗರದಂತೆ ಹರಿದುಬಂದ ಜನಸ್ತೋಮವೇ ಸಾಕ್ಷಿ. ಈ ಸಮಾರಂಭದಲ್ಲಿ ಪಾಲ್ಗೊಂಡವರ ಅನುಕೂಲಕ್ಕಾಗಿ ಸಂಘಟಕರು ಶಕ್ತಿಮೀರಿ ವ್ಯವಸ್ಥೆಯನ್ನು ಮಾಡಿದ್ದರೂ ಲಕ್ಷಾಂತರ ಜನರ ಭಾಗವಹಿಸುವಿಕೆಯಿಂದಾಗಿ ಸಹಜವಾಗಿ ಒಂದಷ್ಟು ಅನಾನುಕೂಲವಾಗಿರಬಹುದು. ಅದಕ್ಕಾಗಿ ಕ್ಷಮೆ ಇರಲಿ ಎಂದಿದ್ದಾರೆ.

ನನ್ನ ಹುಟ್ಟುಹಬ್ಬದ ಸಮಾರಂಭಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸ್ವಂತ ಖರ್ಚಿನಲ್ಲಿ ವಾಹನಗಳನ್ನು ವ್ಯವಸ್ಥೆ ಮಾಡಿಕೊಂಡು ಬಂದಿದ್ದಾರೆ. ವಾಹನದಟ್ಟಣೆಯಿಂದಾಗಿ ಮುಖ್ಯವಾಗಿ ಉತ್ತರ ಕರ್ನಾಟಕದಿಂದ ಬಂದಿರುವ ಬಂಧುಗಳು ಸಮಾರಂಭದ ಸ್ಥಳಕ್ಕೆ ಬರಲಾಗದೆ ವಾಪಸು ಹೋಗಿದ್ದಾರೆ. ಇದಕ್ಕಾಗಿ ನಾನು ವಿಷಾದಿಸುತ್ತೇನೆ, ಪ್ರೀತಿ ಇರಲಿ ಎಂದು ಕೋರಿದ್ದಾರೆ.

ಅಮೃತ ಮಹೋತ್ಸವ ಸಮಾರಂಭವನ್ನು ವರದಿ ಮಾಡಲು ಬಂದಿರುವ ಸಮಸ್ತ ಪತ್ರಕರ್ತ ಬಂಧುಗಳಿಗೆ ಧನ್ಯವಾದಗಳು. ವೈ-ಫೈ ಸಮಸ್ಯೆಯೂ ಸೇರಿದಂತೆ ಆಗಿರುವ ಅನಾನುಕೂಲತೆಗಳಿಗಾಗಿ ವಿಷಾದಿಸುತ್ತೇನೆ. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು ಎಂದಿದ್ದಾರೆ.

Leave a Reply