ಬಾಗಲಕೋಟೆ: ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ ಅವರನ್ನು ಇಂದು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಕರವೇ ಆರೋಪಿಸಿದ್ದು, ಈ ಸಂಬಂಧ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.
ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸೇರಿದಂತೆ ಹಲವು ಬಿಜೆಪಿ ಮುಖಂಡರ ಬಾಗಲಕೋಟೆ ಭೇಟಿ ಕಾರ್ಯಕ್ರಮವಿದೆ. ಈ ಸಂದರ್ಭದಲ್ಲಿ ಈ ಎಲ್ಲ ಮುಖಂಡರ ಬೂಟ್ ಪಾಲೀಶ್ ಮಾಡಿ ಬಾಗಲಕೋಟೆಗೆ ಮಂಜೂರಾಗಿರುವ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಣಿಗೆ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಬಾಗಲಕೋಟೆ ಕರ್ನಾಟಕ ರಕ್ಷಣಾ ವೇದಿಕೆ ಘಟಕ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ರಮೇಶ್ ಬದ್ನೂರ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ ಎಂದು ಕರವೇ ಹೇಳಿದೆ.
ಬಾಗಲಕೋಟೆ ನಗರದಲ್ಲಿ ಎಲ್ಲೆಡೆ ಓಡಾಡಿ ಬೂಟ್ ಪಾಲೀಶ್ ಮಾಡಿ ಎಂದು ಬಿಟ್ಟಿ ಉಪದೇಶ ನೀಡಿದ್ದೇ ಸ್ಥಳೀಯ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅವರು. ಪೊಲೀಸರು ಬಂಧಿಸುವಂತಿದ್ದರೆ ಮೊದಲು ಶಾಸಕರನ್ನು ಬಂಧಿಸಬೇಕಿತ್ತು. *ಮೆಡಿಕಲ್ ಕಾಲೇಜಿಗಾಗಿ ಕರವೇ ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ಚಳವಳಿಗಳಿಂದ ಕಂಗೆಟ್ಟಿರುವ ಶಾಸಕರು ಪೊಲೀಸರನ್ನು ಛೂ ಬಿಟ್ಟು ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಇಂಥ ಗೊಡ್ಡು ಬೆದರಿಕೆಗಳಿಗೆ ಕರವೇ ಅಂಜುವ, ಅಳುಕುವ ಮಾತೇ ಇಲ್ಲ. ನೀವು ದೌರ್ಜನ್ಯವೆಸಗಿದಷ್ಟೂ ಹೋರಾಟ ತೀವ್ರಗೊಳ್ಳುತ್ತದೆ. ಮೆಡಿಕಲ್ ಕಾಲೇಜು ಅನುದಾನಕ್ಕಾಗಿ ನಡೆಯುತ್ತಿರುವ ಹೋರಾಟ ಮುಂದುವರೆಯಲಿದೆ ಎಂದಿದೆ.




