ದಾವಣಗೆರೆ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ದಾವಣಗೆರೆ ಜಿಲ್ಲಾ ಸಮಿತಿ ಸಭೆಯು ದಿನಾಂಕ 28 ಜನವರಿ 2024 ರಂದು ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಗೆ ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಭಾಗವಹಿಸಿದ್ದರು.
ಸಭೆಯಲ್ಲಿಕೈಗೊಂಡ ನಿರ್ಣಯಗಳು:
- ದಾವಣಗೆರೆಯ ಹೆಗಡೆ ನಗರದ ಜನರನ್ನು ನಂಬಿಸಿ ಶಾಸಕ ಶ್ಯಾಮನೂರು ಶಿವಶಂಕರಪ್ಪ ಕತ್ತು ಕುಯ್ದಿದ್ದಾರೆ. ಅವರೆಲ್ಲ ಈಗ ನಿರಾಶ್ರಿತ ಪ್ರಜೆಗಳಂತೆ ಕಣ್ಣೀರಲ್ಲಿ ಬದುಕುತ್ತಿದ್ದು, ತಕ್ಷಣ ಎಚ್ಚೆತ್ತುಕೊಂಡು ಅವರಿಗೆ ಶಾಶ್ವತ ಸೂರು ಒದಗಿಸಲು ಪ್ರಯತ್ನಿಸುವ ಬದಲು ಕಾಂಗ್ರೆಸ್ ಪಕ್ಷದ ಸೀನಿಯರ್ ಲೀಡರ್ ಮತ್ತು ಸ್ಥಳೀಯ ಶಾಸಕರಾಗಿರುವ ಶಾಮನೂರು ಶಿವಶಂಕರಪ್ಪ ಅವರು ವಿರೋಧ ಪಕ್ಷದ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಕೊಡ್ತಾರೆಂದರೆ ಏನರ್ಥ? ಲೋಕಸಭೆಗೆ ಮತ್ತೆ ಇವರಿಗೇ ಓಟು ಹಾಕಬೇಕು ಇಲ್ಲ ನಿಮಗೆ ಅಪಾಯ ಎಂದು ಬಿಜೆಪಿಯ ಗುಮ್ಮ ತೋರಿಸುತ್ತಾರೆ. ದಾವಣಗೆರೆಯಲ್ಲಿ ಇವರ ನಾಟಕಕ್ಕೆ ಮುಸ್ಲಿಂರು ಬಲಿಪಶುಗಳಾಗಿದ್ದಾರೆ ಎಂದು ಸಭೆಯು ಅಭಿಪ್ರಾಯಪಟ್ಟಿತು.
- ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿರುವ ದಾವಣಗೆರೆಯ ಮುಖ್ಯಭಾಗದಲ್ಲಿದ್ದ ಹೆಗಡೆ ನಗರದ ಜನರನ್ನು ಉತ್ತಮ ವ್ಯವಸ್ಥೆಗಳೊಂದಿಗೆ ಒಳ್ಳೆಯ ಕಡೆ ಮನೆ ಮಾಡಿಸಿಕೊಡುತ್ತೇವೆ ಎಂದು ನಂಬಿಸಿ ಸುಮಾರು 7-8 ಕಿಲೋಮೀಟರ್ ದೂರದ ದೊಡ್ಡಬಾತಿ ಎಂಬಲ್ಲಿನ ಬಯಲಿನಲ್ಲಿ ಬಿಟ್ಟು ಬರಲಾಗಿದೆ. ಇದು ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ತಮ್ಮದೇ ಕ್ಷೇತ್ರದ ಜನರನ್ನು ನಂಬಿಸಿ ಕತ್ತು ಕುಯ್ಯುವ ಕಾರ್ಯವಾಗಿದ್ದು 450ಕ್ಕೂ ಹೆಚ್ಚು ಕುಟುಂಬಗಳು ಈಗ ನಿರಾಶ್ರಿತ ಪ್ರಜೆಗಳಂತೆ ಕಣ್ಣೀರಲ್ಲಿ ಬದುಕುತ್ತಿದ್ದಾರೆ. ಎಸ್ಡಿಪಿಐ ರಾಜ್ಯ ಮತ್ತು ಜಿಲ್ಲಾ ನಾಯಕರ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಸತ್ಯ ಶೋಧನಾ ವರದಿ ತಯಾರಿಸಿ ಅದನ್ನು ಪತ್ರಿಕಾ ಗೋಷ್ಠಿಯ ಮುಖಾಂತರ ಬಿಡುಗಡೆ ಮಾಡಿ ಮುಖ್ಯ ಮಂತ್ರಿ, ವಸತಿ ಸಚಿವ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿತ್ತು. ನಂತರ ಈ ಮೊದಲು ಸಮರ್ಪಕ ದಾಖಲೆಗಳಿಲ್ಲ ಎಂದು ಅನಾಥರಂತೆ ಒಂದೇ ಟೆಂಟಿನ ಕೆಳಗೆ ದೂಡಲಾಗಿದ್ದ ಸುಮಾರು 20 ಕ್ಕೂ ಹೆಚ್ಚು ಕುಟುಂಬಗಳಿಗೆ ನಿರ್ದಿಷ್ಟ ಸ್ಥಳ ತೋರಿಸಿ ಹಕ್ಕುಪತ್ರ ವಿತರಿಸಿರುವುನ್ನು ಸಭೆಯಲ್ಲಿ ಸ್ವಾಗತಿಸಲಾಯಿತು.
- ಸದ್ಯ ಇಲ್ಲಿನ ಜನ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಅಕ್ಷರಶಃ ನರಕದಲ್ಲಿ ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಅವರ ತಲೆಯ ಮೇಲೆ ಸೂರು ಬರುವುದು ಯಾವಾಗ ಎಂದು ಅವರಿಗೆ ಯಾವ ಭರವಸೆಯನ್ನು ಜಿಲ್ಲಾಡಳಿತವಾಗಲಿ, ಶಾಸಕರಾಗಲಿ ನೀಡಿರಲ್ಲ. ಇದರ ವಿರುದ್ಧ ಸೂಕ್ತ ಹೋರಾಟಕ್ಕೆ ಸಭೆಯಲ್ಲಿ ನಿರ್ಣಯಿಸಲಾಯಿತು.
- ತಮ್ಮದೇ ದೇಶದಲ್ಲಿ ನಿರಾಶ್ರಿತರಂತೆ ಬದುಕುತ್ತಿರುವವರ ಪರ ಎಸ್ಡಿಪಿಐ ಪಕ್ಷ ನಿಲ್ಲಲಿದೆ. ಮಾನ್ಯ ವಸತಿ ಸಚಿವರಾದ ಜಮೀರ್ ಅಹಮದ್ ಖಾನ್, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸ್ಥಳೀಯ ಶಾಸಕರಾದ ಶಾಮನೂರು ಶಂಕ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಸಂಭಂದಪಟ್ಟ ಅಧಿಕಾರಿಗಳಿಗೆ ಪಕ್ಷದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸುತ್ತಿದ್ದು, ಒಂದು ತಿಂಗಳ ಗಡುವು ನೀಡಲಾಗಿದೆ ಜಿಲ್ಲಾಡಳಿತ ಮತ್ತು ಸರ್ಕಾರ ತಕ್ಷಣ ಇವರಿಗೆ ಪಕ್ಕ ಮನೆ ಮತ್ತು ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು; ಇಲ್ಲವಾದರೆ ಮುಂದಿನ ದಿನಗಳಲ್ಲಿ ಇಲ್ಲಿನ ಸಂತ್ರಸ್ತರನ್ನು ಸೇರಿಸಿಕೊಂಡು ಬೃಹತ್ ಮಟ್ಟದ ಹೋರಾಟ ರೂಪಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ಫಾಕ್, ಕೋಶಾಧಿಕಾರಿ ಎ ಆರ್ ತಾಹೀರ್ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಮನ್ಸುರ್ ಆಲಿ , ಫರೀದ್ ಖಾನ್ ಮತ್ತು ಹರಿಹರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಮತ್ತು ಸದಸ್ಯರು, ದಾವಣಗೆರೆ ನಗರ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಬ್ರಾಂಚ್ ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.




