ಪ್ರಚೋದನಕಾರಿ ಹೇಳಿಕೆ ನೀಡಿದವರ ವಿರುದ್ಧ ಕ್ರಮಕ್ಕೆ ಸೂಚಿಸಿದ ಪರಮೇಶ್ವರ್

1 year ago

ಬೆಂಗಳೂರು: ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ ಎಂದು ಕರೆ ನೀಡಿದ ಮಠಾಧೀಶರ ವಿರುದ್ಧ ರಾಜ್ಯ ಸರ್ಕಾರ ಗರಂ ಆಗಿದೆ. ಪ್ರಚೋದನೆ ನೀಡಿದ ಆರೋಪದಲ್ಲಿ ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವ ಪರಮೇಶ್ವರ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ವಕ್ಫ್ ಆಸ್ತಿ ವಿವಾದ ಕುರಿತಂತೆ ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಫಜಲಪುರ ತಾಲ್ಲೂಕಿನ ಮಾಶಾಳದ ಶ್ರೀ ಮುರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಭಟನೆ ವೇಳೆ, ‘ಮಕ್ಕಳ ಕೈಯಲ್ಲಿ ಪೆನ್ನು ಬದಲು ತಲ್ವಾರ್ ಕೊಡಿ’ಎಂದು ಕರೆ ನೀಡಿದ್ದರು. ಪೆನ್ನಿನ ಬದಲು ತಲ್ವಾರ್ ಇದ್ದರೆ ತಮ್ಮ ಆಸ್ತಿಗಳನ್ನು ಅವರೇ ರಕ್ಷಿಸಿಕೊಳ್ಳುತ್ತಾರೆ ಎಂದು ಪೋಷಕರಿಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

ಈ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪರಮೇಶ್ವರ್, ಮಠಾಧೀಶರಾದ ಮರುಳಾರಾಧ್ಯ ಸ್ವಾಮೀಜಿಗಳು ಧರ್ಮವಾಗಿ ನಡೆದುಕೊಳ್ಳಬೇಕು. ಪ್ರಚೋದನಕಾರಿ ಮಾತುಗಳನ್ನು ಆಡಬಾರದು. ಸ್ವಾಮೀಜಿ ಸಮಾಜವನ್ನು ತಿದ್ದಬೇಕು. ದಾರಿ ತಪ್ಪಿದರೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು. ಅದನ್ನು ಬಿಟ್ಟು ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುವುದು ತರವಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಕಾವಿ ಬಟ್ಟೆ ಹಾಕಿದವರು, ಮುಸ್ಲಿಂ ಸೇರಿದಂತೆ ಯಾವುದೇ ಧರ್ಮದ ಮುಖಂಡರಾದರೂ ನಿಷ್ಪಕ್ಷಪಾತವಾಗಿರಬೇಕು. ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು.

ಕೋವಿಡ್‌ ಹಗರಣದಲ್ಲಿ ನಾವು ಯಾವುದೇ ರೀತಿಯ ಆಯ್ಕೆ ರಾಜಕಾರಣ ಮಾಡುತ್ತಿಲ್ಲ. 2023ರ ಚುನಾವಣೆಯಲ್ಲಿ ಕೋವಿಡ್‌ ಸಂದರ್ಭದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪ ಮಾಡಿದ್ದೆವು. ಅದರ ತನಿಖೆ ನಡೆಸುವುದಾಗಿಯೂ ತಿಳಿಸಿದ್ದೆವು. ಅದರಂತೆ ಜಸ್ಟೀಸ್ ಕುನ್ನಾ ಸಮಿತಿ ರಚಿಸಲಾಗಿದ್ದು, ಮಧ್ಯಂತರ ವರದಿ ಬಂದಿದೆ. ಪಿಪಿಇ ಕಿಟ್‌ ಖರೀದಿಯಲ್ಲಿ ಸರ್ಕಾರಕ್ಕೆ 14 ಕೋಟಿ ರೂ. ನಷ್ಟವಾಗಿದೆ ಎಂಬ ವರದಿಯಿದೆ. ಇದರ ಅಧ್ಯಯನಕ್ಕೆ ಸಂಪುಟ ಉಪಸಮಿತಿ ರಚಿಸಲಾಗಿದೆ. ಉಪಚುನಾವಣೆ ಬಳಿಕ ಸಭೆ ನಡೆಸಿ ವರದಿ ನೀಡಲಾಗುವುದು. ಅನಂತರ ಆ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

Leave a Reply