ಬೆಂಗಳೂರು: ದೇಶದ ಸಂಪತ್ತಿನಲ್ಲಿ ಮುಸ್ಲಿಂರಿಗೂ ಪಾಲಿದೆ ಎಂಬ ಸಿದ್ದರಾಮಯ್ಯರ ಹೇಳಿಕೆಯಲ್ಲಿ ತಪ್ಪೇನಿದೆ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಕೊಡುವುದಾಗಿ ಕಾರ್ಯಕ್ರಮ ಒಂದರಲ್ಲಿ ಘೋಷಿಸಿದ್ದರು. ಇದಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿವಾದದ ಸ್ವರೂಪ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಏನಾದರೂ ದೇಶದ ಸಂಪತ್ತೆಲ್ಲಾ ಮುಸ್ಲಿಂರಿಗೇ ಸೇರಬೇಕು ಎಂದಿದ್ದಾರಾ.? ಹಾಗೇನಾದರೂ ಹೇಳಿಕೆ ಕೊಟ್ಟಿದಿದ್ದರೆ JDS-BJPಯವರು ವಿರೋಧಿಸುವುದರಲ್ಲಿ ಅರ್ಥವಿರುತಿತ್ತು. JDS-BJPಯವರ ಪ್ರಕಾರ ಮುಸ್ಲಿಂರಿಗೆ ಈ ದೇಶದ ಸಂಪತ್ತಿನಲ್ಲಿ ಪಾಲು ಇಲ್ಲವೆ? ಈ ದೇಶದಲ್ಲಿರುವ ಮುಸ್ಲಿಂರು ಇವರ ಪಾಲಿಗೆ ಭಾರತೀಯರಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ದೇಶದಲ್ಲಿರುವ ಮುಸ್ಲಿಂರು ಭಾರತೀಯರೇ ಹೊರತು ಅನ್ಯದೇಶದವರಲ್ಲ. ನಮ್ಮ ಸಂವಿಧಾನ ಮುಸ್ಲಿಂರಿಗೂ ಸಮಾನ ಹಕ್ಕು ಕಲ್ಪಿಸಿದೆ. ಹೀಗಾಗಿ ದೇಶದ ಸಂಪತ್ತಿನಲ್ಲಿ ಮುಸ್ಲಿಂರಿಗೂ ಪಾಲಿದೆ ಎಂಬ ಸಿದ್ದಾರಾಮಯ್ಯರ ಹೇಳಿಕೆಯಲ್ಲಿ ಯಾವ ತಪ್ಪೂ ಇಲ್ಲ. ಈಗ ಸಿದ್ದರಾಮಯ್ಯರ ಹೇಳಿಕೆಗೆ ವಿವಾದದ ಸ್ವರೂಪ ನೀಡುತ್ತಿರುವ ಕುಮಾರಸ್ವಾಮಿಯವರಿಗೆ ಮುಸ್ಲಿಂರು ಭಾರತೀಯರು ಅಲ್ಲ ಎನ್ನುವ ಧೈರ್ಯವಿದೆಯೇ? ಎಂದಿದ್ದಾರೆ.
ಚುನಾವಣೆಗೆ ಮುಂಚೆ ಮುಸ್ಲಿಂರನ್ನು ತೊಡೆಯ ಮೇಲೆ ಕೂರಿಸಿಕೊಂಡು ಮುದ್ದಾಡುತ್ತಿದ್ದ HDKಯವರು ಈಗ ಮುಸ್ಲಿಂ ದ್ವೇಷಿಯಾಗಿದ್ದಾರೆ. HDKಯವರ ಈ ಮುಸ್ಲಿಂ ದ್ವೇಷಕ್ಕೆ BJP ಜೊತೆಗಿನ ಸಹವಾಸ ದೋಷವೇ ಕಾರಣ. HDK ಯವರೆ, ಈ ದೇಶದಲ್ಲಿ ಹಿಂದೂ-ಮುಸಲ್ಮಾನರೆಲ್ಲಾ ಒಂದೆ. ಧರ್ಮದ ನಡುವೆ ಬೆಂಕಿ ಹಚ್ಚಿ ದೇಶ ಒಡೆಯುವ BJPಯವರ ಧರ್ಮ ರೋಗ ನಿಮಗೂ ಅಂಟಿದ್ದಕ್ಕೆ ವಿಷಾದವಾಗುತ್ತಿದೆ ಎಂದಿದ್ದಾರೆ.




