ದಾವಣಗೆರೆ: ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಮೂಲಕ ಬಡವರು, ಶೋಷಿತರು ಮತ್ತು ಅವಕಾಶ ವಂಚಿತರ ಏಳಿಗೆಗೆ ಶ್ರಮಿಸುವ ಸಂಕಲ್ಪದೊಂದಿಗೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಸಂಪನ್ನಗೊಂಡಿತು.
ಯಾತ್ರೆಯ ಸಮಾರೋಪ ಸಮಾರಂಭ ಮಹಾಸಂಗಮದ ಹಿನ್ನೆಲೆಯಲ್ಲಿಬೆಣ್ಣೆನಗರಿ ದಾವಣಗೆರೆಯಲ್ಲಿ ಮೋದಿ ಹವಾ ಸೃಷ್ಟಿಯಾಯಿತು ಮಹಾಸಂಗಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ನೋಡಲು ಜನಸಾಗರವೇ ಹರಿದುಬಂದಿತ್ತು.ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಎಂಐಟಿ ಕಾಲೇಜಿನವರೆಗೆ ಎತ್ತ ಕಣ್ಣಾಯಿಸಿದರೂ ಕೇಸರಿಮಯ. ಎಲ್ಲೆಲ್ಲೂ ಕೇಸರಿ, ಬಿಜೆಪಿ ಬಾವುಟಗಳು ರಾರಾಜಿಸಿದವು.
ಜನರ ಹರ್ಷೋದ್ಘಾರಗಳ ನಡುವೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ತಿಳಿಸಿ,ಕಾಂಗ್ರೆಸ್ ನಾಯಕರ ವಿರುದ್ಧ ಪ್ರಹಾರ ನಡೆಸಿದರು.
ಎಐಸಿಸಿ ಅಧ್ಯಕ್ಷರ ಮನೆಯಲ್ಲೇ ಬಿಜೆಪಿ ಗೆಲುವು ಪಡೆದಿದೆ.ವಿಜಯ ಸಂಕಲ್ಪ ಯಾತ್ರೆ ಸಾಗಿದ ಕಡೆಯೆಲ್ಲಾ ಬಿಜೆಪಿ ಗೆಲುವು ಸಾಧಿಸುತ್ತಿದೆ ಈ ಮೂಲಕ ಈ ಯಾತ್ರೆವವಿಜಯ ಮಹೋತ್ಸವವಾಗಿದೆ ಎಂದು ಬಣ್ಣಿಸಿದರು.
ಕಾಂಗ್ರೆಸ್ ಪಕ್ಷದ ಕರ್ಮಭೂಮಿ ಕಲಬುರಗಿಯಲ್ಲಿ ಬಿಜೆಪಿ ಪಕ್ಷದ ಮೇಯರ್ ಆಯ್ಕೆಯಾಗಿದ್ದಾರೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸೂಚನೆಯಾಗಿದೆ. ಇದು ಕೇವಲ ಕಲಬುರಗಿಗೆ ಮಾತ್ರ ಸಿಮೀತವಾಗಿಲ್ಲ, ಡಬಲ್ ಎಂಜಿನ್ ಸರ್ಕಾರದ ಕಾರ್ಯ ನೋಡಿದ ಇಡೀ ರಾಜ್ಯದ ಜನರು ಬಿಜೆಪಿ ಗೆಲ್ಲಿಸಲು ಮುಂದಾಗಿದ್ದಾರೆ. ಎಐಸಿಸಿ ಅಧ್ಯಕ್ಷರ ಮನೆಯಲ್ಲೇ ಕಮಲ ಜಯಭೇರಿ ಬಾರಿಸಿದೆ ಎಂದು ಹೇಳಿದರು.
ನಾನು ಕರ್ನಾಟಕ ವಿಡಿಯೋ ಒಂದನ್ನು ನೋಡಿದೆ ಕಾಂಗ್ರೆಸ್ ಮಾಜಿ ಸಿಎಂ ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಈ ರೀತಿ ಆದರೆ ಸಾಮಾನ್ಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಡಬಲ್ ಇಂಜಿನ್ ಸರ್ಕಾರದಿಂದ ಬೆಂಗಳೂರಿಗೆ ಮೆಟ್ರೋ, ತುಮಕೂರಿನಲ್ಲಿ ಹೆಲಿಕಾಪ್ಟರ್ ಕಂಪನಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ಮೈಸೂರಿಗೆ ದಶಪಥ ರಸ್ತೆ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ಅತಿ ದೊಡ್ಡ ರೈಲ್ವೆ ಪ್ಲಾಟ್ ಪಾರ್ಮ್ ಸಿಕ್ಕಿದೆ. ಜಲ ಜೀವನ ಮಿಶನ್ ಯೋಜನೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಸ್ವಾರ್ಥ, ಅವಕಾಶವಾದಿ ಮೈತ್ರಿ ಸರ್ಕಾರವನ್ನು ನೋಡಿದ್ದೀರಿ. ಇಂತಹ ಸರ್ಕಾರದಿಂದ ಕರ್ನಾಟಕ್ಕೆ ನಷ್ಟ ಆಗಿದೆ. ಇಂತಹ ಸರ್ಕಾರ ಬಂದರೆ ಅದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಎಂಟಿಎಂ ಆಗಲಿದೆ. ಆದ್ದರಿಂದ ರಾಜ್ಯ ಬಿಜೆಪಿಯ ಸಂಪೂರ್ಣ ಬಹುಮತದ ಸರ್ಕಾರದ ಅಗತ್ಯವಿದೆ. ಕರ್ನಾಟದ ಸ್ಥಿರ ಅಭಿವೃದ್ಧಿಗೆ ಬಹುಮತದ ಸರ್ಕಾರ ಅಗತ್ಯವಿದೆ, ಆ ಮೂಲಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ನಾಯಕರು ಚುನಾವಣೆಗೆ ಮುನ್ನವೇ ಗ್ಯಾರಂಟಿ ಘೋಷಣೆ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಒಂದು ತಾಜಾ ಉದಾಹರಣೆ ನೀಡುತ್ತೇನೆ. ಹಿಮಾಚಲದಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಗೆಲುವು ಪಡೆದು ಅಧಿಕಾರ ಪಡೆದಿದೆ. ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಗಳು ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆದರೂ ಜಾರಿಯಾಗಿಲ್ಲ ಎಂದು ಟೀಕಿಸಿದರು.ಈಗ ಹಿಮಾಚಲ ಜನರು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳು ಎಲ್ಲಿ ಹೋಯ್ತು, ಗಾಳಿಯಲ್ಲಿ ಹಾರಿ ಹೋಗಿದೆಯಾ ಅಂತ ಪ್ರಶ್ನಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ಗೆ ಈಗ ಕರ್ನಾಟಕ ಒಂದೇ ಆಸರೆಯಾಗಿದೆ, ಆದ್ದರಿಂದಲೇ ಅವರು ಹಗಲು ಕನಸು ಕಾಣುತ್ತಿದ್ದಾರೆ.ಕಾಂಗ್ರೆಸ್ ಗ್ಯಾರಂಟಿಗಳು ಏನಾಗಿದೆ ಅಂತ ಜನರಿಗೆ ಗೊತ್ತಿದೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ನ ಎಲ್ಲಾ ಗ್ಯಾರಂಟಿಗಳು ಮೂಲೆಗುಂಪಾಗಿದೆ. ನಿರುದ್ಯೋಗ ಭತ್ಯೆಯಂತಹ ಗ್ಯಾರಂಟಿಯಿಂದ ಭ್ರಮೆ ಹುಟ್ಟಿಸಿತು. ಈಗ ಅದರ ಹೆಸರೇ ಇಲ್ಲ. ಇಂಥ ಕಾಂಗ್ರೆಸ್ ಬಗ್ಗೆ ಭರವಸೆ ಇದೆಯೇ? ಎಂದು ವಾಗ್ದಾಳಿ ನಡೆಸಿದರು.



