ಪದಗಳ ನಿಷೇಧದ ಬಳಿಕ ಇಂದು ಪ್ರತಿಭಟನೆ,ಧರಣಿಗಳಿಗೆ ಬ್ರೇಕ್: ಆಕ್ರೋಶಕ್ಕೆ ಕಾರಣವಾದ ಸಂಸತ್ತಿನ‌ ಸುತ್ತೋಲೆ

4 years ago

ದೆಹಲಿ: ಸಂಸತ್ ಭವನದ ಆವರಣದಲ್ಲಿ ವಿರೋಧ ಪಕ್ಷಗಳ ಧರಣಿ, ಉಪವಾಸ ಸತ್ಯಾಗ್ರಹ ಪ್ರತಿಭಟನೆಗಳಿಗೆ ಕಡಿವಾಣ ಹಾಕಲು ರಾಜ್ಯಸಭಾ ಸಚಿವಾಲಯ ಮುಂದಾಗಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ಸಂಸತ್ ಭವನದ ಆವರಣದಲ್ಲಿ ಇನ್ನು ಮುಂದೆ ಪ್ರತಿಭಟನೆ, ಧರಣಿ, ಉಪವಾಸ ಅಥವಾ ಧಾರ್ಮಿಕ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ರಾಜ್ಯಸಭಾ ಸಚಿವಾಲಯದ ಹೊಸ ಸುತ್ತೋಲೆ ತಿಳಿಸಿದೆ.

ಸಂಸತ್ತಿನಲ್ಲಿ ಕೆಲವು ಪದಗಳನ್ನು ಬಳಸಿದ್ದಕ್ಕೆ  “ಗ್ಯಾಗ್ ಆರ್ಡರ್” ಬಗ್ಗೆ ಪ್ರತಿಪಕ್ಷ ಕಾಂಗ್ರೆಸ್ ಸಹಿತ ವಿರೋಧ ಪಕ್ಷದ ಆಕ್ರೋಶದ ನಡುವೆಯೇ ಧರಣಿ ಅಥವಾ ಪ್ರತಿಭಟನೆಗಳ ಕುರಿತು ಸುತ್ತೋಲೆ ಬಂದಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಜುಲೈ 18 ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಅವರು ಬಿಡುಗಡೆ ಮಾಡಿದ ಹೊಸ ಬುಲೆಟಿನ್ ನಲ್ಲಿ  ಸದಸ್ಯರ ಸಹಕಾರವನ್ನು ಕೋರಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ  ರಾಜ್ಯಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು ಸರಕಾರದ ಈ ಸುತ್ತೋಲೆಯ ವಿರುದ್ಧ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಜುಲೈ 14 ರಂದು ಹೊರಡಿಸಲಾದ ಸುತ್ತೋಲೆಯ ಪ್ರತಿಯನ್ನು ಹಂಚಿಕೊಂಡ ರಮೇಶ್ ಅವರು “ವಿಶ್ವಗುರು ಅವರ ಹೊಸ ದಾಳಿ  – ಧರ್ನಾ ಮಾನಾ ಹೈ!,” ಎಂದು ಟ್ವೀಟಿಸಿದರು.

ವಿರೋಧ ಪಕ್ಷದ ಸದಸ್ಯರು ಈ ಹಿಂದೆ ಸಂಸತ್ತಿನ ಸಂಕೀರ್ಣದ ಒಳಗೆ ಪ್ರತಿಭಟನೆ ನಡೆಸಿದ್ದರು ಮತ್ತು ಸಂಕೀರ್ಣದ ಒಳಗಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯ ಹೊರಗೆ ಪ್ರತಿಭಟನೆ ಹಾಗೂ  ಉಪವಾಸಗಳನ್ನು ಸಹ ನಡೆಸಿದ್ದರು. ಇದು ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು.

Leave a Reply