ಗ್ರಾಮೀಣ ಜನರು ತಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಬಾರ್ಡ್ ನೆರವು

2 years ago

ಲೀಡ್‍ಬ್ಯಾಂಕ್ ಮ್ಯಾನೆಜರ್ ಪ್ರಭುದೇವ ಎಂ. ಎನ್ ಹೇಳಿಕೆ

ಧಾರವಾಡ:  ಗ್ರಾಮೀಣ ಭಾಗದ ಜನರು ತಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಬಾರ್ಡ್ ಸಂಸ್ಥೆಯ ಕಿರು ಉದ್ಯಮ ಅಭಿವೃಧ್ದಿ ತರಬೇತಿಯ ಮೂಲಕ ನೀಡಲಾಗುತ್ತದೆ. ತರಬೇತಿ ಪಡೆದ ಗ್ರಾಮೀಣ ಭಾಗದ ಜನರು ಸ್ವಯಂ ಆಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು  ಧಾರವಾಡ ಜಿಲ್ಲಾ ಲೀಡ್‍ಬ್ಯಾಂಕ್‍ನ ಮ್ಯಾನೇಜರ್ ಪ್ರಭುದೇವ ಎಂ. ಎನ್. ಹೇಳಿದರು.

ಬೆಂಗಳೂರಿನ ನಬಾರ್ಡ್ ಮತ್ತು ಧಾರವಾಡದ ನಾಭ್‍ಫಿನ್ಸ್ (ನಬಾರ್ಡ್ ಫಿನಾನ್ಸಿಯಲ್ ಸರ್ವಿಸ್ ಲಿ.)ನ ಸಹಯೋಗದಲ್ಲಿ ಕಲಘಟಕಿ ತಾಲೂಕಿನ ಸುರಶೆಟ್ಟಿಕೋಪ್ಪದ  ಸರ್ವೋದಯ ಮಹಾಸಂಘದ ಗ್ರಾಮಚೇತನ  ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಹೈನುಗಾರಿಕೆ 10 ದಿನಗಳ ತರಬೇತಿಯ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿ ಮಾತನಾಡಿದರು.

ಸುರಶೇಟ್ಟಿಕೋಪ್ಪ ಹಾಗು ನಾಗನೂರು ಗ್ರಾಮದ 30 ಕುಟುಂಬದ ಮಹಿಳೆಯರಿಗೆ ಬೆಂಗಳೂರಿನ ನಬಾರ್ಡ್ ಮತ್ತು ಧಾರವಾಡ ನಾಭ್‍ಫಿನ್ಸ್, ಸುರಶೆಟ್ಟಿಕೋಪ್ಪದ ಸರ್ವೋದಯ ಮಹಾಸಂಘದ ಮೂಲಕ ಮೇ 16 ರಿಂದ ಮೇ 25, 2024 ವರೆಗೆ 10 ದಿನಗಳ ಹೈನುಗಾರಿಕೆ ತರಬೇತಿಯನ್ನು ನೀಡಲಾಗಿದೆ ಎಂದು ಹೇಳಿದರು.

ನಬಾರ್ಡ್ ಸಂಸ್ಥೆಯ ಧಾರವಾಡ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ್ ಕಾಂಬ್ಳೆ ಅವರು ಮಾತನಾಡಿ, ನಬಾರ್ಡ್ ಸಂಸ್ಥೆಯು ಕಳೆದ  10 ದಿನಗಳ ತರಬೇತಿಗೆ ಸುಮಾರು ಒಂದು ಲಕ್ಷ ಅನುದಾನ ವಿನಿಯೋಗಿಸಿದ್ದು, ಈ ತರಬೇತಿಗಾಗಿ ಸುಮಾರು 3 ತಿಂಗಳ ಸಿದ್ದತೆಗಳನ್ನು ಮಾಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಮಹಿಳಾ ಫಲಾನುಭವಿಗಳ ಆಯ್ಕೆ ನಂತರ ಅವರ ಸಾಲ ಮರುಪಾವತಿ ಸಾಮರ್ಥ್ಯ ಮತ್ತು ಚರಿತ್ರೆ ನೋಡುವ ಸಿಬಿಲ್ ಸ್ಕೋರ್ ಪರಿಶೀಲನೆ ಮಾಡಲಾಯಿತು ಎಂದರು.

10 ದಿನಗಳ ಕಾಲ ತರಬೇತಿ ನೀಡಲು ಸೂಕ್ತ ತಜ್ಞರನ್ನು ಆಯ್ಕೆ ಮಾಡಿ ತರಬೇತಿ ಆಯೋಜಿಸಲಾಗಿತ್ತು. ತರಬೇತಿಯಲ್ಲಿ ಜಾನುವಾರು ತಳಿ ಆಯ್ಕೆ, ಜಾನುವಾರು ನಿರ್ವಹಣೆ, ಬರುವ ಕಾಯಿಲೆ ಮತ್ತು ಔಷಧೋಪಚಾರ, ಕೊಟ್ಟಿಗೆ ರಚನೆ ನಿರ್ವಹಣೆಗಳ ಕುರಿತು ತಾಂತ್ರಿಕ ಸಿಬ್ಬಂದಿಯಿಂದ ಮಾಹಿತಿ ಮತ್ತು ಕೃಷಿ ಮಹಾವಿದ್ಯಾಲಯಕ್ಕೆ ಅಧ್ಯಯನ ಪ್ರವಾಸ ಕೈಗೊಂಡು ಪ್ರಾತ್ಯಕ್ಷತೆ ಮಾಹಿತಿಯನ್ನು ನೀಡಲಾಗಿದೆ ಎಂದು ಹೇಳಿದರು.     

ತರಬೇತಿ ಪಡೆದ 26 ಜನ ಸದಸ್ಯರಿಗೆ ಧಾರವಾಡದ ನಾಭ್‍ಫಿನ್ಸ್‍ವತಿಯಿಂದ ಪ್ರಮಾಣ ಪತ್ರವನ್ನು ವಿತರಿಸಲಾಗಿದೆ. ತರಬೇತಿ ಪಡೆದ ಸದಸ್ಯರಿಗೆ ರೂ 12.40 ಲಕ್ಷ ಮೊತ್ತ ಸಾಲವನ್ನು ವಿತರಿಸಲಾಗಿದ್ದು, ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಡಿಜಿಟಲ್ ಬ್ಯಾಂಕಿಂಗ್, ಸುರಕ್ಷಾ ಭಿಮಾ ಯೋಜನೆ ಮತ್ತು ಜೀವನ್ ಭಿಮಾ ಯೋಜನೆಯ ಅನುಷ್ಠಾನಗೊಳಿಸಲಾಗಿದೆ ಎಂದರು.

ನಾಭ್‍ಫಿನ್ಸ್‍ನ ಪ್ರಾದೇಶಿಕ ವ್ಯವಸ್ಥಾಪಕ ಶಿವಾನಂದ ಎಂ. ನಂದಗಾಂವ್ಕರ ಅವರು ಮಾತನಾಡಿ, ತರಬೇತಿ ಒಂದು ಹಂತವಾದರೆ ಅದರ ಅನುಸ್ಠಾನ 2 ನೇಯ ಹಂತದಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದರು.

ಸರ್ವೋದಯ ಮಹಾಸಂಘದ   ಸಿ.ಇ.ಒ  ಜಿ. ವೀರಣ್ಣ, ಸರ್ವೋದಯ ಮಹಾಸಂಘದ ಅಧ್ಯಕ್ಷ ಆರ್.ಎಸ್. ಭಾವಿಕಟ್ಟೆ, ಸರ್ವೋದಯ ಮಹಾಸಂಘದ ನಿರ್ದೇಶಕರಾದ ನಿಂಗಯ್ಯ ಹಿರೆಮಠ, ಸೋಮಶೇಖರ್ ಮತ್ತು ಸದಾನಂದ ಮೋರಬದ ಹಾಗೂ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ರವಿ ನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸರ್ವೋದಯ ಮಹಾಸಂಘ ಸದಸ್ಯರು, ತರಬೇತುದಾರರು, ಇತರರು ಭಾಗವಹಿಸಿದ್ದರು.

Leave a Reply