ಬೆಂಗಳೂರು: ಕರ್ನಾಟಕ ಸದ್ಯಕ್ಕೆ ಐಟಿ, ಬಿಟಿ, ಸೆಮಿ ಕಂಡಕ್ಟರ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ನಂ.1 ಸ್ಥಾನವನ್ನು ಅಲಂಕರಿಸುವುದು ನಮ್ಮ ಗುರಿಯಾಗಿದ್ದು, ಕೋವಿಡ್ ನಂತರದ ಕಾಲಘಟ್ಟವು ಇದಕ್ಕೆ ಸೂಕ್ತ ವಾತಾವರಣವನ್ನು ಸೃಷ್ಟಿಸಿದೆ ಎಂದು ಐಟಿ ಮತ್ತು ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು
ದಕ್ಷಿಣ ಕೊರಿಯಾದ ಏಷ್ಯನ್ ಸೊಸೈಟಿ ಫಾರ್ ಇನ್ನೋವೇಶನ್ ಅಂಡ್ ಪಾಲಿಸಿ (ಎಎಸ್ಎಪಿ) ಮತ್ತು ಎಂ ಎಸ್ ರಾಮಯ್ಯ ಯೂನಿವರ್ಸಿಟಿ ಫಾರ್ ಅಡ್ವಾನ್ಸ್ಡ್ ಸ್ಟಡೀಸ್ ಸಹಯೋಗದೊಂದಿಗೆ ಭಾರತೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ 12ನೇ ವರ್ಷದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಕಲಿಕೆ ಮತ್ತು ಉದ್ಯಮಗಳಿಗೆ ಬೇಕಾದ ಆಧುನಿಕ ಕೌಶಲಗಳನ್ನು ನಮ್ಮ ಯುವಜನರಿಗೆ ಕಲಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಕಳೆದ ಮೂರು ವರ್ಷಗಳಲ್ಲಿ 15 ಸಾರ್ವಜನಿಕ ವಿ.ವಿ.ಗಳನ್ನು ಸ್ಥಾಪಿಸಲಾಗಿದೆ ಎಂದರು.
ಎನ್ಇಪಿ ಜಾರಿಯಲ್ಲಿ ರಾಜ್ಯ ಮುಂಚೂಣಿಯಲ್ಲಿ ಇದ್ದು, ಇದರಲ್ಲಿ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಉನ್ನತ ಶಿಕ್ಷಣ ವಲಯದಲ್ಲಿ ಸಂಪೂರ್ಣ ಡಿಜಿಟಲೀಕರಣ ಮತ್ತು ಆಧುನಿಕ ತಂತ್ರಾಂಶಗಳ ಅಳವಡಿಕೆಯ ವ್ಯವಸ್ಥೆ ಜಾರಿಗೆ ಬಂದಿದೆ ಎಂದರು.
ಉದ್ಯಮಗಳ ಬೆಳವಣಿಗೆಗೆ ಸಹಭಾಗಿತ್ವ ಮತ್ತು ಪಾಲುದಾರಿಕೆ ಅತ್ಯಗತ್ಯವಾಗಿವೆ. ಇದಕ್ಕಾಗಿ ಸರಕಾರವು ಹಲವು ನೀತಿಗಳನ್ನು ಜಾರಿಗೆ ತಂದಿದೆ. ಕರ್ನಾಟಕ ಇಡುತ್ತಿರುವ ಹೆಜ್ಜೆಗಳು ಇಂದು ರಾಷ್ಟ್ರೀಯ ಮಾದರಿಗಳಾಗುತ್ತಿವೆ. ಹಲವು ರಾಜ್ಯಗಳು ಇನ್ನೂ ಚಿಂತನೆಯನ್ನು ಮಾಡದೆ ಇರುವಾಗ ನಾವು ಸ್ಪಷ್ಟ ನೀತಿಗಳೊಂದಿಗೆ ಹೊರಬರುತ್ತಿದ್ದೇವೆ. ಇದರಿಂದ ರಾಜ್ಯ ನಾವೀನ್ಯತೆ ಮತ್ತು ಸಮರ್ಥ ನೀತಿಗಳ ತೊಟ್ಟಿಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೊರಿಯಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಅಧ್ಯಕ್ಷ ಡಾ.ಜೇಸೂ ಕಿಮ್, ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಪ್ರಹ್ಲಾದ್ ರಾಮರಾವ್, ಡಾ.ಬಾಲಸುಬ್ರಹ್ಮಣ್ಯಂ, ಎಎಸ್ಐಪಿ ಅಧ್ಯಕ್ಷ ಯಂಗ್ ಜೂ ಕೂ, ಅತುಲ್ ಬಾತ್ರಾ ಮೊದಲಾದವರು ಹಾಜರಿದ್ದರು.



