ಸಫಾಯಿ ಕರ್ಮಚಾರಿಗಳಿಗೆ ಕಾನೂನಾತ್ಮಕವಾಗಿ ಎಲ್ಲ ಸೌಲಭ್ಯಗಳು ಸಿಗಬೇಕು

2 years ago

ವಿಳಂಬ, ತಿರಸ್ಕಾರ ಮಾಡಿದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ

ರಾಷ್ಟ್ರೀಯ ಸಫಾಯಿ ಕಾರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಎಚ್ಚರಿಕೆ

ಧಾರವಾಡ: ಸಫಾಯಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ರಾಷ್ಟ್ರೀಯ ಮತ್ತು ರಾಜ್ಯ ಸರಕಾರಗಳಿಂದ ಕಾನೂನಾತ್ಮಕವಾಗಿ ಸೀಗಬೇಕಾದ ಎಲ್ಲ ಸೌಕರ್ಯ, ಸೌಲಭ್ಯಗಳನ್ನು ಪೂರೈಸುವುದು ಆಯಾ ಸ್ಥಳೀಯ ಸಂಸ್ಥೆ, ಇಲಾಖೆಗಳ ಮುಖ್ಯಸ್ಥರ ಕರ್ತವ್ಯವಾಗಿದೆ. ಪೌರಕಾರ್ಮಿಕರಿಗೆ ಸೀಗಬೇಕಾದ ಸವಲತ್ತುಗಳನ್ನು ನೀಡುವಲ್ಲಿ ಅನಗತ್ಯ ವಿಳಂಬ ಅಥವಾ ಅವುಗಳನ್ನು ತಿರಸ್ಕರಿಸಿದರೆ ಅಂತಹ ಅಧಿಕಾರಿಗಳ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ರಾಷ್ಟ್ರೀಯ ಸಫಾಯಿ ಕಾರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿಗಳ ಸೌಲಭ್ಯ ಮತ್ತು ಸಮಸ್ಯೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.

ಜಿಲ್ಲೆಯ ನಗರಸ್ಥಳೀಯ ಸಂಸ್ಥೆಗಳಲ್ಲಿ, ಸರಕಾರದ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಕನಿಷ್ಠ ವೇತನ ಖಾತರಿಪಡಿಸಬೇಕು. ಅವರಿಗೆ ಉತ್ತಮ ಉಪಹಾರ, ಊಟ ನೀಡಬೇಕು. ಪುರುಷ ಮತ್ತು ಮಹಿಳಾ ಪೌರ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ ಕಲ್ಪಿಸಬೇಕು. ಸಂರಕ್ಷಣ ಕವಚ, ಸಮವಸ್ತ್ರ, ಗಮ್ಬೂಟ್ ವಿತರಿಸಬೇಕು. ಪ್ರತಿ ಸಫಾಯಿ ಕರ್ಮಚಾರಿಗೆ ನ್ಯಾಯಯುತವಾಗಿ ಸೀಗಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.

ಸಫಾಯಿ ಕರ್ಮಚಾರಿಗಳಿಂದ ಸಮಸ್ಯೆ, ದೂರುಗಳನ್ನು ಖುದ್ದು ಆಲಿಸಿ, ಸಂಬಂಧಿಸಿದ ಅಧಿಕಾರಿಗಳಿಂದ ಅವರು ಉತ್ತರ ಪಡೆದರು. ಕಲಘಟಗಿ, ಅಳ್ನಾವರ ಪಟ್ಟಣ ಪಂಚಾಯಿತಿಗಳಲ್ಲಿ ಪೌರ ಕಾರ್ಮಿಕರಿಗೆ ನಿಯಮಿತವಾಗಿ ಮಾಸಿಕ ವೇತನ ಆಗುತ್ತಿಲ್ಲ ಎಂಬುದನ್ನು ತಿಳಿದು, ಅಲ್ಲಿನ ಮುಖ್ಯಾಧಿಕಾರಿಗಳಿಗೆ ಮುಂದಿನ ಎರಡು ಮೂರು ದಿನಗಳಲ್ಲಿ ವೇತನ ಪಾವತಿಸುವಂತೆ ನಿರ್ದೇಶನ ನೀಡಿದರು.

ಪೌರ ಕಾರ್ಮಿಕರಿಂದ, ಪೌರ ಕಾರ್ಮಿಕ ಸಂಘಟನೆಗಳಿಂದ ಸಮಸ್ಯೆಗಳನ್ನು ಆಲಿಸಿದ ಆಯೋಗದ ಅಧ್ಯಕ್ಷರು, ಮುಂದಿನ ಆರು ತಿಂಗಳಲ್ಲಿ ಪರಿಹರಿಸಿ, ವರದಿ ನೀಡಬೇಕು. ಸಫಾಯಿ ಕರ್ಮಚಾರಿಗಳಿಗೆ ತೊಂದರೆ, ಕಿರುಕುಳ ಆದರೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಮಾಹಿತಿ ನೀಡಬೇಕು ಮತ್ತು ಆಯೋಗಕ್ಕೆ ದೂರು ಸಲ್ಲಿಸಲು ಬಯಸಿದಲ್ಲಿ ದೂರವಾಣಿ ಸಂಖ್ಯೆ : 01124648924 ಗೆ ಕರೆ ಮಾಡಿ ತಿಳಿಸಬಹುದು ಅಥವಾ ಎನ್ಸಿಎಸ್ಕೆ (NCSK) ವೆಬ್ಸೈಟ್ ಮೂಲಕ ತಮ್ಮ ದೂರು ದಾಖಲಿಸಬಹುದು. ಸೂಕ್ತ ತನಿಖೆ ನಡೆಸಿ ಪರಿಹರಿಸಲಾಗುವುದು ಮತ್ತು ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಮಹಿಳಾ ಪೌರ ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಯಾವುದೇ ರೀತಿಯ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಅನಗತ್ಯ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಆಂತರಿಕ ಸಮಿತಿ ರಚಿಸಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯತ ಪ್ರಭಾರಿ ಸಿಇಓ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಪೌರ ಕಾರ್ಮಿಕರಿಗೆ ಎಲ್ಲ ಹಕ್ಕುಗಳನ್ನು ಅನುಭವಿಸಲು ಅವಕಾಶವಿದೆ. ಕನಿಷ್ಠ ವೇತನ ನೀಡುವಲ್ಲಿ ಅಥವಾ ವೇತನ, ಭತ್ಯೆಗಳಲ್ಲಿ ತಾರತಮ್ಯವಾದರೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಸ್ವಯಂ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಬೇಕು. ಕಾರ್ಮಿಕ ಇಲಾಖೆ ಆದೇಶಗಳನ್ನು ಇಲಾಖೆಯ ಅಧಿಕಾರಿಗಳು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು.

ಪೌರಕಾರ್ಮಿಕರು ಸಮಸ್ಯೆಗಳಿದ್ದಲ್ಲಿ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ದೂರು ಸಲ್ಲಿಸಬಹುದು. ಪೌರಕಾರ್ಮಿಕರಿಗೆ ಸೀಗಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ತೊಂದರೆಗಳಿದ್ದಲ್ಲಿ ಪರಿಹರಿಸಲಾಗುವುದು ಎಂದರು.

ಸರಕಾರದ ನೀತಿ ವಿಷಯಗಳಾಗಿದ್ದಲ್ಲಿ ಅದನ್ನು ಸರಕಾರದ ಗಮನಕ್ಕೆ ತರಲಾಗುವುದು. ಜಿಲ್ಲಾ ಹಂತದಲ್ಲಿ ಪರಿಹರಿಸಬಹುದಾದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಆರು ನಗರ ಸ್ಥಳೀಯ ಸಂಸ್ಥೆಗಳು, ಎರಡು ಪಟ್ಟಣ ಪಂಚಾಯತಿ ಹಾಗೂ ಹು-ಧಾ ಮಹಾನಗರ ಎಲ್ಲ ಸೇರಿ 182 ವಾರ್ಡಗಳಲ್ಲಿ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಗೃಹಭಾಗ್ಯ ಯೋಜನೆಯಲ್ಲಿ 468 ಖಾಯಂ ಪೌರಕಾರ್ಮಿಕರ ಪೈಕಿ 378 ಮನೆ ಒದಗಿಸಲಾಗಿದ್ದು, 89 ಕಾರ್ಮಿಕರಿಗೆ ಇನ್ನೂ ನಿವೇಶನವಿಲ್ಲದವರಿಗೆ ಮನೆ ಕಲ್ಪಿಸಲಾಗಿಲ್ಲ. ಅವಳಿನಗರಗಳಲ್ಲಿ ಮೂರು ಅಂತಸ್ಥಿನ 320 ಮನೆಗಳನ್ನು ಕಟ್ಟಿಸಲಾಗಿದೆ ಎಂದರು.

ಪೌರಕಾರ್ಮಿಕರಿಗೆ ಅಗತ್ಯ ರಕ್ಷಣಾ ಪರಿಕರಗಳನ್ನು ಕೈಗೆ ಗ್ಲೌಸ್, ಗಮ್ಬೂಟ್, ಹೆಲ್ಮೆಟ್, ಸಮವಸ್ತ್ರ, ಉಪಹಾರವನ್ನು ಒದಗಿಸಲಾಗುತ್ತಿದೆ. ಒಟ್ಟು 59 ಏಜೆನ್ಸಿಗಳಿಂದ ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಲಾಗುತ್ತಿದೆ. 146 ಶೌಚಾಲಯಕ್ಕೆ ಹು-ಧಾ ಪಾಲಿಕೆಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಎರಡು ಸ್ಥಳಗಳಿದ್ದು, ಒಳಚರಂಡಿ ಕಾಮಗಾರಿಗೆ ಪ್ರತ್ಯೇಕ 52 ಕಾರ್ಮಿಕರು ವಿಶೇಷ ಮಶೀನ್ ಬಳಸಿ ಕಾರ್ಯನಿರ್ವಹಿಸುತ್ತಾರೆಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರಿಗೆ ಸರಕಾರದ ಆದೇಶದಂತೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಮವಸ್ತ್ರ ಹಾಗೂ ಸುರಕ್ಷಾ ಪರಿಕರಗಳನ್ನು ನೀಡಲಾಗಿದೆ. ಮ್ಯಾನ್ಹೊಲ್ ಸ್ವಚ್ಚತೆಗೆ ಮಾನವ ಬಳಕೆಯನ್ನು ನಿಷೇಧಿಸಲಾಗಿದೆ. ಜಟ್ಟಿಂಗ್ ಮಶೀನ್ಗಳನ್ನು ಬಳಸಲಾಗುತ್ತದೆ. ಪೌರ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗೆ ಪ್ರಾಮುಖ್ಯತೆ ನೀಡಿ, ಅವರಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಮಹಾನಗರ ಪಾಲಿಕೆಯ 82 ವಾರ್ಡಗಳಲ್ಲಿ ಕಾರ್ಮಿಕರಿಗಾಗಿ ಭೀಮಾಶ್ರಯ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲಾಗಿದ್ದು, 25 ಕೊಠಡಿಗಳನ್ನು ಹಸ್ತಾಂತರಿಸಬೇಕಿದೆ. 7 ಕೊಠಡಿಗಳಲ್ಲಿ ನೀರು ಸರಬರಾಜು ವ್ಯವಸ್ಥೆ ಬಾಕಿಯಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.

ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ರಮೇಶ ಬಿ., ಅವರು ಮಾತನಾಡಿ, ಕಲಘಟಗಿ ಸೇರಿದಂತೆ ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ವರ್ಗಾವಣೆಯಿಂದ ಪೌರ ಕಾರ್ಮಿಕರ ವೇತನ ವಿಳಂಬವಾಗಿತ್ತು. ಈಗ ನೇರವಾಗಿ ಅವರ ಖಾತೆಗೆ ವೇತನ ಜಮೆ ಆಗುತ್ತಿದೆ. ಪೌರ ಕಾರ್ಮಿಕರ ಇಎಸ್ಐ, ಪಿಎಫ್ಗಳನ್ನು ನಿಯಮಿತವಾಗಿ ತುಂಬುವಂತೆ ಕಾಂಟ್ರ್ಯಾಕ್ಟರಗೆ ನಿರ್ದೇಶಿಸಿ, ನಿಗಾವಹಿಸಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಪ ಪೊಲೀಸ್ ಆಯುಕ್ತ ಕುಶಲ್ ಚೌಕ್ಸೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಇದ್ದರು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭಾ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.

ಅನುವಾದಕಿಯಾದ ದಿವ್ಯಪ್ರಭು: ಇಂದಿನ ಸಭೆಯಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ವೆಂಕಟೇಶನ್ ಅವರ ಇಂಗ್ಲೀಷ ಮತ್ತು ತಮಿಳು ಭಾಷೆಯ ವಿಷಯಗಳನ್ನು ಕನ್ನಡಕ್ಕೆ ಅನುವಾದಿಸಿ, ಸಭೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದು, ವಿಶೇಷವಾಗಿತ್ತು.

ತಮಿಳುನಾಡು ಮೂಲದ ಅಧ್ಯಕ್ಷ ಎಂ. ವೆಂಕಟೇಶನ್ ಅವರಿಗೆ ಕನ್ನಡ ಭಾಷೆ ಬಾರದಿದ್ದರಿಂದ ಸಭೆಯಲ್ಲಿನ ಅವರ ಸೂಚನೆ, ಪ್ರಶ್ನೆ, ನಿರ್ದೆಶನಗಳನ್ನು ಅನುವಾದಿಸಿ, ಅಚ್ಚ ಕನ್ನಡದಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ, ಪೌರ ಕಾರ್ಮಿಕರಿಗೆ ತಿಳಿಸಿ, ಅವರ ಉತ್ತರಗಳನ್ನು ತಮಿಳಿಗೆ ಭಾಷಾಂತರಿಸಿ, ಅಧ್ಯಕ್ಷರಿಗೆ ತಿಳಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು, ಪೌರ ಕಾರ್ಮಿಕರು, ಪೌರ ಕಾರ್ಮಿಕರ ಸಂಘಟನೆಗಳ ಪ್ರಮುಖರು, ಸಫಾಯಿ ಕರ್ಮಚಾರಿ ಜಿಲ್ಲಾ ಸದಸ್ಯರು ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply