ಮುಂಬೈ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ, ಲೋಕಸಭೆಯ ಮಾಜಿ ಸ್ಪೀಕರ್ ಶಿವರಾಜ್ ಪಾಟೀಲ್ (90) ಮಹಾರಾಷ್ಟ್ರದ ಲಾತೂರಿನಲ್ಲಿ ತಮ್ಮ ಸ್ವಗ್ರಾಮದಲ್ಲಿ ಕಾಲವಶರಾದರು. ಅವರು ತಮ್ಮ ‘ದೇವ್ಘರ್’ ನಿವಾಸದಲ್ಲಿ ಕೆಲಕಾಲದ ಅನಾರೋಗ್ಯದ ನಂತರ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರು ಪುತ್ರ ಶೈಲೇಶ್ ಪಾಟೀಲ್, ಸೊಸೆ ಅರ್ಚನಾ ಪಾಟೀಲ್ (ಬಿಜೆಪಿ ನಾಯಕಿ) ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಕಾಂಗ್ರೆಸ್ ನಾಯಕರಾದ ಪಾಟೀಲ್ 2004ರಿಂದ 2008ರವರೆಗೆ ಕೇಂದ್ರ ಗೃಹ ಸಚಿವರಾಗಿ ಮತ್ತು 1991ರಿಂದ 1996ರವರೆಗೆ 10ನೇ ಲೋಕಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. 2010ರಿಂದ 2015ರವರೆಗೆ ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
1935 ಅಕ್ಟೋಬರ್ 12ರಂದು ಜನಿಸಿದ ಶಿವರಾಜ್ ಪಾಟೀಲ್ ಲಾತೂರು ಪುರಸಭೆ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದರು. 1970ರ ದಶಕದ ಆರಂಭದಲ್ಲಿ ಶಾಸಕರಾಗಿ ಆಯ್ಕೆಯಾದರು. ನಂತರ ಲಾತೂರು ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರೂಪತಾಯಿ ಪಾಟೀಲ್ ನಿಲಂಗೇಕರ್ ಅವರ ವಿರುದ್ಧ ಸೋಲುಂಡರು.
ಸಾರ್ವಜನಿಕ ಜೀವನದಲ್ಲಿ ಅತ್ಯಂತ ಗೌರವಯುತ ವರ್ತನೆಗೆ ಹೆಸರಾದ ಅವರು, ಸಾರ್ವಜನಿಕ ಭಾಷಣಗಳಲ್ಲಿಯಾಗಲಿ ಅಥವಾ ಖಾಸಗಿ ಸಂಭಾಷಣೆ ಸಮಯದಲ್ಲಾಗಲಿ ಎಲ್ಲಿಯೂ ಸಭ್ಯತೆಯ ಎಲ್ಲೆಯನ್ನು ಮೀರದ ಹಾಗೂ ವೈಯಕ್ತಿಕ ದಾಳಿ ಮಾಡದ ನಡವಳಿಕೆಯಿಂದ ಪ್ರಶಂಸೆಗೆ ಪಾತ್ರರಾಗಿದ್ದರು.
ಪಾಟೀಲ್ ಅವರು ವ್ಯಾಪಕ ಓದು, ಸೂಕ್ಷ್ಮ ಅಧ್ಯಯನ ಮತ್ತು ಸ್ಪಷ್ಟವಾದ ಮಂಡನೆಗೆ ಪ್ರಸಿದ್ಧರಾಗಿದ್ದರು. ಮರಾಠಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಹಿಡಿತ ಹೊಂದಿದ್ದ ಅವರು ಸಾಂವಿಧಾನಿಕ ವಿಷಯಗಳಲ್ಲಿ ಅಪೂರ್ವ ಜ್ಞಾನ ಸಂಪಾದಿಸಿದ್ದರು. ಈ ವಿಶೇಷ ಕಾರಣದಿಂದಾಗಿಯೇ ತಮ್ಮ ಕಾಲದ ಅತ್ಯಂತ ಗೌರವಾನ್ವಿತ ಸಂಸದೀಯ ಸದಸ್ಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.




