ಚುನಾವಣೆಗಳಲ್ಲಿ ಪಾಲ್ಗೊಂಡು ಪಕ್ಷಕ್ಕೆ ರಾಜಕೀಯ ಶಕ್ತಿ ನೀಡಿ: ಅಪ್ಸರ್ ಕೊಡ್ಲಿಪೇಟೆ

11 months ago

ಮಂಗಳೂರು: ಉಡುಪಿ ಜಿಲ್ಲಾ ಎಸ್‌ಡಿಪಿಐ ಉಚ್ಚಿಲ ಘಟಕದ ವತಿಯಿಂದ “ದಿಟ್ಟ ನಾಯಕತ್ವ – ಬಲಿಷ್ಠ ಕಾರ್ಯಕರ್ತ” ಎಂಬ ಘೋಷವಾಕ್ಯದಡಿ ಕಾರ್ಯಕರ್ತರ ಹಾಗೂ ಸದಸ್ಯರ ಸಮಾವೇಶ ಉಚ್ಚಿಲದಲ್ಲಿ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಭಾಗವಹಿಸಿ ಮಾತನಾಡಿ, ಎಸ್‌ಡಿಪಿಐ ಕೇವಲ ರಾಜಕೀಯ ಪಕ್ಷವಲ್ಲ, ಇದು ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳಿಗಾಗಿ ನಡೆಯುವ ಒಂದು ಶಿಸ್ತಿನ ಆಂದೋಲನವಾಗಿದೆ ಎಂದರು.

ಈ ಆಂದೋಲನದ ಹೃದಯ ಶಿಸ್ತಿನ ಕಾರ್ಯಕರ್ತರು ಮತ್ತು ಬಲಿಷ್ಠ ಮಾರ್ಗದರ್ಶಕ ನಾಯಕತ್ವ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ನಾವು ಯುವ ಶಕ್ತಿಯ ಧೈರ್ಯಶಾಲಿ ಹೆಜ್ಜೆಗಳನ್ನು ಕಾಣುತ್ತಿದ್ದೇವೆ.  ಈ ಸಮಾವೇಶವೂ ಇದೇ ದೃಷ್ಟಿಕೋನದ ಸ್ಪಷ್ಟ ಪ್ರತಿಬಿಂಬವಾಗಿದೆ ಎಂದರು.

ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಪಾಲ್ಗೊಂಡು ರಾಜಕೀಯವಾಗಿ ಪಕ್ಷವನ್ನು ಬಲಿಷ್ಠಗೊಳಿಸಿ ಪಕ್ಷಕ್ಕೆ ರಾಜಕೀಯ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.

ನಾಯಕತ್ವ ಎನ್ನುವುದು ಹುದ್ದೆಯಲ್ಲ, ಅದು ಜವಾಬ್ದಾರಿ. ನಾಯಕನಲ್ಲಿ ಕಾರ್ಯಕರ್ತರ ಹೃದಯದಲ್ಲಿ ಸ್ಪೂರ್ತಿ ಹುಟ್ಟಿಸಬಲ್ಲ ಶಕ್ತಿ ಇರಬೇಕು. ನಮ್ಮ ಭವಿಷ್ಯ ಕಟ್ಟುವ ಮಾರ್ಗದಲ್ಲಿ ಶ್ರದ್ಧೆ, ಶಿಸ್ತಿನ ಶಕ್ತಿ, ಮತ್ತು ನ್ಯಾಯಕ್ಕಾಗಿ ನಡೆಯುವ ಪ್ರಾಮಾಣಿಕ ಹೋರಾಟ ಮುಖ್ಯ ಎಂದರು.

ನಮ್ಮ ಹೋರಾಟ ಬಡವರ ಶಕ್ತಿಯಾಗಿ, ಶೋಷಿತರ ಧ್ವನಿಯಾಗಿ, ದಲಿತರ ಕನಸಿನ ಪ್ರತಿರೂಪವಾಗಿ ಮುಂದುವರೆಯಬೇಕು. ಬಲಿಷ್ಠ ನಾಯಕತ್ವ ಮತ್ತು ಬದ್ಧ ಕಾರ್ಯಕರ್ತರು ಸಮಾಜದಲ್ಲಿ ಹೊಸ ಬೆಳಕು ತರಲಿದ್ದಾರೆ ಎಂಬ ನಂಬಿಕೆ ನನ್ನದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಝಾಕ್ ವೈ ಎಸ್, ಜಿಲ್ಲಾ ಉಪಾಧ್ಯಕ್ಷ ಹನೀಫ್ ಮೂಳೂರು, ಕಾಪು ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ಖಾದರ್, ಉಚ್ಚಿಲ ಗ್ರಾಮ ಸಮಿತಿ ಅಧ್ಯಕ್ಷ ಮಜೀದ್ ಪೊಲ್ಯ, ಕಾಪು ಪುರಸಭೆ ಸದಸ್ಯ ನೂರುದ್ದೀನ್, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಅಜೀಜ್ ಮತ್ತು ಆಸಿಫ್ YC ಸೇರಿದಂತೆ ಪಕ್ಷದ ಹಿರಿಯರು, ಕಾರ್ಯಕರ್ತರು ಮತ್ತು ಸದಸ್ಯರು ಹಾಜರಿದ್ದರು.

Leave a Reply