ಬೆಂಗಳೂರು: ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ನೀಡಲಾಗುತ್ತಿದ್ದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಗಣ್ಯ ಮಹನೀಯರುಗಳಿಗೆ ಅಪಮಾನ ಮಾಡುವ ಸಲುವಾಗಿ ಬದಲಾವಣೆಯನ್ನು ಮಾಡಿ ಸೇಡಿನ ರಾಜಕಾರಣವನ್ನು ಬಿ.ಜೆ.ಪಿ. ಪಕ್ಷದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಅವರ ಆಡಳಿತ ವೈಖರಿ ಖಂಡಿಸಿ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ಕ.ವಿ.ಕಾ. ಅಧ್ಯಕ್ಷ ಎಸ್.ಮನೋಹರ್ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾದ ಜನಾರ್ಧನ್, ಆನಂದ್ ಮತ್ತು ಕೆ.ಪಿ.ಸಿ.ಸಿ. ವಕ್ತಾರ ಸಲೀಮ್ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರಾದ ಇ.ಶೇಖರ್, ಪ್ರಕಾಶ್, ಪುಟ್ಟರಾಜು, ಚಂದ್ರಶೇಖರ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಎಸ್.ಮನೋಹರ್ ಮಾತನಾಡಿ, ಹಾಕಿ ಮಾಂತ್ರಿಕ ಧ್ಯಾನ್ ಚಂದ್ ರವರು ಮತ್ತು ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದೇಶಕ್ಕೆ ಅಪೂರ್ವ ಕೊಡುಗೆ ಮತ್ತು ದೇಶಕ್ಕಾಗಿ ಬಲಿದಾನ ಕೊಟ್ಟ ಮಾಜಿ ಪ್ರಧಾನಿ ರಾಜೀವ್ ಗಾಂಧಿರವರು ಸ್ಮರಣೀಯ ಮಹನೀಯರು. ಒಂದು ಪ್ರಶಸ್ತಿಗೆ ಇಟ್ಟ ಹೆಸರನ್ನ ಬದಲಾಯಿಸಿ, ಇನ್ನೊಬ್ಬ ಮಹನೀಯರ ಹೆಸರು ಇಡುವುದು ಇಬ್ಬರಿಗೂ ಅಪಮಾನ ಮಾಡಿದಂತೆ. ಪ್ರಧಾನಿ ನರೇಂದ್ರ ಮೋದಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಗುಜರಾತ್ ನ ಮೊಟೇರಾ ಕ್ರಿಕೆಟ್ ಸ್ಟೇಡಿಯಂ ಅನ್ನು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಅಂತ ಬದಲಾಯಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರೇನು ಕ್ರಿಕೆಟ್ ಆಟಗಾರರೇ? ಎಂಬ ಪ್ರಶ್ನೆ ದೇಶದ ಜನರಿಗೆ ಕಾಡುತ್ತಿದೆ ಎಂದರು.
ಇನ್ನು ಹೆಸರು ಬದಲಾವಣೆ ಮಾಡುವುದೇ ಜೀವನದ ಏಕೈಕ ಸಾಧನೆ ಎಂದುಕೊಂಡಿರುವ ಪ್ರಧಾನಿ ಮೋದಿಯವರು ಇಂತಹ ಹುಸಿ ಪ್ರಚಾರ ತಂತ್ರಗಳನ್ನು ಬದಿಗೊತ್ತಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಆಹಾರ ಸಾಮಗ್ರಿಗಳ ಬೆಲೆಯನ್ನು ತಗ್ಗಿಸಿ ತಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಲಿ ಎಂದು ಸವಾಲೆಸೆದರು.



