ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿ 7ನೇ ವೇತನ ಆಯೋಗ ಜಾರಿಗೆ ಮತ್ತು ಎನ್.ಪಿ.ಎಸ್. ರದ್ದುಪಡಿಸಿ ಓ.ಪಿ.ಎಸ್.ಯೋಜನೆಯ ಜಾರಿಗೆ ತರಲು ಕರ್ನಾಟಕ ರಾಜ್ಯ ನೌಕರರ ಸಂಘದ ಅನಿರ್ದಿಷ್ಟಾವಧಿ ಮುಷ್ಕರ ಬೆಂಬಲಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಬೆಂಬಲಿಸಿ ಸಾವಿರಾರು ಸಂಖ್ಯೆಯಲ್ಲಿ ಅಧಿಕಾರಿ, ನೌಕರರಿಂದ ಪ್ರತಿಭಟನೆ ನಡೆಸಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ಗೌರವಾಧ್ಯಕ್ಷ ಹೆಚ್.ವಿ.ಅಶ್ವಥ್, ಅಧಿಕಾರಿ ಮತ್ತು ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಎ.ಅಮೃತ್ ರಾಜ್ ಮಾತನಾಡಿ, ಬೆಂಗಳೂರು ನಗರ ಪ್ರದೇಶದಲ್ಲಿ ವಾಸ ಮಾಡುವವರ ಪ್ರತಿ ತಿಂಗಳು ಖರ್ಚು ವೆಚ್ಚ ಹೆಚ್ಚು ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆ ಯಾಗಿದೆ. ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ವೇತನ ಮಾತ್ರ ಕಡಿಮೆ. ಕೊರೋನ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದರು. 30ಕ್ಕೂ ಹೆಚ್ಚು ನೌಕರರು ಕೊರೋನ ಕಾರಣದಿಂದ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮೃತಪಟ್ಟರು ಎಂದರು.
ಚುನಾವಣೆ ಕಾರ್ಯ ಮತ್ತು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ನಾನಾ ಸಮಸ್ಯೆಗಳು ಇದ್ದರೂ ಕುಟುಂಬದ ಕಡೆ ಗಮನಹರಿಸದೇ ಬೆಂಗಳೂರು ನಗರ ಅಭಿವೃದ್ದಿಗೆ ಹಗಲಿರಳು ಶ್ರಮಿಸುತ್ತಿದ್ದಾರೆ. ತನ್ನ ಅರ್ಧ ಜೀವನ ಸೇವೆ ಸಲ್ಲಿಸುವ ಅಧಿಕಾರಿ, ನೌಕರರು ನಿವೃತ್ತಿ ನಂತರ ವಯೋಸಹಜ ಖಾಯಿಲೆ ಮತ್ತು ಜೀವನ ನಿರ್ವಹಣೆ ಮಾಡಲು ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿ ಇರುತ್ತಾರೆ. ಸಂಧ್ಯಾಕಾಲದಲ್ಲಿ ಹಿರಿಯ ಜೀವಗಳಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಿದರೆ ವಿಶ್ರಾಂತ ಜೀವನ ಸುಖವಾಗಿ ಕಳೆಯುತ್ತಾರೆ ಎಂದರು.
ನಾವು ಎರಡು ಪ್ರಮುಖ ಬೇಡಿಕೆಗೆಳಾದ ವೇತನ ಹೆಚ್ಚಳ ಮತ್ತು ಓಪಿಎಸ್ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೇವೆ. ನೌಕರರ ಜೀವ ಉಳಿಸಿ, ಜೀವನ ನಿರ್ವಹಣೆಗೆ ವೇತನ ಹೆಚ್ಚಳ ಮಾಡಿ. 7ನೇ ವೇತನ ಆಯೋಗ ಜಾರಿಯಾಗಬೇಕು ಮತ್ತು ಓಪಿಎಸ್ ಯೋಜನೆ ಕುರಿತು ಸರ್ಕಾರ ಆದೇಶ ನೀಡುವರಗೆ ಗೈರು ಹಾಜರಿ ಆಗುವ ಮೂಲಕ ಹೋರಾಟ ನಡೆಸಲಾಗುವುದು ಎಂದರು.
ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿರವರು ನೌಕರರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ ಎಂದರು.
ಸಂಘದ ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಕೆ.ಜಿ.ರವಿ, ರಾಮಚಂದ್ರ, ಸಾಯಿಶಂಕರ್, ರುದ್ರೇಶ್, ಸಂತೋಷ್ ಕುಮಾರ್ ನಾಯ್ಕ್, ಜಿ.ಮಂಜುನಾಥ್, ನಂಜಪ್ಪ, ಕೆ.ಮಂಜೇಗೌಡ, ಬಾಬಣ್ಣ, ಮಂಜು, ಸೂರ್ಯಕುಮಾರಿ, ರೇಣುಕಾಂಬ, ಸಂಧ್ಯಾ ಸೇರಿದಂತೆ ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.



