ಮುಧೋಳ ರನ್ನ ಶಾಲೆಗೆ ಶಿಕ್ಷಕರ ಕೊರತೆ ನೀಗಿಸಲು ಕನ್ನಡ ಸಾಹಿತ್ಯ ಪರಿಷತ್ ಆಗ್ರಹ

4 years ago

ಬೆಂಗಳೂರು: ಕವಿ ರನ್ನನ ಹೆಸರಿನಲ್ಲಿ ಇರುವ ಸರಕಾರಿ ಕನ್ನಡ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಸರಿಸುಮಾರು 250 ಮಕ್ಕಳಿಗೆ ಕೇವಲ 4 ಶಿಕ್ಷಕರನ್ನು ನೀಡುವ ಮೂಲಕ ಶಿಕ್ಷಣ ಇಲಾಖೆ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ತಕ್ಷಣದಲ್ಲಿ ಮುಧೋಳ ನಗರದ ಮಧ್ಯದಲ್ಲಿರುವ ಸರಕಾರಿ ರನ್ನ ಮಾದರಿ ಕನ್ನಡ ಪ್ರಾಥಮಿಕ ಶಾಲೆಗೆ ತಕ್ಷಣ ಶಿಕ್ಷಕರ ನೇಮಕ ಮಾಡುವುದರ ಜೊತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಆಗ್ರಹಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ಕೇಂದ್ರದಲ್ಲಿ ಇರುವ ರನ್ನನ ಹೆಸರಿನ ಸರಕಾರಿ ಪ್ರಾಥಮಿಕ ಶಾಲೆಯ ಸ್ಥಿತಿ ತೀರಾ ಹದಗೆಟ್ಟಿದ್ದು, ಇಲ್ಲಿ ಸಮರ್ಪಕ ಶಿಕ್ಷಕರ ಕೊರತೆಯಿದೆ. 250 ವಿದ್ಯಾರ್ಥಿಗಳನ್ನೊಳಗೊಂಡ ಈ ಶಾಲೆ ಕನ್ನಡ ನಾಡಿನ ಹೆಮ್ಮೆಯ ಪ್ರತೀಕವಾಗಿದ್ದು, ಕವಿ ರನ್ನನ ನೆಲದಲ್ಲಿ ಕನ್ನಡದ ಶಾಲೆಗೆ ಇಂಥ ಸ್ಥಿತಿ ಬಂದಿರುವುದು ದುರ್ದೈವ ಎಂದಿದ್ದಾರೆ.

ಸರಕಾರಿ ರನ್ನ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳು ತಮಗೆ ಶಿಕ್ಷಕರ ಕೊರತೆ ಇದೆ ಎಂದು ಮಾಧ್ಯಮದ ಮುಂದೆ ಬಂದು ಹೇಳಿಕೊಳ್ಳುತ್ತಿದ್ದಾರೆ. ಶಾಲಾ ಅಭಿವೃದ್ಧಿ ಸಮಿತಿಯವರು ಶಾಲೆಯ ದುಸ್ಥಿತಿಯ ಬಗ್ಗೆ ಹಾಗೂ ಶಿಕ್ಷಕರ ಕೊರತೆಯನ್ನು ಸಹ ಸರಕಾರದ ಗಮನಕ್ಕೆ ತಂದಿದ್ದಾರೆ. ಆದರೆ ಶಿಕ್ಷಣ ಇಲಾಖೆ ಮಾತ್ರ ಶಾಲೆಗೆ ಬೇಕಾದ ಮೂಲ ಸೌಕರ್ಯ, ಕಟ್ಟಡದ ದುರಸ್ತಿ ಸೇರಿದಂತೆ ಶಿಕ್ಷಕರ ನೇಮಕಾತಿ ಮಾಡದೆ ಶಾಲೆಯ ದುಸ್ಥಿತಿಗೆ ನೇರ ಕಾರಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮುಧೋಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸರಕಾರದ ಹಿರಿಯ ಸಚಿವರಾದ ಗೋವಿಂದ ಕಾರಜೋಳ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಪತ್ರ ಬರೆದು, ಸರಕಾರಿ ರನ್ನ ಮಾದರಿ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯ ಸೇರಿದಂತೆ ಬೇಕಾದ ಶಿಕ್ಷಕರ ನೇಮಕ ಮಾಡುವಂತೆ ಮನವಿ ಮಾಡಲಾಗಿದೆ. ಶಿಕ್ಷಣ ಇಲಾಖೆ ಕನ್ನಡ ಶಾಲೆಗಳ ಬಗ್ಗೆ ಇಬ್ಬಗೆಯ ನೀತಿಯನ್ನು ಅನುಸರಿಸದೆ ಕನ್ನಡ ಶಾಲೆಯ ಉಳಿವಿಗೆ ಮುಂದಾಗಬೇಕಿದೆ. ಕನ್ನಡ ಶಾಲೆಗಳಿಗೆ ಮಕ್ಕಳೇ ಬಾರದ ಸ್ಥಿತಿಯನ್ನು ಸರಕಾರವೇ ಪರೋಕ್ಷವಾಗಿ ಮಾಡುತ್ತಿದೆ ಕಳವಳ ವ್ಯಕ್ತಪಡಿಸಿದ್ದಾರೆ.

Leave a Reply