ಭವಿಷ್ಯನಿಧಿ, ಗ್ರಾಚೂಟಿಗಳು ಕಾರ್ಮಿಕರ ಶಾಸನಬದ್ಧ ಹಕ್ಕುಗಳು

2 years ago

ಉಪಕಾರ್ಮಿಕ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಹೇಳಿಕೆ

ಬಳ್ಳಾರಿ: ಯಾವುದೇ ಕೈಗಾರಿಕೆ, ಉದ್ಯಮ, ಅಂಗಡಿ ಮತ್ತು ಮುಗ್ಗಟ್ಟುಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಕಾನೂನು ನಿಯಮಾವಳಿಗಳ ಅನುಸಾರ ಸಿಗಬೇಕಾದ ಕನಿಷ್ಠ ವೇತನ, ಭವಿಷ್ಯ ನಿಧಿ, ಗ್ರಾಚೂಟಿಗಳನ್ನು ಪಡೆದುಕೊಳ್ಳುವುದು ಕಾರ್ಮಿಕರ ಶಾಸನಬದ್ದ ಹಕ್ಕಾಗಿರುತ್ತದೆ ಎಂದು ಕಲಬುರಗಿ ವಲಯದ ಉಪ‌ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂಧಿಹಟ್ಟಿ ಹೇಳಿದರು.

ಅವರು ಬಳ್ಳಾರಿ ಜಿಲ್ಲಾ ಸಿರುಗುಪ್ಪದಲ್ಲಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ (ರಿ) ಏರ್ಪಡಿಸಿದ್ದ ಮಿಲ್,ಗೋಡೌನ್,ವೇರ್ ಹೌಸ್ ಕಾರ್ಮಿಕರ ಎರಡನೇ ರಾಜ್ಯ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ರಾಜ್ಯ ಸರ್ಕಾರ ಲೋಡಿಂಗ್ ಹಾಗೂ ಅನ್‌ಲೋಡಿಂಗ್ ಕಾರ್ಮಿಕರು ಮತ್ತು ಇತರೆ ಕಾರ್ಮಿಕರಿಗೆ ಅನ್ವಯಿಸಿ 2022 ರಿಂದಲೇ ಕನಿಷ್ಠ ವೇತನ ಜಾರಿಗೊಳಿಸಿದೆ‌. ಅದರ ಜತೆ ತುಟ್ಟಿ‌ಭತ್ಯೆಯನ್ನು ಸೇರಿ ವೇತನ ಪಡೆಯಲು ಕಾರ್ಮಿಕರು ಅರ್ಹರಿದ್ದಾರೆ. ಮಿಲ್, ಗೋಡೌನ್, ವೇರ್ ಹೌಸ್ ಮೊದಲಾದ ಕಡೆ ಹತ್ತು ಜನ ಕಾರ್ಮಿಕರು ಕೆಲಸ ಮಾಡುವ  ಭವಿಷ್ಯನಿಧಿ, ವಿಮಾಸೌಲಭ್ಯ ಹಾಗೂ ಗ್ರಾಚೂಟಿ ಸೌಲಭ್ಯಗಳನ್ನು ಕೆಲವು ನಿಯಮಾನುಸಾರ ಪಡೆಯಲು ಕಾರ್ಮಿಕರು ಅರ್ಹರಿರುತ್ತಾರೆ. ಹಾಗೊಂದು ವೇಳೆ ಅದು ಉಲ್ಲಂಘನೆಯಾದರೆ ಕಾರ್ಮಿಕ ಇಲಾಖೆ‌ ಮೂಲಕ ಸೂಕ್ತ ಪರಿಹಾರ ಪಡೆದುಕೊಳ್ಳಲು ಕಾರ್ಮಿಕರು ಮುಂದಾಗಬೇಕು ಎಂದು ಕರೆ ನೀಡಿದರು.

ಸಮಾವೇಶವನ್ನು ದೀಪ ಬೆಳಗಿಸುವುದರ ಮೂಲಕ ಸ್ಥಳೀಯ ಶಾಸಕ ‌ನಾಗರಾಜ್ ಉದ್ಘಾಟಿಸಿ ರಾಜ್ಯ ಸರ್ಕಾರ ಅಸಂಘಟಿತರಾಗಿರುವ ಹಮಾಲಿ ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕ ಸಚಿವರ ಜತೆ ನಾನು ಚರ್ಚಿಸುವುದಾಗಿ ಭರವಸೆ ನೀಡಿದರು.

ರಾಜ್ಯಾಧ್ಯಕ್ಷ ಕೆ. ಮಹಾಂತೇಶ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. CITU ಜಿಲ್ಲಾಧ್ಯಕ್ಷ ಸತ್ಯಬಾಬು, ರಾಜ್ಯ ಸಂಚಾಲಕ ಎಚ್.ತಿಪ್ಪಯ್ಯ ಮುಂತಾದವರು ಮಾತನಾಡಿದರು.

ನಂತರ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮುಖಂಡರು ಹಮಾಲಿ ಕಾರ್ಮಿಕರ ಸಮಸ್ಯೆಗಳು ಪರಿಹಾರಗಳ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ಶಾಸಕರು, ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ಸಮಾವೇಶ ತೀರ್ಮಾನಿಸಿತು. ರಾಜ್ಯ ಪದಾಧಿಕಾರಿಗಳು, ವಿವಿಧ ವಿಭಾಗದ ಮುಖಂಡರು ಹಾಗೂ ಸಾವಿರದಷ್ಟು ಕಾರ್ಮಿಕರು ಭಾಗವಹಿಸಿದ್ದರು.

Leave a Reply