ಸತೀಶ್ ಜಾರಕಿಹೊಳಿ ಅವರಿಗೆ ಹೆಚ್ಚಿನ ಜವಾಬ್ದಾರಿ ಸಾಧ್ಯತೆ

3 years ago

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಬಹುಮತ ಗಳಿಸುವ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿದಿರುವ ಬೆನ್ನಲ್ಲೇ ಪಕ್ಷದ ಗೆಲುವಿಗೆ ಪ್ರಮುಖವಾಗಿ ಕಾರಣರಾದವರಿಗೆ ಉನ್ನತ ಹುದ್ದೆಯ ಗೌರವ ಲಭಿಸಲಿದೆ. ಈ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ಕಾಂಗ್ರೆಸ್ ನ ಕೈ ಹಿಡಿದಿದ್ದು ಸರ್ಕಾರದಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಹೈಕಮಾಂಡ್ ನಿರ್ಧರಿಸಿದೆ.

ಪ್ರಮುಖವಾಗಿ ಮುಂಬೈ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗೆ ವಿಶೇಷ ಕೊಡುಗೆ ನೀಡಿದ ಪಕ್ಷದ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಹೆಚ್ಚಿನ ಜವಾಬ್ದಾರಿ ಸಿಗುವ ಸಾಧ್ಯತೆ ಇದ್ದು, ಇವರೊಂದಿಗೆ ಬೆಳಗಾವಿಯ ಲಕ್ಷ್ಮಣ ಸವದಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಮಂತ್ರಿ ಆಗಲಿದ್ದಾರೆ.

ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅಥವಾ ಆರ್. ವಿ. ದೇಶಪಾಂಡೆ ವಿಧಾನಸಭೆಯ ಅಧ್ಯಕ್ಷರಾಗಲಿದ್ದು, ಉಪಾಧ್ಯಕ್ಷರಾಗಿ ಮಹಾಂತೇಶ ಕೌಜಲಗಿ ಇಲ್ಲವೇ ಎನ್ ವೈ ಗೋಪಾಲಕೃಷ್ಣ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಂ.ಬಿ.ಪಾಟೀಲ್ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಡಾ. ಜಿ ಪರಮೇಶ್ವರ್, ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ ಖರ್ಗೆ ಅವರಿಗೂ ಮಹತ್ವದ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ.

ಇವರೊಂದಿಗೆ ಸಂಪುಟಕ್ಕೆ ಆರ್ ಬಿ ತಿಮ್ಮಾಪುರ, ಎಚ್ ಕೆ ಪಾಟೀಲ್, ಕೆ.ಜೆ.ಜಾರ್ಜ್, ಎಸ್.ಎಸ್.ಮಲ್ಲಿಕಾರ್ಜುನ್
ರಾಮಲಿಂಗಾರೆಡ್ಡಿ, ಬಿ.ಆರ್ ಪಾಟೀಲ್, ಯುಟಿ ಖಾದರ್, ಎ.ಎಸ್. ಪೊನ್ನಣ್ಣ, ಮಧು ಬಂಗಾರಪ್ಪ, ಸಂತೋಷ್ ಲಾಡ್, ರುದ್ರಪ್ಪ ಲಮಾಣಿ, ಈಶ್ವರ ಖಂಡ್ರೆ, ರಾಜಾ ವೆಂಕಟಪ್ಪ ನಾಯಕ್, ಶಿವರಾಜ್ ತಂಗಡಗಿ, ಎಸ್.ಡಿ.ತಮ್ಮಯ್ಯ, ಬಿ.ಜಿ.ಗೋವಿಂದಪ್ಪ, ಎಂ.ಸಿ.ಸುಧಾಕರ್, ಶಿವಲಿಂಗೇಗೌಡ, ಅನಿಲ್ ಚಿಕ್ಕಮಾಧು ಮತ್ತು ನರೇಂದ್ರ ಸ್ವಾಮಿ ಮಂತ್ರಿ ಮಂಡಲ ಸೇರುವ ಸಾಧ್ಯತೆಗಳಿವೆ.

Leave a Reply